ಲಕ್ನೋ: ಬಿಜೆಪಿ ಸರ್ಕಾರದಲ್ಲಿ ಹೆಚ್ಚುತ್ತಿರುವ ಭ್ರಷ್ಟಾಚಾರವೂ ನಗರಗಳಲ್ಲಿ ಹೆಚ್ಚುತ್ತಿರುವ ಸಮಸ್ಯೆಗಳಿಗೆ ಮೂಲ ಕಾರಣವಾಗಿದೆ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಆರೋಪಿಸಿದ್ದಾರೆ.
ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಅಖಿಲೇಶ್ ಮಂಗಳವಾರ ಪ್ರಚಾರ ನಡೆಸಿದರು.
‘ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಮಹತ್ವ ಪಡೆದುಕೊಂಡಿದೆ. ರಾಜ್ಯದಲ್ಲಿ ಜನಸಂಖ್ಯೆ ಹೆಚ್ಚುತ್ತಿದೆ ಹಾಗೂ ನಗರಗಳಲ್ಲಿ ಸಮಸ್ಯೆಗಳೂ ಹೆಚ್ಚಾಗುತ್ತಿವೆ. ಬಿಜೆಪಿ ಮೇಯರ್ಗಳು ನಗರಗಳಲ್ಲಿ ಸುದೀರ್ಘ ಕಾಲ ಆಡಳಿತ ನಡೆಸಿದ್ದರಿಂದ ಈ ಸಮಸ್ಯೆಗಳು ಸರ್ಕಾರದ ಉಡುಗೊರೆಗಳಾಗಿವೆ ಎಂದು ಸುದ್ಧಿಗಾರರಿಗೆ ತಿಳಿಸಿದ್ದಾರೆ.
ಬಿಜೆಪಿಯ ‘ಟ್ರಿಪಲ್ ಇಂಜಿನ್’ ಸರ್ಕಾರದ ಬಗ್ಗೆ ಮಾತನಾಡಿದ ಅವರು ಕೇಂದ್ರ, ರಾಜ್ಯ ಮತ್ತು ನಗರ ಸಂಸ್ಥೆಗಳಲ್ಲಿ ಪಕ್ಷವು ಅಧಿಕಾರದಲ್ಲಿದ್ದರೂ ‘ನಗರಗಳು ಸ್ಮಾರ್ಟ್ ಆಗಲಿಲ್ಲ’ ಎಂದು ವ್ಯಂಗ್ಯವಾಡಿದರು.
ಅಯೋಧ್ಯೆಯಲ್ಲಿ ಭ್ರಷ್ಟಾಚಾರ ನಡೆದಿರುವ ಬಗ್ಗೆ ದೂರುಗಳು ಬಂದಿವೆ. ಭೂ ಹಗರಣ ಪ್ರಕರಣದಲ್ಲಿ ಬಿಜೆಪಿ ಮೇಯರ್ ಹೆಸರು ಕೇಳಿ ಬಂದಿದ್ದರಿಂದ ಈ ಬಾರಿ ಅವರಿಗೆ ಟಿಕೆಟ್ ನಿರಾಕರಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಸಮಾಜವಾದಿ ಪಕ್ಷದ(ಎಸ್ಪಿ) ಲಕ್ನೋ ಮೇಯರ್ ಅಭ್ಯರ್ಥಿ ವಂದನಾ ಮಿಶ್ರಾ ಕೂಡ ಉಪಸ್ಥಿತರಿದ್ದರು.