ಇಂಫಾಲ್ : ಪ್ರಕ್ಷುಬ್ಧಗೊಂಡಿರುವ ಮಣಿಪುರದಾದ್ಯಂತ 12ಕ್ಕೂ ಹೆಚ್ಚು ಸ್ಥಳಗಳಲ್ಲಿ ಸೇನೆ ಮತ್ತು ಬಂಡುಕೋರರ ಗುಂಪುಗಳ ನಡುವೆ ಭಾನುವಾರ ಘರ್ಷಣೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯದಲ್ಲಿ ಶಾಂತಿ ಸ್ಥಾಪಿಸುವ ಸಲುವಾಗಿ ಬಂಡುಕೋರರನ್ನು ನಿಶಸ್ತ್ರೀಕರಣಗೊಳಿಸುವ ನಿಟ್ಟಿನಲ್ಲಿ ಸೇನೆಯು ಕಾರ್ಯಾಚರಣೆ ಕೈಗೊಂಡ ಬೆನ್ನಲ್ಲೇ ಈ ಘರ್ಷಣೆ ಭುಗಿಲೆದ್ದಿದೆ ಎನ್ನಲಾಗಿದೆ.
ಸದ್ಯ ನಡೆದಿರುವ ಘರ್ಷಣೆಯು ರಾಜ್ಯದಲ್ಲಿಯ ಸಮುದಾಯಗಳ ನಡುವೆ ನಡೆದಿಲ್ಲ. ಬದಲಾಗಿ, ಸೇನೆ ಮತ್ತು ಕುಕಿ ಬಂಡುಕೋರರ ನಡುವೆ ನಡೆದಿದೆ ಎಂದು ರಾಜ್ಯದ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಅವರು ತಿಳಿಸಿದ್ದಾರೆ.
ಇಂಫಾಲ್ ಕಣಿವೆ ಸುತ್ತಲಿನ ಹಲವು ಜಿಲ್ಲೆಗಳಲ್ಲಿ ನಸುಕಿನಲ್ಲೇ ಘರ್ಷಣೆ ಆರಂಭವಾಯಿತು. ಬಿಜೆಪಿ ಶಾಸಕ ಖ್ವೈರಕ್ಪಮ್ ರಘುಮಣಿ ಸಿಂಗ್ ಅವರ ಉರಿಪೋಕ್ನಲ್ಲಿಯ ಮನೆಯನ್ನು ಧ್ವಂಸಗೊಳಿಸಲಾಗಿದೆ ಮತ್ತು ಅವರ ಎರಡು ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ ಎಂದು ಅಧಿಕಾರಿಗಳು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಮಹಿಳಾ ಸಿಬ್ಬಂದಿಗಳ ನಿರ್ವಹಣೆಯಲ್ಲಿದ್ದ ಕೆಲ ಪ್ರದೇಶಗಳಲ್ಲಿ ಹೊಸದಾಗಿ ರಸ್ತೆತಡೆ ಸಮಸ್ಯೆ ತಲೆದೂರಿದ ಪ್ರಸಂಗಗಳೂ ನಡೆದಿವೆ ಎಂದು ಅವರು ಹೇಳಿದ್ದಾರೆ.
ಮೈತೇಯಿ ಸಮುದಾಯವು ಮೀಸಲಾತಿ ನೀಡುವಂತೆ ಸರ್ಕಾರವನ್ನು ಆಗ್ರಹಿಸಿತ್ತು. ಈ ಬೆನ್ನಲ್ಲೇ, ಮೈತೇಯಿ ಸಮುದಾಯ ಮತ್ತು ಇತರ ಬುಡಕಟ್ಟು ಸಮುದಾಯಗಳ ನಡುವೆ ಮೇ 3ರಿಂದ ಘರ್ಷಣೆ ಆರಂಭವಾಯಿತು. ಈ ವರೆಗೆ 75ಕ್ಕೂ ಹೆಚ್ಚು ಜನರು ಹಿಂಸಾಚಾರದಲ್ಲಿ ಮೃತಪಟ್ಟಿದ್ದಾರೆ.