ನವದೆಹಲಿ: ‘ತಮಿಳುನಾಡಿನಲ್ಲಿ ನ. 19 ಅಥವಾ 26ರಂದು ಷರತ್ತಿಗೊಳಪಟ್ಟು ಪಥಸಂಚಲನ ನಡೆಸಲು ಆರ್ಎಸ್ಎಸ್ಗೆ ಅವಕಾಶ ಕಲ್ಪಿಸಬೇಕು. ಈ ಕುರಿತ ತೀರ್ಮಾನವನ್ನು ನ. 15ರೊಳಗೆ ಸಂಘಟನೆಗೆ ತಿಳಿಸಬೇಕು’ ಎಂದು ಸುಪ್ರೀಂ ಕೋರ್ಟ್ ಸೋಮವಾರ ತಮಿಳುನಾಡು ಸರ್ಕಾರಕ್ಕೆ ನಿರ್ದೇಶನ ನೀಡಿತು.
ಪ್ರತಿ ಜಿಲ್ಲೆಯಲ್ಲಿ ಒಂದು ಅಥವಾ ಎರಡು ರ್ಯಾಲಿಗೆ ಅವಕಾಶ ಕಲ್ಪಿಸುವ ನಿರ್ಧಾರವನ್ನು ತಮಿಳುನಾಡು ಸರ್ಕಾರದ ವಿವೇಚನೆಗೆ ಬಿಡಲು ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ದಿಪಂಕರ್ ದತ್ತಾ ಅವರಿದ್ದ ಪೀಠ ನಿರಾಕರಿಸಿತು.
ಹೈಕೋರ್ಟ್ನ ಆದೇಶದ ಅನುಸಾರ, ಪೊಲೀಸರು ಸೂಚಿಸಿದ ಮಾರ್ಗದಲ್ಲಿಯೇ ಪಥಸಂಚಲನವನ್ನು ನಡೆಸಲು ಸಂಘಟನೆ ಈಗಾಗಲೇ ಒಪ್ಪಿಕೊಂಡಿದೆ ಎಂಬುದನ್ನು ಪೀಠ ಪರಿಗಣಿಸಿತು. ಆದರೆ, ಒಂದು ಅಥವಾ ಎರಡು ರ್ಯಾಲಿಗೆ ಅನುಮತಿ ನೀಡುವ ಅವಕಾಶ ಕಲ್ಪಿಸುವುದು ‘ಮಿತಿಮಿರಿದ ಹಕ್ಕಾಗಲಿದೆ’ ಎಂದು ಅಭಿಪ್ರಾಯಪಟ್ಟಿತು.
ಒಂದು ವೇಳೆ ಯಾರಾದರೂ ನಿತ್ಯ, ಪ್ರತಿವಾರ ಪಥಸಂಚಲನ ನಡೆಯಲು ಬಯಸಿದರೆ ಅದು ಸಾಧ್ಯವಾಗದು ಎಂದು ತಮಿಳುನಾಡು ಪರ ವಕೀಲ ಮುಕುಲ್ ರೋಹಟಗಿ ಹೇಳಿದರು. ಆಗ ಪೀಠವು, ’ಅವರು ಪ್ರತಿನಿತ್ಯ ನಡೆಸಲು ಅನುಮತಿ ಕೋರಿದರೆ ಆಗ ನೋಡೊಣ. ಸದ್ಯ ಅವರು ಎರಡು ದಿನ ಅನುಮತಿ ಕೋರಿದ್ದಾರೆ‘ ಎಂದು ಪ್ರತಿಕ್ರಿಯಿಸಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.