ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಸ್‌ವೈ ಮೌನವನ್ನು ದೌರ್ಬಲ್ಯ ಎಂದುಕೊಳ್ಳಬೇಡಿ: ವಿಜಯೇಂದ್ರ

Last Updated 15 ಮಾರ್ಚ್ 2023, 16:01 IST
ಅಕ್ಷರ ಗಾತ್ರ

ಹಾವೇರಿ: ‘ಬಿ.ಎಸ್‌. ಯಡಿಯೂರಪ್ಪ ಇಂದು ಮೌನವಾಗಿದ್ದರೆ ಅಂದರೆ, ಅದನ್ನು ಯಾರಾದರೂ ದೌರ್ಬಲ್ಯ ಎಂದು ಭಾವಿಸಿದರೆ ಪಶ್ಚಾತ್ತಾಪ ಪಡಬೇಕಾಗುತ್ತದೆ’ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ವಿಜಯೇಂದ್ರ ಖಡಕ್‌ ಎಚ್ಚರಿಕೆ ನೀಡಿದರು.

ರಾಣೆಬೆನ್ನೂರು ನಗರದಲ್ಲಿ ಬುಧವಾರ ಆಯೋಜಿಸಿದ್ದ ಬಿಜೆಪಿ ಯುವ ಮೋರ್ಚಾ ಸಮಾವೇಶದಲ್ಲಿ ಅವರು ಮಾತನಾಡಿ, ಯಡಿಯೂರಪ್ಪನವರನ್ನು ಟೀಕೆ ಮಾಡುವ ಸಂದರ್ಭದಲ್ಲಿ ಎಚ್ಚರಿಕೆ ಇರಬೇಕು. ಇಂದು ಅವರು ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳಿತಿಲ್ಲ. ಯಾವುದೇ ದೊಡ್ಡ ಸ್ಥಾನಮಾನದಲ್ಲಿ ಇಲ್ಲದಿದ್ದರೂ ಕೂಡ, ಆರೂವರೆ ಕೋಟಿ ಕನ್ನಡಿಗರು ತಮ್ಮ ಹೃದಯದಲ್ಲಿ ಶಾಶ್ವತ ಸ್ಥಾನ ಕೊಟ್ಟಿದ್ದಾರೆ ಎಂದು ಗುಣಗಾನ ಮಾಡಿದರು.

ಯಡಿಯೂರಪ್ಪನವರು ಕುಟುಂಬವನ್ನು ಬೆಳೆಸಬೇಕು ಎಂದು ಯಾವತ್ತೂ ರಾಜಕಾರಣ ಮಾಡಲಿಲ್ಲ. ನಾಳೆ ಮತ್ತೆ ಮುಖ್ಯಮಂತ್ರಿ ಆಗಬೇಕು, ಮಗನನ್ನು ಮಂತ್ರಿ ಮಾಡಬೇಕು ಎಂಬ ಕನಸು ಇಟ್ಟುಕೊಂಡಿಲ್ಲ. ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಬೇಕು. ಪ್ರಧಾನಿ ನರೇಂದ್ರ ಮೋದಿಯವರ ಕೈ ಬಲಪಡಿಸಬೇಕು ಎಂದು ರಾಜ್ಯದಾದ್ಯಂತ ಪ್ರವಾಸ ಮಾಡುತ್ತಿದ್ದಾರೆ ಎಂದು ಹೇಳಿದರು.

‘ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ಹಗಲುಗನಸು ಕಾಣಬೇಡಿ’ ಎಂದು ಸಿದ್ದರಾಮಯ್ಯನವರು ಯಡಿಯೂರಪ್ಪನವರಿಗೆ ಹೇಳಿದ್ದರು. ಈ ಮಾತನ್ನು ಸವಾಲಾಗಿ ಸ್ವೀಕರಿಸಿದ ಯಡಿಯೂರಪ್ಪನವರು, ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಮೂಲಕ ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಹೆಬ್ಬಾಗಿಲು ತೆರೆದರು ಎಂದರು.

‘ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು’ ಎಂಬ ತತ್ವದಡಿ ಸಾಮಾಜಿಕ ನ್ಯಾಯದಡಿ ಆಡಳಿತ ನಡೆಸಿದರು. ಎಲ್ಲ ಸಮಾಜಗಳ ಕಣ್ಣೀರನ್ನು ಒರೆಸುವ ಕೆಲಸವನ್ನು ಯಡಿಯೂರಪ್ಪ ಮಾಡಲಿಲ್ವಾ? ಎಂದು ಪ್ರಶ್ನಿಸಿದರು. ಎಷ್ಟು ದಿನ ಅಧಿಕಾರ ನಡೆಸಿದರು ಎಂಬುದು ಮುಖ್ಯವಲ್ಲ, ಆದರೆ, ಅಧಿಕಾರ ಮಾಡಿದ ಸಂದರ್ಭದಲ್ಲಿ ಹೇಗೆ ಕೆಲಸ ಮಾಡಿದ್ದಾರೆ ಎಂಬುದು ಮುಖ್ಯವಾಗುತ್ತದೆ ಎಂದು ಹೇಳಿದರು.

ಎದೆಗಾರಿಕೆ ಬೇರೆಯವರಿಗೆ ಇದೆಯಾ?

ಯಡಿಯೂರಪ್ಪನವರಿಗೆ 81 ವರ್ಷ ಆಗಿದ್ದು, ವಯಸ್ಸಾಗಿದೆ ಎಂದು ಕೆಲವರು ಟೀಕೆ ಮಾಡುತ್ತಾರೆ. ಈ ವಯಸ್ಸಲ್ಲೂ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ರಾಜ್ಯದಾದ್ಯಂತ ಪ್ರವಾಸ ಮಾಡಿ, ಪಕ್ಷ ಸಂಘಟನೆ ಮಾಡಿ ರಾಜ್ಯದಲ್ಲಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರುತ್ತೇನೆ ಎಂಬ ಎದೆಗಾರಿಕೆ ಬೇರೆ ಯಾರಿಗಾದರೂ ಇದೆಯಾ? ಎಂದು ಪ್ರಶ್ನಿಸಿದರು. ಆಗ, ಕಾರ್ಯಕರ್ತರು ಅದಕ್ಕೆ ಅವರನ್ನು ‘ರಾಜಹುಲಿ’ ಅನ್ನುವುದು ಎಂದು ಕೂಗಿದರು.

ಶಿಕಾರಿಪುರ ಪುರಸಭೆ ಸದಸ್ಯರಾಗಿದ್ದಾಗ ಯಡಿಯೂರಪ್ಪನವರ ಮೇಲೆ ಕಾಂಗ್ರೆಸ್‌ ಪುಢಾರಿಯಿಂದ ಮಾರಣಾಂತಿಕ ಹಲ್ಲೆ ಆಯಿತು. ಅಂದು ಯಡಿಯೂರಪ್ಪನವರನ್ನು ಮೇಲೆತ್ತಲು ಯಾರೂ ಇರಲಿಲ್ಲ. ಅಂದು ನಮ್ಮ ತಾಯಿ ಮತ್ತು ಇಬ್ಬರು ಕಾರ್ಯಕರ್ತರು ಆಸ್ಪತ್ರೆಗೆ ಕರೆದೊಯ್ದರು. ವಾರದ ನಂತರ ಯಡಿಯೂರಪ್ಪನವರು, ‘ದೇವರ ಆಶೀರ್ವಾದ ಮತ್ತು ಕಾರ್ಯಕರ್ತರ ಹಾರೈಕೆಯಿಂದ ಬದುಕುಳಿದಿದ್ದೇನೆ. ನನ್ನ ಜೀವ ಇರುವವರೆಗೂ ಕೂಡ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಕೆಲಸ ಮಾಡುತ್ತೇನೆ’ ಎಂದಿದ್ರು ಎಂದು ವಿಜಯೇಂದ್ರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT