ನವದೆಹಲಿ: ಸಂಸತ್ತಿನ ವಿಶೇಷ ಅಧಿವೇಶನದ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಜವಹರ್ಲಾಲ್ ನೆಹರೂ ಅವರನ್ನು ಸ್ಮರಿಸಿದ್ದಾರೆ.
ಜವಾಹರಲಾಲ್ ನೆಹರೂ, ಲಾಲ್ ಬಹದ್ದೂರ್ ಶಾಸ್ತ್ರಿ, ಪಿ.ವಿ. ನರಸಿಂಹರಾವ್ ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರು ಹೊಂದಿದ್ದ ದೂರದೃಷ್ಟಿಯನ್ನು ಪ್ರಧಾನಿ ಶ್ಲಾಘಿಸಿದ್ದಾರೆ.
ಸಂಸತ್ತಿನ ವಿಶೇಷ ಅಧಿವೇಶನ ಇಂದು ಆರಂಭವಾಗಿದ್ದು, ಐದು ದಿನಗಳ ಕಾಲ ನಡೆಯುತ್ತಿದೆ. ‘ಸಂಸತ್ನ 75 ವರ್ಷಗಳ ಪಯಣ’ ಕುರಿತು ಉಭಯ ಸದನಗಳಲ್ಲಿ ಚರ್ಚೆ ನಡೆಯುತ್ತಿದೆ. ವಿಧಾನಸಭಾದಿಂದ ಸಂಸತ್ವರೆಗೆ ನಡೆದು ಬಂದು ಸಂಸದೀಯ ಹಾದಿಯಲ್ಲಿನ ಸಾಧನೆಗಳು, ಅನುಭವಗಳು, ನೆನಪುಗಳು ಮತ್ತು ಕಲಿಕೆ ಬಗ್ಗೆ ಚರ್ಚೆ ನಡೆದಿದೆ.
ಸಂಸತ್ತಿನಲ್ಲಿ ಮಾಜಿ ಪ್ರಧಾನಿ ನೆಹರೂ ಅವರ ಮಧ್ಯರಾತ್ರಿಯ ಭಾಷಣ ಈಗಲೂ ಪ್ರತಿಧ್ವನಿಸುತ್ತದೆ. ಅದು ನಮಗೆ ಈಗಲೂ ಸ್ಪೂರ್ತಿ ನೀಡುತ್ತಲೇ ಇದೆ ಎಂದು ಪ್ರಧಾನಿ ಮೋದಿ ಉಲ್ಲೇಖಿಸಿದ್ದಾರೆ.
75 ವರ್ಷಗಳಲ್ಲಿ ಮಹತ್ತರ ಸಾಧನೆ ಏನೆಂದರೆ ಸಂಸತ್ತಿನ ಮೇಲೆ ಜನ ಸಾಮಾನ್ಯರಿಗೆ ಇರುವ ನಂಬಿಕೆ ಹೆಚ್ಚುತ್ತಲೇ ಇದೆ. ಮಂಗಳವಾರ ಸಂಸತ್ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡಾಗ ಹೊಸ ಭರವಸೆ ಮತ್ತು ಆತ್ಮವಿಶ್ವಾಸ ಮೂಡುತ್ತದೆ ಎಂಬ ನಂಬಿಕೆಯಿದೆ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.