ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ವಧರ್ಮ ಸಾಮರಸ್ಯ ಈಗಿನ ಅಗತ್ಯ: ಮೊಹನ್‌ ಭಾಗವತ್‌

ಸಾಮವೇದದ ಉರ್ದು ಅವತರಣಿಕೆ ಬಿಡುಗಡೆ * ಮೊಹನ್‌ ಭಾಗವತ್‌ ಅಭಿಮತ
Last Updated 17 ಮಾರ್ಚ್ 2023, 14:47 IST
ಅಕ್ಷರ ಗಾತ್ರ

ನವದೆಹಲಿ: ಅಧ್ಯಾತ್ಮದ ಸತ್ಯವನ್ನು ಅರಿಯಲು ಜನರು ಭಿನ್ನ ಮಾರ್ಗಗಳನ್ನು ಅನುಸರಿಸುತ್ತಿದ್ದಾರೆ ಎಂದಿರುವ ಆರ್‌ಎಸ್ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರು, ‘ವೇದಗಳ ಸಾರವು ಇದೇ ಆಗಿದೆ. ಬಿಕ್ಕಟ್ಟಿನ ಪ್ರಸ್ತುತ ಸಂದರ್ಭದಲ್ಲಿ ಜಗತ್ತು ಈ ವಾಸ್ತವವನ್ನು ಅರಿಯುವುದು ಅಗತ್ಯ’ ಎಂದು ಪ್ರತಿಪಾದಿಸಿದ್ದಾರೆ.

ನಾಲ್ಕು ವೇದಗಳಲ್ಲಿ ಒಂದಾದ ‘ಸಾಮವೇದ’ದ ಉರ್ದು ಅನುವಾದ ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ‘ವೇದಗಳು ಹಿಂದುತ್ವದ ಮೂಲಭೂತ ಸಾರವಾಗಿವೆ’ ಎಂದು ಹೇಳಿದರು. ‘ಭಿನ್ನ ಧರ್ಮಿಯರ ಪ್ರಾರ್ಥನಾ ವಿಧಾನ ಬೇರೆಯಾಗಿರಬಹುದು. ಆದರೆ, ಗುರಿ ಒಂದೇ ಎಂಬ ಸತ್ಯವನ್ನು ಅರ್ಥಮಾಡಿಕೊಳ್ಳಬೇಕಾಗಿದೆ’ ಎಂದರು.

ತಮ್ಮ ಭಾಷಣದಲ್ಲಿ ಪ್ರಾಚೀನ ಗ್ರಂಥಗಳ ವಿವಿಧ ದೃಷ್ಟಾಂತಗಳನ್ನು ಉಲ್ಲೇಖಿಸಿದ ಅವರು, ‘ಈ ಸಾರವನ್ನೇ ಭಿನ್ನ ಧರ್ಮೀಯರು, ಭಿನ್ನ ಸ್ವರೂಪದಲ್ಲಿ ಗ್ರಹಿಸಿಕೊಳ್ಳುತ್ತಿದ್ದಾರೆ. ನಮ್ಮೆಲ್ಲರನ್ನು ಭಿನ್ನ ಹೆಸರಿನಲ್ಲಿ ಒಬ್ಬರೇ ಮುನ್ನಡೆಸುತ್ತಿದ್ದಾರೆ. ಸರ್ವಧರ್ಮ ಸಾಮರಸ್ಯ ಎಂಬುದು ಈಗಿನ ಅಗತ್ಯವಾಗಿದೆ ಎಂದು ಒತ್ತಿ ಹೇಳಿದರು.

ಆದರೆ, ಈ ಭಿನ್ನತೆಯ ಕಾರಣಕ್ಕೇ ಪರಸ್ಪರ ತಿಕ್ಕಾಟ ಇರಬಾರದು. ಇದು ಎಲ್ಲರೂ ತಿಳಿಯಬೇಕಾದ ವಾಸ್ತವಿಕ ಸಂದೇಶ. ಭಾರತವು ಅನ್ಯರಿಗೆ ನೀಡುವ ಸಂದೇಶವೂ ಇದೇ ಆಗಿದೆ ಎಂದು ಭಾಗವತ್ ಅವರು ಹೇಳಿದರು.

ದೃಷ್ಟಾಂತವೊಂದನ್ನು ಉಲ್ಲೇಖಿಸಿ, ‘ಒಂದು ಬೆಟ್ಟವನ್ನು ಹಲವರು ಹಲವು ಮಾರ್ಗಗಳಿಂದ ಏರಬಹುದು. ಪ್ರತಿಯೊಬ್ಬರೂ ಇನ್ನೊಬ್ಬರ ಹಾದಿ ತಪ್ಪು ಎಂದೇ ಭಾವಿಸಬಹುದು. ಆದರೆ, ಬೆಟ್ಟದ ಮೇಲೆ ನಿಂತು ನೋಡಿದಾಗ ಎಲ್ಲರೂ ಗುರಿಯೂ ಒಂದೇ. ಗುರಿ ಮುಟ್ಟುವತ್ತಲೇ ಏರುತ್ತಿದ್ದಾರೆ ಎಂಬುದು ಗೋಚರವಾಗಲಿದೆ’ ಎಂದರು.

90ರ ದಶಕದಲ್ಲಿ ಜನಪ್ರಿಯ ಹಿಂದಿ ಚಿತ್ರಗಳ ಜೊತೆಗೆ ಕೆಲಸ ಮಾಡಿದ್ದ, ಚಿತ್ರನಿರ್ದೇಶಕ, ಕಥೆಗಾರ ಇಕ್ಬಾಲ್‌ ದುರಾನಿ ಅವರು ವೇದವನ್ನು ಉರ್ದುವಿಗೆ ತರ್ಜುಮೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT