ಅಮರಾವತಿ, ಆಂಧ್ರಪ್ರದೇಶ: ಮೇಲ್ಭಾಗದ ಜಲಾನಯನ ಪ್ರದೇಶ ಹಾಗೂ ರಾಜ್ಯದಾದ್ಯಂತ ಧಾರಾಕಾರ ಮಳೆಯಾಗುತ್ತಿರುವ ಕಾರಣ ಆಂಧ್ರಪ್ರದೇಶದಲ್ಲಿ ಕೃಷ್ಣಾ ನದಿ ತುಂಬಿ ಹರಿಯುತ್ತಿದೆ.
ಭಾನುವಾರ ಮಧ್ಯಾಹ್ನ ವಿಜಯವಾಡದ ಪ್ರಕಾಶಂ ಜಲಾಶಯದ ಮೂಲಕ ಐದು ಲಕ್ಷ ಕ್ಯುಸೆಕ್ ನೀರು ಹೊರಬಿಡುತ್ತಿದ್ದಂತೆಯೇ ಅಲ್ಲಿನ ಜನರಿಗೆ ಎಚ್ಚರಿಕೆಯ ಸಂದೇಶವನ್ನು ರವಾನಿಸಲಾಗಿದೆ.
ಜಲಾಶಯದ ಒಳಹರಿವು ಮತ್ತು ಹೊರಹರಿವು 5.09 ಲಕ್ಷ ಕ್ಯುಸೆಕ್ನಷ್ಟು ದಾಖಲಾಗಿದೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಹೇಳಿದೆ.
‘ಪ್ರವಾಹ ಸ್ಥಿತಿ ಉಲ್ಬಣವಾಗಿರುವ ಕಾರಣದಿಂದ, ಕೃಷ್ಣಾ ನದಿ ತೀರದ ಹಳ್ಳಿಗಳಲ್ಲಿ ಹಾಗೂ ಪ್ರಕಾಶಂ ಜಲಾಶಯದ ಬಳಿಯ ಹಳ್ಳಿಗಳಲ್ಲಿ ವಾಸಿಸುವ ಜನರು ಸ್ಥಳಾಂತರಗೊಳ್ಳಬೇಕು’ ಎಂದು ಕೃಷ್ಣಾ ಜಿಲ್ಲೆಯ ಜಿಲ್ಲಾಧಿಕಾರಿ ರಂಜಿತ್ ಬಾಷಾ ಎಚ್ಚರಿಕೆ ನೀಡಿದ್ದಾರೆ.
‘ಜನರು ನದಿಗೆ ಇಳಿಯಬಾರದು. ತಮ್ಮ ಜಾನುವಾರುಗಳನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸಬೇಕು’ ಎಂದು ರಂಜಿತ್ ಅವರು ನದಿ ತೀರದ ಗ್ರಾಮಸ್ಥರಿಗೆ, ವಿಶೇಷವಾಗಿ ಲಂಕಾ ಹಳ್ಳಿಗಳ ಜನರಿಗೆ ತಿಳಿಸಿದ್ದಾರೆ. ದುರ್ಬಲ ಗ್ರಾಮಗಳ ಗ್ರಾಮಸ್ಥರಿಗೆ ಪ್ರವಾಹದ ಬಗ್ಗೆ ಸೂಚಿಸಲು ಗ್ರಾಮ ಕಂದಾಯ ಅಧಿಕಾರಿಗಳಿಗೆ ಹೇಳಿದ್ದಾರೆ.