ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭ್ರಷ್ಟಾಚಾರ ಸಹಿಸಲ್ಲ: ರಾಜ್ಯ ಕಾಂಗ್ರೆಸ್‌ ಸಚಿವರಿಗೆ ರಾಹುಲ್‌ ಎಚ್ಚರಿಕೆ

Published 3 ಆಗಸ್ಟ್ 2023, 0:29 IST
Last Updated 3 ಆಗಸ್ಟ್ 2023, 0:29 IST
ಅಕ್ಷರ ಗಾತ್ರ

ನವದೆಹಲಿ: ‘ಕರ್ನಾಟಕದಲ್ಲಿ ಹಿಂದಿನ ಬಿಜೆಪಿ ಸರ್ಕಾರದ ಶೇ 40 ಲಂಚದ ಆರೋಪದ ಬಗ್ಗೆ ಕಾಂಗ್ರೆಸ್‌ ದೊಡ್ಡ ಮಟ್ಟದಲ್ಲಿ ಹೋರಾಟ ಮಾಡಿ ಯಶಸ್ಸು ಗಳಿಸಿದೆ. ನಮ್ಮ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರವನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಈ ವಿಷಯದಲ್ಲಿ ನಾವು ಶೂನ್ಯ ಸಹಿಷ್ಣು ಆಗಿರುತ್ತೇವೆ’ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ರಾಜ್ಯದ ಸಚಿವರಿಗೆ ಎಚ್ಚರಿಕೆ ನೀಡಿದರು. 

ಲೋಕಸಭಾ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವ ಸಂಬಂಧ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ
ಖರ್ಗೆ ನೇತೃತ್ವದಲ್ಲಿ ಎಐಸಿಸಿ ಕಚೇರಿಯಲ್ಲಿ ಬುಧವಾರ ನಡೆದ ರಾಜ್ಯ ಕಾಂಗ್ರೆಸ್‌ನ ಹಿರಿಯ ನಾಯಕರ ಸಭೆಯಲ್ಲಿ ಮಾತನಾಡಿದ ರಾಹುಲ್‌, ‘ನಾವು ಸ್ವಚ್ಛ ಆಡಳಿತ ನೀಡಬೇಕು. ಕೆಲವು ಸಚಿವರು ತಮ್ಮ ಧೋರಣೆಯನ್ನು ಬದಲಿಸಿಕೊಳ್ಳಬೇಕು. ಸ್ವಜನ ಪಕ್ಷಪಾತಕ್ಕೆ ಅವಕಾಶ ನೀಡಬಾರದು’ ಎಂದು ತಾಕೀತು ಮಾಡಿದರು. ರಾಜ್ಯ ನಾಯಕರು ಹಾಗೂ ಸಚಿವರ ಜತೆಗೆ ಹೈಕಮಾಂಡ್‌ನ ನಾಯಕರು ಸುಮಾರು ಆರು ತಾಸು ಸಭೆ ನಡೆಸಿದರು. 

‘ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಬಂದು ಎರಡು ತಿಂಗಳಷ್ಟೇ ಕಳೆದಿದೆ. ಅಷ್ಟರಲ್ಲೇ ಕೆಲವು ಸಚಿವರ ಕಾರ್ಯವೈಖರಿ ಬಗ್ಗೆ ಪಕ್ಷದ ಶಾಸಕರೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಲವು ಸಚಿವರು ಶಾಸಕರ ಕೈಗೂ ಸಿಗುತ್ತಿಲ್ಲ’ ಎಂದು ಕೆಲವು ಮುಖಂಡರು ಸಭೆಯಲ್ಲಿ ಪ್ರಸ್ತಾಪಿಸಿದರು. 

ಈ ವೇಳೆ ಮಧ್ಯಪ್ರವೇಶಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಇವೆಲ್ಲ ಆಧಾರರಹಿತ ಆರೋಪಗಳು. ಶಾಸಕಾಂಗ ಪಕ್ಷದ ಸಭೆ ಕರೆದು ಶಾಸಕರ ಅಹವಾಲು ಆಲಿಸಲಾಗಿದೆ’ ಎಂದು ಸ್ಪಷ್ಟಪಡಿಸಿದರು. ‘ನಮ್ಮ ಸರ್ಕಾರದ ಬಗ್ಗೆ ಸಣ್ಣ ಕಳಂಕವೂ ಇರಬಾರದು. ಯಾರೂ ಇಂತಹ ಚಟುವಟಿಕೆಗಳಲ್ಲಿ ಭಾಗಿಯಾಗಬಾರದು’ ಎಂದು ರಾಹುಲ್‌ ಸೂಚಿಸಿದರು ಎಂದು ಮೂಲಗಳು ಹೇಳಿವೆ. 

ಹಿರಿಯ ನಾಯಕರ ಸಭೆಯಲ್ಲಿ ಮಾತನಾಡಿದ ರಾಹುಲ್‌ ಗಾಂಧಿ, ‘ನಮ್ಮ ಸರ್ಕಾರದ ಬಗ್ಗೆ ಜನರು ಸಾಕಷ್ಟು ನಿರೀಕ್ಷೆಗಳನ್ನು ಇರಿಸಿಕೊಂಡಿದ್ದಾರೆ. ನಾವು ಮೊದಲಿನಿಂದಲೂ ಬಡ ಜನರಿಗಾಗಿ ಕಾರ್ಯಕ್ರಮಗಳನ್ನು ನೀಡಿದವರು. ಈ ಸಲದ ಚುನಾವಣೆಯಲ್ಲಿ ದಲಿತರು, ಹಿಂದುಳಿದವರು ಹಾಗೂ ಮುಸ್ಲಿಮರ ಜತೆಗೆ ಮಹಿಳೆಯರೂ ನಮ್ಮ ಕೈ ಹಿಡಿದಿದ್ದಾರೆ. ಅವರ ವಿಶ್ವಾಸಕ್ಕೆ ಭಂಗ ಬಾರದಂತೆ ನೋಡಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು. 

‘ಸರ್ಕಾರ ರಚನೆಯಾಗಿ ಎರಡು ತಿಂಗಳಲ್ಲೇ ಗ್ಯಾರಂಟಿ ಯೋಜನೆಗಳು ಜಾರಿ ಆಗಿದೆ. ಈ ಯೋಜನೆಗಳ ಲಾಭ ಕರ್ನಾಟಕದ ಮಧ್ಯಮ ವರ್ಗ ಮತ್ತು ಬಡವರಿಗೆ ತಲುಪುತ್ತಿದೆ. ಈ ಗ್ಯಾರಂಟಿಗಳು ಪ್ರತಿಯೊಬ್ಬ ಫಲಾನುಭವಿಗೂ ಕಡ್ಡಾಯವಾಗಿ ತಲುಪುವಂತೆ ಸರ್ಕಾರಿ ಯಂತ್ರಾಂಗಗಳನ್ನು ಪರಿಣಾಮಕಾರಿಯಾಗಿ ಬಳಸಬೇಕು’ ಎಂದು ಸೂಚಿಸಿದರು. 

’ಕೋಮುವಾದ, ರಾಷ್ಟ್ರೀಯತೆ ಹಾಗೂ ಪ್ರಧಾನಿ ನರೇಂದ್ರ ಮೋದಿ ವರ್ಚಸ್ಸನ್ನು ಬಳಸಿಕೊಂಡು
ಚುನಾವಣೆಗಳಲ್ಲಿ ಗೆಲ್ಲಬಹುದು ಎಂದು ಬಿಜೆಪಿ ಭಾವಿಸಿದೆ. ರಾಜ್ಯದಲ್ಲಿ ಬಡಜನರ ಪರವಾಗಿ ಹೋರಾಟ ಮಾಡಿ ಹಾಗೂ ಯೋಜನೆಗಳನ್ನು ಅದಕ್ಕೆ ತಕ್ಕ ತಿರುಗೇಟನ್ನು ನೀಡಿದ್ದೇವೆ. ಈ ಗ್ಯಾರಂಟಿ ಯೋಜನೆಗಳ ಯಶಸ್ಸು ಲೋಕಸಭಾ ಚುನಾವಣೆಗೆ ಭದ್ರ ಬುನಾದಿ ಆಗಬೇಕು ಎಂದೂ ರಾಹುಲ್‌ ಹೇಳಿದರು. ರಾಜ್ಯದಲ್ಲಿ 20ರಿಂದ 22 ಕ್ಷೇತ್ರಗಳಲ್ಲಿ ಗೆಲ್ಲಲು ಅವಕಾಶಗಳಿವೆ. ವಿಧಾನಸಭಾ ಚುನಾವಣಾ ಮಾದರಿಯಲ್ಲೇ ಒಗ್ಗಟ್ಟಿನಿಂದ ಮುಂದುವರಿದರೆ ಈ ಗುರಿ ಅಸಾಧ್ಯವಲ್ಲ’ ಎಂದೂ ಅವರು ಹೇಳಿದರು. ‘ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ 15ರಿಂದ 20 ಸ್ಥಾನಗಳನ್ನು ಗೆದ್ದು ತೋರಿಸುತ್ತೇವೆ’ ಎಂದು ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಭರವಸೆ ನೀಡಿದರು ಎಂದು ಮೂಲಗಳು ಹೇಳಿವೆ. 

‘ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಶೇ 36ರಷ್ಟು ಮತಗಳನ್ನು ಪಡೆದಿತ್ತು. ಈ ಸಲವೂ ಅಷ್ಟೇ ಮತಗಳನ್ನು ಪಡೆದಿದೆ. ಬಿಜೆಪಿಯ ಮತ ಬ್ಯಾಂಕ್ ಯಥಾಸ್ಥಿತಿಯಲ್ಲಿದೆ. ಆ ಮತಗಳನ್ನು ಸೆಳೆಯುವ ಕಡೆಗೆ ಹೆಚ್ಚಿನ ಗಮನ ಹರಿಸಬೇಕು. ಸಂಘಟನೆಗೆ ಇನ್ನಷ್ಟು ಚುರುಕು ಮುಟ್ಟಿಸಬೇಕು’ ಎಂದೂ ಹೇಳಿದರು. 

ಮಲ್ಲಿಕಾರ್ಜುನ ಖರ್ಗೆ, ‘ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಎರಡು ದಶಕಗಳಿಂದ ಕಾಂಗ್ರೆಸ್‌ ಎರಡಂಕಿ ದಾಟಿಲ್ಲ. ಈ ಸಲ ಗರಿಷ್ಠ ಸ್ಥಾನಗಳನ್ನು ಗೆಲ್ಲಲು ಸುವರ್ಣಾವಕಾಶ ಇದೆ. ನಮ್ಮದೇ ಸರ್ಕಾರ ಇದೆ ಎಂದು ಮೈಮರೆಯದೆ ಕಾರ್ಯತಂತ್ರ ರೂಪಿಸಬೇಕು’ ಎಂದು ತಾಕೀತು ಮಾಡಿದರು.  

ಭೂಸುಧಾರಣಾ ಕಾಯ್ದೆಗೆ ಬಿಜೆಪಿ ಸರ್ಕಾರ ತಿದ್ದುಪಡಿ ತಂದಿತ್ತು. ಇದರಿಂದಾಗಿ, ಪ್ರಭಾವಿಗಳಿಗೆ ಅನುಕೂಲವಾಗಿತ್ತು. ಈ ಕಾಯ್ದೆಯನ್ನು ರದ್ದುಗೊಳಿಸುವುದಾಗಿ ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ತಿಳಿಸಿತ್ತು. ಕಾಯ್ದೆ ತಿದ್ದುಪಡಿಗೆ ನಮ್ಮ ಸರ್ಕಾರ ಮೀನಮೇಷ
ಎಣಿಸುತ್ತಿರುವುದು ಸರಿಯಲ್ಲ ಎಂದು ಕೆಲವು ಮುಖಂಡರು ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು ಎಂದು ಗೊತ್ತಾಗಿದೆ. 

ಸಭೆಯಲ್ಲಿ ಮಾತನಾಡಿದ ಜಗದೀಶ ಶೆಟ್ಟರ್‌ ಹಾಗೂ ಲಕ್ಷ್ಮಣ ಸವದಿ, ‘ರಾಜ್ಯದಲ್ಲಿ ಬಿಜೆಪಿ ನಾಯಕತ್ವ ಇಲ್ಲದ ಪಕ್ಷ ಆಗಿದೆ. ವಿರೋಧ ಪಕ್ಷದ ನಾಯಕರನ್ನು ನೇಮಿಸಲು ಆ ಪಕ್ಷಕ್ಕೆ ಸಾಧ್ಯವಾಗಿಲ್ಲ. ಈ ಅವಕಾಶವನ್ನು ಕಾಂಗ್ರೆಸ್‌ ಸದುಪಯೋಗಪಡಿಸಿಕೊಳ್ಳಬೇಕು. ಬಿಜೆಪಿ ವಿರುದ್ಧ ಮತ್ತಷ್ಟು
ಆಕ್ರಮಣಕಾರಿಯಾಗಿ ಮುಂದು
ವರಿಯಬೇಕು. ಈ ಸಲ 20ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಪೂರಕ ವಾತಾವರಣ ಇದೆ’ ಎಂದು ಹೇಳಿದರು ಎಂದು ಮೂಲಗಳು ತಿಳಿಸಿವೆ. 

ರಾಜ್ಯಸಭಾ ಸದಸ್ಯ ಎಲ್‌.ಹನುಮಂತಯ್ಯ ಅವರು , ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಚರ್ಚೆಗಳು ನಡೆದಿವೆ. ಮೈತ್ರಿ ಮಾಡಿಕೊಂಡರೆ ನಮ್ಮ ಕಾರ್ಯತಂತ್ರ ವಿಭಿನ್ನವಾಗಿರಬೇಕು ಎಂದೂ ಹೇಳಿದರು ಎಂದು ಗೊತ್ತಾಗಿದೆ.

ಹಿರಿಯ ನಾಯಕರ ಸಭೆಯಲ್ಲಿ 37 ಮುಖಂಡರು ಭಾಗಿಯಾಗಿದ್ದರು. ಬಳಿಕ ಖರ್ಗೆ ಹಾಗೂ ರಾಹುಲ್‌ ಅವರು ಸಚಿವರ ಜತೆಗೆ ಪ್ರತ್ಯೇಕ ಸಭೆ ನಡೆಸಿದರು. ವಸತಿ ಸಚಿವ ಜಮೀರ್ ಅಹ್ಮದ್‌ ಖಾನ್‌ ಎರಡು ತಿಂಗಳ ಇಲಾಖಾ ಪ್ರಗತಿ ವರದಿಯನ್ನು ಹೈಕಮಾಂಡ್‌ಗೆ ಸಲ್ಲಿಸಿದರು. 

‘ಸರ್ಕಾರದ ಬಗ್ಗೆ ಜನರಿಗೆ ಭಾರಿ ನಿರೀಕ್ಷೆಗಳು ಇವೆ. ಪ್ರತಿ ಸಚಿವರು ಒಂದು ಲೋಕಸಭಾ ಕ್ಷೇತ್ರದ ಹೊಣೆಯನ್ನು ವಹಿಸಿಕೊಳ್ಳಬೇಕು. 20 ಕ್ಷೇತ್ರಗಳಲ್ಲಿ ಗೆಲ್ಲಲೇಬೇಕು. ಲೋಕಸಭಾ ಚುನಾವಣೆಯ ಬಳಿಕ ಸಚಿವರ ಸಾಧನೆಯ ಪರಾಮರ್ಶೆ ನಡೆಸಲಾಗುವುದು’ ಎಂದು ವರಿಷ್ಠರು ಹೇಳಿದರು ಎಂದು ಮೂಲಗಳು ಹೇಳಿವೆ.

ಸಭೆಯಲ್ಲಿ ಹೈಕಮಾಂಡ್ ಹೇಳಿದ್ದು...

*ಪ್ರತಿ ಲೋಕಸಭಾ ಕ್ಷೇತ್ರಕ್ಕೆ ಒಬ್ಬರು ಸಚಿವರು ಹಾಗೂ ಪಕ್ಷದ ಹಿರಿಯ ಮುಖಂಡರನ್ನು ಉಸ್ತುವಾರಿಯನ್ನಾಗಿ ನೇಮಿಸಲು ತೀರ್ಮಾನ

*ತಳ ಹಂತದಿಂದಲೇ ಪಕ್ಷದ ಬಲವರ್ಧನೆಗೆ ಇನ್ನಷ್ಟು ಉಪಕ್ರಮ.
ತಳಮಟ್ಟದಲ್ಲಿ ಸಂಘಟನೆಯ ಪುನರ್‌ ರಚನೆ. 

*ಸಚಿವರು ಕನಿಷ್ಠ ವಾರಕ್ಕೊಮ್ಮೆ ಕಾರ್ಯಕರ್ತರನ್ನು ಭೇಟಿಯಾಗಿ ಅಹವಾಲು ಆಲಿಸಬೇಕು. ಅವರ ಬೇಡಿಕೆಗಳಿಗೆ ಸ್ಪಂದಿಸಬೇಕು. 

*ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಜಾರಿಗೆ ತಂದಿದ್ದು ಯುಪಿಎ ಸರ್ಕಾರ. ಅದು ದೊಡ್ಡ ಮಟ್ಟದಲ್ಲಿ ಯಶಸ್ಸು ಪಡೆಯಿತು. ಆದರೆ, ಅದರ ಲಾಭವನ್ನು ಪಡೆಯುವಲ್ಲಿ ಪಕ್ಷ ವಿಫಲವಾಯಿತು. ಐದು ಗ್ಯಾರಂಟಿಗಳ ವಿಷಯದಲ್ಲಿ ಆ ಲೋಪ ಆಗದಂತೆ ನೋಡಿಕೊಳ್ಳಬೇಕು. ಅದು ಕಾಂಗ್ರೆಸ್‌ನ ಕಾರ್ಯಕ್ರಮ ಎಂದು ಮತದಾರರ ಮನದಲ್ಲಿ ಉಳಿಯುವಂತೆ ನೋಡಿಕೊಳ್ಳಬೇಕು. 

*ಅನೇಕ ಜಿಲ್ಲೆಗಳಲ್ಲಿ ಬಾಡಿಗೆ ಕಟ್ಟಡಗಳಲ್ಲಿ ಪಕ್ಷದ ಕಚೇರಿಗಳು ಇವೆ. ಇದು ಸರಿಯಲ್ಲ. ಎಲ್ಲ ವಿಧಾನಸಭಾ ಕ್ಷೇತ್ರಗಳು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಪಕ್ಷದ ಸ್ವಂತ ಕಟ್ಟಡಗಳನ್ನು ನಿರ್ಮಿಸಬೇಕು. 

ಮೂವರು ಸಚಿವರಿಗೆ ವೇಣುಗೋಪಾಲ್‌ ಎಚ್ಚರಿಕೆ

ಸಭೆಗೂ ಮುನ್ನ ಪಕ್ಷದ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ.ವೇಣುಗೋಪಾಲ್‌ ಅವರು ಮೂವರು ಸಚಿವರನ್ನು ಪ್ರತ್ಯೇಕವಾಗಿ ಕರೆಸಿಕೊಂಡು ಎಚ್ಚರಿಕೆ ನೀಡಿದರು.

‘ವಿಧಾನಮಂಡಲದ ಮೊದಲ ಅಧಿವೇಶನದಲ್ಲೇ ವಿರೋಧ ಪಕ್ಷದ ನಾಯಕರು ವರ್ಗಾವಣೆಯ ಭ್ರಷ್ಟಾಚಾರದ ಬಗ್ಗೆ ಪ್ರಸ್ತಾಪಿಸಿದ್ದಾರೆ. ಆ ಬಳಿಕವೂ ನಿಮ್ಮ ವರ್ತನೆಯಲ್ಲಿ ಬದಲಾವಣೆ ಆಗಿಲ್ಲ. ಈ ಸಂಬಂಧ ನಮಗೂ ದೂರುಗಳು ಬಂದಿವೆ. ನೀವು ಈ ಹಿಂದೆಯೂ ಸಚಿವರಾಗಿದ್ದವರು. ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಕೆಲಸ ಮಾಡಬೇಡಿ’ ಎಂದು ಕಟುವಾಗಿ ಎಚ್ಚರಿಸಿದರು. ಒಬ್ಬರು ಸಚಿವರು ಹಳೆ ಮೈಸೂರು ಭಾಗದವರು ಹಾಗೂ ಇಬ್ಬರು ಸಚಿವರು ಉತ್ತರ ಕರ್ನಾಟಕ ಭಾಗದವರು ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ. 

20 ಕ್ಷೇತ್ರಗಳಲ್ಲಿ ಗೆಲುವು: ಸಿದ್ದರಾಮಯ್ಯ

‘ಐದು ಗ್ಯಾರಂಟಿಗಳ ಜಾರಿ ಮೂಲಕ ಕರ್ನಾಟಕ ಮಾದರಿ ಅಭಿವೃದ್ಧಿ ಲೋಕಸಭಾ ಚುನಾವಣೆಯಲ್ಲಿ ಪ್ರತಿಫಲಿಸಲಿದ್ದು ನಾವು 20-24 ಸೀಟುಗಳಲ್ಲಿ ಜಯಗಳಿಸುವ ಭರವಸೆ ವ್ಯಕ್ತವಾಗಿದೆ’ ಎಂದು ಸಿದ್ದರಾಮಯ್ಯ ಅವರು ತಿಳಿಸಿದರು. 

ಸಭೆಯ ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ‘ಈ ಸಲ ಕಾಂಗ್ರೆಸ್‌ ಪರ ವಾತಾವರಣ ಇದೆ. ಅದನ್ನು ಹೈಕಮಾಂಡ್‌ಗೆ ಮನವರಿಕೆ ಮಾಡಿಕೊಟ್ಟಿದ್ದೇವೆ’ ಎಂದರು. 

ಜಿಲ್ಲಾ ಉಸ್ತುವಾರಿ ಸಚಿವರುಗಳಿಗೆ ಗ್ಯಾರಂಟಿಗಳ ಸಮರ್ಪಕ ಜಾರಿ ಮತ್ತು ಲೋಕಸಭಾ ಚುನಾವಣೆಯ ಹೊಣೆ ವಹಿಸಲಾಗಿದೆ. ಇದಲ್ಲದೆ ಹೆಚ್ಚುವರಿಯಾಗಿ ಕೆಲವು ಜಿಲ್ಲೆಗಳ ಜವಾಬ್ದಾರಿಯನ್ನೂ ಸಚಿವರುಗಳಿಗೆ ನೀಡುವ ಕುರಿತು ಚರ್ಚೆ ನಡೆದಿದೆ ಎಂದು ಹೇಳಿದ್ದಾರೆ.

ಹಿರಿಯರಿಗಿಲ್ಲ ಆಹ್ವಾನ; ಅಸಮಾಧಾನ

ಕರ್ನಾಟಕ ಸರ್ಕಾರದ ದೆಹಲಿಯ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಸೇರಿದಂತೆ ಹಲವು ಹಿರಿಯ ಮುಖಂಡರಿಗೆ ಸಭೆಗೆ ಆಹ್ವಾನ ನೀಡದ ಬಗ್ಗೆಯೂ ಕಾಂಗ್ರೆಸ್‌ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿದೆ. 

‘ಜಯಚಂದ್ರ ಅವರು 1978ರಲ್ಲೇ ಶಾಸಕರಾಗಿ ಆಯ್ಕೆಯಾಗಿದ್ದರು. ಅವರು ಅನುಭವಿ. ಜತೆಗೆ, ವಿಶೇಷ ಪ್ರತಿನಿಧಿ ಸಹ ಹೌದು. ಬಿ.ಆರ್‌.ಪಾಟೀಲ ಹಾಗೂ ಎಂ.ವೈ.ಪಾಟೀಲರು ಸಹ ಹಿರಿಯ ನಾಯಕರು. ಬಸವರಾಜ ರಾಯರಡ್ಡಿ ಆರು ಬಾರಿಯ ಶಾಸಕರು. ಅವರಿಗೆ ಯಾರಿಗೂ ಸಭೆಗೆ ಆಹ್ವಾನ ನೀಡಿಲ್ಲ. ಅದರ ಬದಲು ವಿನಯ ಕುಲಕರ್ಣಿ, ರಾಘವೇಂದ್ರ ಹಿಟ್ನಾಳ್‌ ಅವರಿಗೆ ಆಹ್ವಾನ ನೀಡಲಾಗಿತ್ತು. ಇದರ ಹಿಂದಿರುವ ಮಾನದಂಡ ಏನು’ ಎಂದು ಹಿರಿಯ ಮುಖಂಡರು ಪ್ರಶ್ನಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT