ಗಂಗಾವತಿ (ಕೊಪ್ಪಳ ಜಿಲ್ಲೆ): ನಗರದ ಕನಕಗಿರಿ ರಸ್ತೆಯ ಮಾರುತೇಶ್ವರ ವೃತ್ತದ ಬಳಿ ಕಾರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ₹ 5 ಲಕ್ಷ ಹಣವನ್ನು ಚುನಾವಣೆ ಅಧಿಕಾರಿಗಳು ಮಂಗಳವಾರ ವಶಕ್ಕೆ ಪಡೆದಿದ್ದು, ಪ್ರಕರಣ ದಾಖಲಿಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಗಳು ಮಾರುತೇಶ್ವರ ವೃತ್ತದ ಬಳಿ ಕಾರನ್ನು ತಡೆದು ಪರಿಶೀಲನೆ ನಡೆಸಿದಾಗ ಹಣ ಒಯ್ಯುತ್ತಿರುವುದು ಪತ್ತೆಯಾಗಿದೆ. ಕಾರಿನಲ್ಲಿ ಕೆಆರ್ಪಿಪಿ ಪಕ್ಷದ ಗ್ರಾಮೀಣ ಘಟಕದ ಅಧ್ಯಕ್ಷ ದುರಗಪ್ಪ ಆಗೋಲಿ ಅವರ ಹೆಸರಿನಲ್ಲಿ ವಿವಿಧ ಹುದ್ದೆಗಳ ನೇಮಕಾತಿಯ 20 ಲೆಟರ್ ಪ್ಯಾಡ್, ಪಕ್ಷದ ಗುರುತಿನ 15 ಶಾಲು, ₹5 ಲಕ್ಷ ನಗದು ದೊರೆತಿದೆ.
ಚುನಾವಣೆ ನೀತಿ ಸಂಹಿತೆ ಉಲ್ಲಂಘನೆಯಡಿ ಚುನಾವಣೆ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿ ಗಂಗಪ್ಪ ಅವರು ವಾಹನ ಚಾಲಕ ಮಾರುತಿ ಹಾಗೂ ಕೆಆರ್ಪಿಪಿ ಗ್ರಾಮೀಣ ಘಟಕದ ಅಧ್ಯಕ್ಷ ದುರಗಪ್ಪ ಕೆ ಆಗೋಲಿ ಅವರ ವಿರುದ್ಧ ದೂರು ನೀಡಿದ್ದು, ನಗರಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.