ಶ್ರೀನಗರ/ಜಮ್ಮು : ಭಯೋತ್ಪಾದನಾ ಚಟುವಟಿಕೆಗಳನ್ನು ಬೆಂಬಲಿಸುವ ವ್ಯವಸ್ಥೆಗಳನ್ನು ಕಿತ್ತೊಗೆಯುವ ಕಾರ್ಯಾಚರಣೆಯ ಭಾಗವಾಗಿ ರಾಷ್ಟ್ರೀಯ ತನಿಖಾ ದಳವು (ಎನ್ಐಎ) ಶನಿವಾರ ಜಮ್ಮು ಮತ್ತು ಕಾಶ್ಮೀರದ ಎಂಟು ಜಿಲ್ಲೆಗಳ ವಿವಿಧೆಡೆ ದಾಳಿ ನಡೆಸಿತು ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಕಾಶ್ಮೀರದ ಶ್ರೀನಗರ, ಬುದ್ಗಾಂ, ಪುಲ್ವಾಮ, ಶೋಪಿಯಾನ್, ಅವಂತಿಪೋರಾ, ಅನಂತ್ನಾಗ್, ಕುಪ್ವಾರ ಜಿಲ್ಲೆಗಳಲ್ಲಿ ಹಾಗೂ ಜಮ್ಮು ವಿಭಾಗದ ಪೂಂಚ್ ಜಿಲ್ಲೆಗಳಲ್ಲಿ ವ್ಯಾಪಕ ಶೋಧ ನಡೆಸಲಾಯಿತು ಎಂದು ಎನ್ಐಎ ವಕ್ತಾರ ಮಾಹಿತಿ ನೀಡಿದ್ದಾರೆ.
ನಿಷೇಧಿತ ಉಗ್ರ ಸಂಘಟನೆ ಜಮಾತ್– ಎ– ಇಸ್ಲಾಮಿ (ಜೆಇಐ) ಸೇರಿದಂತೆ ಇತರ ನಿಷೇಧಿತ ಭಯೋತ್ಪಾದನಾ ಸಂಘಟನೆಗಳು ಹಾಗೂ ಅಂಗ ಸಂಸ್ಥೆಗಳು ರೂಪಿಸಿದ ಪಿತೂರಿಗಳಲ್ಲಿ ಭಾಗಿಯಾಗಿರುವ ಭೂಗತ ಕಾರ್ಮಿಕರ ಮೇಲಿನ ವಿವಿಧ ಪ್ರಕರಣಗಳಿಗೆ ಸಂಬಂಧಿಸಿದ 12 ಸ್ಥಳಗಳಲ್ಲಿ ದಾಳಿ ನಡೆಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
‘ನೆರವಿನ ಉದ್ದೇಶವನ್ನಿಟ್ಟುಕೊಂಡು ಹಣ ಸಂಗ್ರಹದಲ್ಲಿ ತೊಡಗಿದ್ದ ಜೆಇಐ ಸಂಘಟನೆಯು ವಾಸ್ತವವಾಗಿ ಹಿಜ್ಬುಲ್ ಮುಜಾಹಿದ್ದೀನ್ (ಎಚ್ಎಂ), ಲಷ್ಕರ್ ಎ– ತಯ್ಯಬಾ (ಎಲ್ಇಟಿ)ಗೆ ಹಣ ನೀಡಿ ಭಯೋತ್ಪಾದಕ ಚಟುವಟಿಕೆಗಳಿಗೆ ಉತ್ತೇಜನ ನೀಡುತ್ತಿತ್ತು. 2021ರ ಫೆ. 5ರಂದು ಎನ್ಐಎಯು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆಯೂ ಶೋಧ ನಡೆಸಲಾಯಿತು. ಶೋಧ ಕಾರ್ಯಾಚರಣೆಯ ವೇಳೆ ದಾಖಲೆಗಳು ಹಾಗೂ ಡಿಜಿಟಲ್ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ.’ ಎಂದು ಅವರು ಮಾಹಿತಿ ನೀಡಿದ್ದಾರೆ.
ಜಮ್ಮು–ಕಾಶ್ಮೀರದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ಭಯೋತ್ಪಾದಕ ಸಂಘಟನೆಗಳ ನಾಲ್ವರು ಉಗ್ರರ ವಿರುದ್ಧ ಈ ಹಿಂದೆ ಎನ್ಐಎ ಚಾರ್ಜ್ಶೀಟ್ ದಾಖಲಿಸಿತ್ತು.