‘ಇಲ್ಲಿ ಎಲ್ಲರೂ ಪಾಲುದಾರರು’ ಎಂಬ ಶೀರ್ಷಿಕೆಯಡಿ ‘ಪ್ರಜಾವಾಣಿ’ಯಲ್ಲಿ ಭಾನುವಾರ(ಜುಲೈ 17) ಪ್ರಕಟವಾದ ‘ಒಳನೋಟ’ ವರದಿಗೆ ರಾಜ್ಯದಾದ್ಯಂತ ಓದುಗರ ಪ್ರತಿಕ್ರಿಯಿಸಿದ್ದಾರೆ. ಆಯ್ದ ಕೆಲ ಪ್ರತಿಕ್ರಿಯೆಗಳು ಇಲ್ಲಿವೆ.
‘ದಪ್ಪ ಚರ್ಮದ ಚೆಕ್ ಪೋಸ್ಟ್ ಅಧಿಕಾರಿಗಳು’
ಪೂರಕ ದಾಖಲೆ ಒದಗಿಸಿದರೂ ವಿನಾಕಾರಣ ಅಧಿಕಾರಿಗಳು ಹಣ ನೀಡುವಂತೆ ಸತಾಯಿಸುತ್ತಾರೆ. ದಾಖಲೆ ಇಲ್ಲದವರು ಹಣ ಕೊಟ್ಟರೆ ಕ್ಷಣಾರ್ಧದಲ್ಲಿ ಬಿಟ್ಟು ಕಳುಹಿಸುತ್ತಾರೆ. ಸಾರಿಗೆ ಇಲಾಖೆ ಅಧಿಕಾರಿಗಳು ಯಾವ ಮಟ್ಟಕ್ಕೆ ಇಳಿದಿದ್ದಾರೆ ಅಂದರೆ ಸತ್ತ ಹೆಣ ತೆಗೆದುಕೊಂಡು ಹೋಗುವ ವಾಹನವನ್ನು ಬಿಡುವುದಿಲ್ಲ. ಇಲಾಖೆಯ ಎಲ್ಲ ಕೆಲಸಕ್ಕೂ ‘ಕಾಂಚಾಣ೦ ಕಾರ್ಯಸಿದ್ಧಿ’ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ.
–ಜಿ ಪಿ ಬಿರಾದಾರ, ದೇವರಹಿಪ್ಪರಗಿ, ವಿಜಯಪುರ
ಭ್ರಷ್ಟಾಚಾರದ ವಿರುದ್ಧ ಜಾಗೃತಿ
ಭ್ರಷ್ಟಾಚಾರಕ್ಕೆ ಪಕ್ಷ ಭೇದ ಇಲ್ಲ. ರಾಜ್ಯದಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆಯಲು ಜನರ ನಿರ್ಲಕ್ಷ್ಯ ಮನೋಭಾವವೂ ಕಾರಣ!!
ಪ್ರತಿ ಹಳ್ಳಿಯಲ್ಲೂ ಭ್ರಷ್ಟಾಚಾರದ ವಿರುದ್ಧ ಜಾಗೃತಿ ಮನೋಭಾವ ಮೂಡುತ್ತದೆಯೋ ಅಂದು, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬಹುದು!
–ಸಯ್ಯದ್ ಬಾಬರ್ ಮುಸ್ತಫ,ಕಲಬುರಗಿ
ಎಲ್ಲ ಇಲಾಖೆಗಳಲ್ಲೂ ಲಂಚದ ವಾಸನೆ
ಸರ್ಕಾರದ ಇಲಾಖೆಗಳಲ್ಲಿ ಲಂಚ! ಲಂಚ! ಲಂಚ! ಇದಕ್ಕೆ ಕೊನೆ ಎಂದು? ಭ್ರಷ್ಟಾಚಾರವು ಸಾರಿಗೆ ಇಲಾಖೆಯಲ್ಲಿ ನೆಲೆ ಕಂಡುಕೊಂಡಿದೆ. ಲಂಚ ಕೊಡದೆ ಯಾವ ಕೆಲಸಗಳು ಆಗುವುದಿಲ್ಲ. ಲಂಚ ಕೊಟ್ಟರೆ ಎಲ್ಲ ಕೆಲಸಗಳು ಸರಾಗವಾಗಿ ಆಗುತ್ತವೆ. ಆದರೆ, ನಮ್ಮ ಪ್ರಧಾನ ಮಂತ್ರಿಗಳು ಮಾತ್ರ ‘ನಾ ಖಾವುಂಗಾ ನಾ ಖಾನೆ ದುಂಗಾ’ ಎಂಬ ಮಾತುಗಳನ್ನಾಡುತ್ತಿದ್ದಾರೆ. ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು.
–ಎಂ.ಎಸ್. ಸುಫೀಯಾನ್, ಬೆಳಗಾವಿ
ಲಂಚ: ಎಲ್ಲರೂ ಪಾಲುದಾರರು
ಲಂಚದಲ್ಲಿ ಎಲ್ಲರೂ ಪಾಲುದಾರರು. ಸಮಾಜದಲ್ಲಿ ಲಂಚ ವಿರೋಧಿ ಮನೋಭಾವ ಸಮಾಧಿಯಾಗುವ ವ್ಯವಸ್ಥೆ ದಿನದಿಂದ ದಿನಕ್ಕೆ ಬಲಗೊಳ್ಳುತ್ತಿದೆ. ಲಂಚ ಕೊಡುವವರ ವಿರುದ್ಧ ಮಾತನಾಡುವವರನ್ನು ವ್ಯವಹಾರ ತಿಳಿಯದವರು ಎಂದು ಹಾಸ್ಯ ಮಾಡುವ ಸಮಾಜ ಸೃಷ್ಟಿಯಾಗಿದೆ. ಸರ್ಕಾರಿ ಕಚೇರಿಗಳಲ್ಲಿ ಖಾಸಗಿ ವ್ಯಕ್ತಿಗಳು ದರ್ಬಾರು ನಡೆಸುತ್ತಿದ್ದಾರೆ. ಭವಿಷ್ಯದಲ್ಲಿ ಲಂಚ ಕೊಡುವುದು ಅಧಿಕೃತ ಎಂಬಂತಾಗಿ ಲಂಚ ತೆಗೆದುಕೊಂಡಿದ್ದಕ್ಕೆ ರಶೀದಿಯನ್ನು ಕೊಡುತ್ತಾರೇನೋ ಕಾದು ನೋಡಬೇಕಷ್ಟೆ!
–ಡಾ. ಜಿ. ಬೈರೇಗೌಡ, ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.