ನವದೆಹಲಿ (ಪಿಟಿಐ): ಈ ಬಾರಿ ನೈರುತ್ಯ ಮುಂಗಾರು ಮಾರುತವು ಕೇರಳವನ್ನು ಜೂನ್ 4ರಂದು ಪ್ರವೇಶಿಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮಂಗಳವಾರ ಹೇಳಿದೆ.
ವಾಡಿಕೆಯಂತೆ ಮುಂಗಾರು ಜೂನ್ 1ರಂದು ಕೇರಳ ಕರಾವಳಿಯನ್ನು ಪ್ರವೇಶಿಸಬೇಕು. ಈ ವರ್ಷ ಜೂನ್ 4ರಂದು ಕೇರಳ ಪ್ರವೇಶಿಸುವ ಸಾಧ್ಯತೆ ಇದೆ. ಮುಂಗಾರು ಪ್ರವೇಶವು ನಾಲ್ಕು ದಿನಗಳಷ್ಟು ಮುಂಚಿತವಾಗಿ ಅಥವಾ ವಿಳಂಬವಾಗಿ ಆಗುವ ಸಾಧ್ಯತೆಯೂ ಇದೆ ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ.
ಮುಂಗಾರು ಮಾರುತವು ಕೇರಳ ಪ್ರವೇಶಿಸಿ, ನಂತರ ದೇಶದ ಇತರ ಭಾಗಗಳನ್ನು ಆವರಿಸಿಕೊಳ್ಳುತ್ತದೆ.
‘ಎಲ್ ನಿನೊ’ ಪರಿಸ್ಥಿತಿಯ ಹೊರತಾಗಿಯೂ ಈ ಬಾರಿ ಮುಂಗಾರು ಅವಧಿಯಲ್ಲಿ ವಾಡಿಕೆಯಂತೆ ಮಳೆ ಬೀಳುವ ಸಾಧ್ಯತೆ ಇದೆ ಎಂದು ಇಲಾಖೆಯು ಕಳೆದ ತಿಂಗಳು ಹೇಳಿತ್ತು.
ದೇಶದ ಕೃಷಿ ವಲಯದಲ್ಲಿ ಶೇ 52ರಷ್ಟು ಪ್ರದೇಶವು ಮಳೆಯನ್ನೇ ಅವಲಂಬಿಸಿದೆ. ದೇಶದ ಒಟ್ಟು ಆಹಾರ ಧಾನ್ಯ ಉತ್ಪಾದನೆಯಲ್ಲಿ ಈ ಮಳೆ ಆಶ್ರಿತ ಪ್ರದೇಶದ ಪಾಲು ಶೇ 40ರಷ್ಟು ಎಂಬುದು ಗಮನಾರ್ಹ.