ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಣಿಪುರದಲ್ಲಿ ಜನಾಂಗೀಯ ಸಂಘರ್ಷ: ಮೃತರ ಕುಟುಂಬಕ್ಕೆ ತಲಾ ₹10 ಲಕ್ಷ ಪರಿಹಾರ ಘೋಷಣೆ

Published 30 ಮೇ 2023, 9:28 IST
Last Updated 30 ಮೇ 2023, 9:28 IST
ಅಕ್ಷರ ಗಾತ್ರ

ಇಂಫಾಲ್: ಮಣಿಪುರದಲ್ಲಿ ನಡೆದ ಜನಾಂಗೀಯ ಸಂಘರ್ಷದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ ₹10 ಲಕ್ಷ ಪರಿಹಾರ ನೀಡುವುದಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿರ್ಧರಿಸಿವೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

ಸೋಮವಾರ ತಡರಾತ್ರಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಮುಖ್ಯಮಂತ್ರಿ ಎನ್‌.ಬಿರೇನ್‌ ಸಿಂಗ್‌ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಪರಿಹಾರದ ಮೊತ್ತವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಸಮಾನವಾಗಿ ಭರಿಸಲಿದೆ. ಜತೆಗೆ, ಗಲಭೆಯಲ್ಲಿ ಮೃತಪಟ್ಟ ಕುಟುಂಬದ ಸದಸ್ಯರೊಬ್ಬರಿಗೆ ಉದ್ಯೋಗ ನೀಡಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹಿಂಸಾಚಾರ ಪೀಡಿತ ಮಣಿಪುರಕ್ಕೆ ಸೋಮವಾರ ತಲುಪಿದ್ದಾರೆ. ಅವರು ನಾಲ್ಕು ದಿನಗಳ ತಮ್ಮ ಭೇಟಿಯ ವೇಳೆ ರಾಜ್ಯದಲ್ಲಿನ ಪರಿಸ್ಥಿತಿ ಅವಲೋಕನ ಮತ್ತು ಶಾಂತಿ ಪುನರ್‌ಸ್ಥಾಪನೆಗಾಗಿ ಹಲವು ಸುತ್ತಿನ ಭದ್ರತಾ ಸಭೆಗಳನ್ನು ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮೇ 3ರಂದು ಪ್ರತಿಭಟನಾ ಮೆರವಣಿಗೆಯಲ್ಲಿ ಮೈತೇಯಿ ಮತ್ತು ಕೂಕಿ ಬುಡಕಟ್ಟು ಸಮುದಾಯಗಳ ನಡುವೆ ಸಂಘರ್ಷ ಮತ್ತು ಹಿಂಸಾಚಾರ ನಡೆದಿತ್ತು. ಬಳಿಕವೂ ರಾಜ್ಯದಲ್ಲಿ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿದೆ.

ಗೃಹ ಸಚಿವರು ಜೂನ್ 1ರವರೆಗೆ ಮಣಿಪುರದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಪರಿಸ್ಥಿತಿ ಅವಲೋಕನದ ಜತೆಗೆ ಅಲ್ಲಿನ ಜನಜೀವನವನ್ನು ಸಹಜಸ್ಥಿತಿಗೆ ತರುವ ಸಲುವಾಗಿ ಹಲವು ಸುತ್ತಿನ ಭದ್ರತಾ ಸಭೆಗಳನ್ನೂ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅವರು ಸಮಾಜದ ವಿವಿಧ ಸಂಘಟನೆಗಳ ಪ್ರತಿನಿಧಿಗಳು, ಮೈತೇಯಿ ಮತ್ತು ಕೂಕಿ ಸಮುದಾಯಗಳ ವಿವಿಧ ಗುಂಪುಗಳ ಪ್ರತಿನಿಧಿಗಳನ್ನು ಭೇಟಿಯಾಗುವ ಸಾಧ್ಯತೆ ಇದೆ ಮಾಧ್ಯಮಗಳು ವರದಿ ಮಾಡಿವೆ.

ಸೇನೆ– ಬಂಡುಕೋರರ ಮಧ್ಯೆ ಗುಂಡಿನ ಚಕಮಕಿ: 25 ಮಂದಿ ಬಂಧನ: ಸಂಘರ್ಷ ಪೀಡಿತ ಮಣಿಪುರದಲ್ಲಿ ಭದ್ರತಾ ಪಡೆಗಳು ಮತ್ತು ಬಂಡುಕೋರರ ನಡುವೆ ಸೋಮವಾರ ಕೂಡ ಗುಂಡಿನ ಚಕಮಕಿ ನಡೆದಿದೆ. ಸೇನೆ ಮತ್ತು ಅರೆ ಸೇನಾ ಪಡೆಗಳು ಬಂಡುಕೋರರ ವಿರುದ್ಧ ಕೈಗೊಂಡಿರುವ ಕಾರ್ಯಾಚರಣೆಯಲ್ಲಿ ಶಸ್ತ್ರಾಸ್ತ್ರ, ಮದ್ದುಗುಂಡು ಮತ್ತು ಗ್ರೆನೇಡ್‌ಗಳನ್ನು ಹೊಂದಿದ್ದ 25 ಮಂದಿ ಬಂಡುಕೋರರನ್ನು ಬಂಧಿಸಲಾಗಿದೆ.

ಇಂಫಾಲ್ ಕಣಿವೆಯಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗುಂಡಿನ ದಾಳಿ ಮತ್ತು ಘರ್ಷಣೆಗಳು ಸಂಭವಿಸಿವೆ. ಇಂಫಾಲ್‌ನ ಪೂರ್ವದಲ್ಲಿರುವ ಸನ್ಸಬಿ, ಗ್ವಾಲ್ತಬಿ, ಶಬುನ್‌ಖೋಲ್‌, ಖುನೊದಲ್ಲಿ ನಡೆಸಿದ ಕಾರ್ಯಾಚರಣೆಗಳಲ್ಲಿ 22 ದುಷ್ಕರ್ಮಿಗಳನ್ನು ಬಂಧಿಸಿದ್ದು, ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಇಂಫಾಲ ನಗರದಲ್ಲಿ ಅಕ್ರಮ ಶಸ್ತ್ರಾಸ್ತ್ರಗಳೊಂದಿಗೆ ವಾಹನದಲ್ಲಿ ಪ್ರಯಾಣಿಸುತ್ತಿರುವ ಮೂವರು ವ್ಯಕ್ತಿಗಳನ್ನು ಭದ್ರತಾ ಪಡೆ ಸಿಬ್ಬಂದಿ ಬಂಧಿಸಿದೆ ಎಂದು ಸೇನೆ ತಿಳಿಸಿದೆ.

ಭದ್ರತಾ ಪಡೆ ಮತ್ತು ಕೂಕಿ ಬಂಡುಕೋರರ ನಡುವಿನ ಗುಂಡಿನ ಚಕಮಕಿಯಲ್ಲಿ ಮೃತಪಟ್ಟವರ ಸಂಖ್ಯೆ ಐದಕ್ಕೆ ಏರಿದೆ. ಭಾನುವಾರ ಇಬ್ಬರು ಮೃತಪಟ್ಟಿದ್ದು, ಗುಂಡೇಟುಗಳಿಂದ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 12 ಮಂದಿಯಲ್ಲಿ ಸೋಮವಾರ ಮೂವರು ಮೃತಪಟ್ಟಿದ್ದಾರೆ.

ಶುಗನುವಿನಲ್ಲಿ ನಡೆದ ಘರ್ಷಣೆಯಲ್ಲಿ ಪೊಲೀಸ್‌ ಸಿಬ್ಬಂದಿಯೊಬ್ಬರು ಮೃತಪಟ್ಟಿದ್ದು, ಮತ್ತೊಬ್ಬರು ಗಾಯಗೊಂಡಿದ್ದಾರೆ.

ಸೇನೆ ಮತ್ತು ಅರೆಸೇನಾ ಪಡೆ ಯೋಧರು ಇಂಫಾಲ್‌ ಕಣಿವೆ ಪ್ರದೇಶ ಮತ್ತು ಸುತ್ತಲಿನ ಜಿಲ್ಲೆಗಳಲ್ಲಿ ಬಂಡುಕೋರರ ವಿರುದ್ಧ ಕಾರ್ಯಾಚರಣೆ ಮುಂದುವರಿಸಿದ್ದಾರೆ. ಬಂಡುಕೋರರಿಂದ ಅಕ್ರಮ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲು ಭದ್ರತಾ ಪಡೆಗಳು ಮಿಲಿಟರಿ ಕಾರ್ಯಾಚರಣೆ ನಡೆಸುತ್ತಿವೆ.

ಹಿಂಸಾಚಾರ ಘಟನೆಗಳು ಮರುಕಳಿಸುತ್ತಿರುವುದರಿಂದಾಗಿ, ಇಂಫಾಲ್‌ ಪೂರ್ವ ಮತ್ತು ಪಶ್ಚಿಮ ಜಿಲ್ಲೆಗಳಲ್ಲಿ ಹೇರಿದ್ದ 11 ಗಂಟೆಗಳ ಕರ್ಫ್ಯೂ ಸಡಿಲಿಕೆ ಅವಧಿಯನ್ನು ಜಿಲ್ಲಾ ಅಧಿಕಾರಿಗಳು ಕೇವಲ ಆರೂವರೆ ತಾಸುಗಳ ಅವಧಿಗೆ ಕಡಿತಗೊಳಿಸುವಂತೆ ಮಾಡಿವೆ.

40 ಬಂಡುಕೋರರ ಹತ್ಯೆ

ನಾಗರಿಕರ ಮೇಲೆ ಗುಂಡು ಹಾರಿಸಿ ಮತ್ತು ಅವರ ಮನೆಗಳಿಗೆ ಬೆಂಕಿ ಹಚ್ಚಿ ಹಿಂಸಾಚಾರ ನಡೆಸಿದವರಲ್ಲಿ ಸುಮಾರು 40 ಮಂದಿ ಶಸ್ತ್ರಸಜ್ಜಿತ ಬಂಡುಕೋರರು, ಭದ್ರತಾ ಪಡೆಗಳು ನಡೆಸಿದ ಸೇನಾ ಕಾರ್ಯಾಚರಣೆಯಲ್ಲಿ ಹತರಾಗಿದ್ದಾರೆ ಎಂದು ಮುಖ್ಯಮಂತ್ರಿ ಎನ್‌.ಬಿರೇನ್‌ ಸಿಂಗ್‌ ಹೇಳಿದ್ದಾರೆ.

ಶಾಂತಿ ಸ್ಥಾಪಿಸಲು ಕಾರ್ಯಾಚರಣೆಗೆ ಇಳಿದಿರುವ ಭದ್ರತಾ ಪಡೆಗಳೊಂದಿಗೆ ಕೂಕಿ ಬಂಡುಕೋರರು ಶಸ್ತ್ರಾಸ್ತ್ರ ಸಂಘರ್ಷ ನಡೆಸಿದ್ದಾರೆ. ಬಂಡುಕೋರರು ಎಕೆ- 47 ಬಂದೂಕುಗಳು, ಎಂ-16 ಮತ್ತು ಸ್ನೈಪರ್ ರೈಫಲ್‌ಗಳಿಂದ ನಾಗರಿಕರ ಮೇಲೆ ಗುಂಡಿನ ದಾಳಿ ನಡೆಸಿರುವ ಪ್ರಕರಣಗಳೂ ವರದಿಯಾಗಿವೆ. ಈ ಬಂಡುಕೋರರನ್ನು ಭದ್ರತಾ ಪಡೆಗಳು ಹೊಡೆದುರುಳಿಸಿವೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT