ನವದೆಹಲಿ: ಇದೇ ಸೋಮವಾರದಿಂದ ಐದು ದಿನಗಳ ಕಾಲ ನಡೆಯಲಿರುವ ಸಂಸತ್ನ ವಿಶೇಷ ಅಧಿವೇಶನದಲ್ಲಿ ತಪ್ಪದೇ ಹಾಜರಿರುವಂತೆ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ತಮ್ಮ ಸಂಸದರಿಗೆ ಗುರುವಾರ ವಿಪ್ ನೀಡಿವೆ.
ಅಧಿವೇಶನದ ತಾತ್ಕಾಲಿಕ ಕಾರ್ಯಸೂಚಿಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಬೆನ್ನಲ್ಲೇ, ಎರಡೂ ಪಕ್ಷಗಳು ಲೋಕಸಭೆ ಮತ್ತು ರಾಜ್ಯಸಭೆಯ ತನ್ನ ಸದಸ್ಯರಿಗೆ ವಿಪ್ ನೀಡಿವೆ.
‘‘ಸಂಸತ್ನ 75 ವರ್ಷಗಳ ಪಯಣ’ ಕುರಿತು ಸೆ.18ರಂದು ಸಂಸತ್ನ ಉಭಯ ಸದನಗಳಲ್ಲಿ ಚರ್ಚೆ ನಡೆಯಲಿದ್ದು, ಪಕ್ಷದ ಎಲ್ಲ ಸಂಸದರು ಹಾಜರಿರಬೇಕು’ ಎಂದು ಬಿಜೆಪಿ ಸೂಚಿಸಿದೆ.
‘ಸರ್ಕಾರವು ಯಾವುದೇ ಸೂಚನೆಯಿಲ್ಲದೇ ಪ್ರಮುಖ ಕಾರ್ಯಸೂಚಿಯನ್ನು ಅಧಿವೇಶನ ವೇಳೆ ಕೈಗೆತ್ತಿಕೊಳ್ಳಲಿದೆ ಎಂಬುದು ಪಕ್ಷದ ನಂಬಿಕೆ. ಹೀಗಾಗಿ, ರಾಜ್ಯಸಭೆಯ ಎಲ್ಲ ಸದಸ್ಯರು ಐದು ದಿನಗಳ ಕಾಲ ಬೆಳಿಗ್ಗೆ 11ರಿಂದ ಕಲಾಪವನ್ನು ಮುಂದೂಡುವವರೆಗೆ ಹಾಜರಿರಬೇಕು ಎಂಬುದಾಗಿ ವಿಪ್ನಲ್ಲಿ ತಿಳಿಸಲಾಗಿದೆ’ ಎಂದು ಕಾಂಗ್ರೆಸ್ ಸಂಸದರೊಬ್ಬರು ಹೇಳಿದ್ದಾರೆ.
‘ವಿಶೇಷ ಅಧಿವೇಶನದ ಪೂರ್ಣಪ್ರಮಾಣ ಕಾರ್ಯಸೂಚಿಯನ್ನು ಬಹಿರಂಗಪಡಿಸಿಲ್ಲ. ಸರ್ಕಾರವು ಕುತಂತ್ರ ನಡೆಸಿ, ಮತ್ತಷ್ಟು ವಿಷಯಗಳನ್ನು ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ’ ಎಂದು ಟಿಎಂಸಿಯ ರಾಜ್ಯಸಭಾ ಸದಸ್ಯ ಡೆರೆಕ್ ಒಬ್ರಯಾನ್ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.