ನವದೆಹಲಿ: ಜಾರಿ ನಿರ್ದೇಶನಾಲಯವನ್ನು (ಇ.ಡಿ) ಮುಚ್ಚಬೇಕು ಎಂದು ಸುಪ್ರೀಂ ಕೋರ್ಟ್ಗೆ ಎಎಪಿ ಒತ್ತಾಯಿಸಿದೆ.
ದೆಹಲಿ ಅಬಕಾರಿ ನೀತಿ ಹಗರಣದ ಆರೋಪಿಯೊಬ್ಬರಿಂದ ಲಂಚಕ್ಕೆ ಬೇಡಿಕೆ ಇಟ್ಟ ಆರೋಪದ ಮೇಲೆ ಇ.ಡಿ ಸಹ ನಿರ್ದೇಶಕ ಪವನ್ ಖತ್ರಿ ವಿರುದ್ಧ ಸಿಬಿಐ ಪ್ರಕರಣದ ದಾಖಲಿಸಿರುವ ಹಿನ್ನೆಲೆಯಲ್ಲಿ ಎಎಪಿ ಹೀಗೆ ಹೇಳಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಎಪಿ ರಾಜ್ಯಸಭೆ ಸಂಸದ ಸಂಜಯ್ ಸಿಂಗ್ ಅವರು, ದೆಹಲಿ ಅಬಕಾರಿ ನೀತಿ ಅನುಷ್ಠಾನದಲ್ಲಿ ನಡೆದಿದೆ ಎನ್ನಲಾದ ಹಗರಣದ ಕುರಿತು ಇ.ಡಿ ಕಳೆದ ಒಂದು ವರ್ಷದಿಂದ ತನಿಖೆ ನಡೆಸುತ್ತಿದೆ. ಹಗರಣದ ಕುರಿತು ಇ.ಡಿ ತನ್ನ ಹೇಳಿಕೆಯನ್ನು ಬದಲಿಸುತ್ತಲೇ ಇದೆ. ಒಮ್ಮೆ ಇದು ₹100 ಕೋಟಿ ಮೊತ್ತದ ಹಗರಣ ಎಂದು ಹೇಳಿದರೆ, ಮತ್ತೊಮ್ಮೆ ₹1000 ಕೋಟಿ ಮೊತ್ತದ ಹಗರಣ ಎಂದು ಹೇಳುತ್ತದೆ. ತನಿಖೆ ವೇಳೆ ತನ್ನ ಆರೋಪವನ್ನೂ ಸಾಬೀತುಪಡಿಸಿಲ್ಲ ಎಂದಿದ್ದಾರೆ.
ಇ.ಡಿ.ಯು ಗೂಂಡಾಗಿರಿ ನಡೆಸುವ ಸಂಸ್ಥೆಯಾಗಿದ್ದು, ತನಿಖೆ ಹೆಸರಿನಲ್ಲಿ ಹಣ ಸುಲಿಗೆ ಮಾಡುತ್ತಿದೆ. ದೇಶದ ಹಲವು ಭಾಗಗಳಲ್ಲಿ ಶಾಸಕರನ್ನು ಬೆದರಿಸಲು ಇ.ಡಿಯನ್ನು ಬಳಸಿಕೊಳ್ಳಲಾಗುತ್ತಿದೆ. ಹೀಗಾಗಿ ಇ.ಡಿಯನ್ನು ಸುಪ್ರೀಂ ಕೋರ್ಟ್ ಕೂಡಲೇ ಮುಚ್ಚಬೇಕು ಎಂದು ಅವರು ಹೇಳಿದರು.
ದೆಹಲಿ ಅಬಕಾರಿ ನೀತಿ ಹಗರಣದ ಮತ್ತೊಬ್ಬ ಆರೋಪಿಗಳಲ್ಲಿ ಒಬ್ಬರಾದ ಮದ್ಯ ಉದ್ಯಮಿ ಅಮನ್ದೀಪ್ ಧಾಲ್ ಅವರ ವಿರುದ್ಧ ಕ್ರಮ ಜರುಗಿಸದಂತೆ ನೋಡಿಕೊಳ್ಳುವುದಾಗಿ ಪವನ್ ಅವರು ಹೇಳಿದ್ದರು. ಅದಕ್ಕಾಗಿ ₹5 ಕೋಟಿ ಲಂಚ ನೀಡುವಂತೆ ಧಾಲ್ ಎದುರು ಬೇಡಿಕೆ ಇರಿಸಿದ್ದರು ಎಂದು ಸಿಬಿಐ ಆರೋಪಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.