ಮೈಸೂರು: ‘ಸಂಸದ ಪ್ರತಾಪಸಿಂಹ, ಮಾಧ್ಯಮಗಳಿಗೆ ಧಮ್ಕಿ ಹಾಕುತ್ತೀಯ. ನೀನು ಬೆತ್ತಲೆ ಪ್ರಪಂಚ ಬರೆದಿರಬಹುದು. ಆದರೆ, ಇನ್ನು ಸ್ಪಲ್ಪ ದಿನದಲ್ಲಿ ನಾನೇ ನಿನ್ನನ್ನು ಬೆತ್ತಲೆ ಮಾಡುತ್ತೇನೆ. ಎಲ್ಲ ಮಾಹಿತಿ ನನ್ನ ಬಳಿ ಇದೆ’ ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಸೋಮಣ್ಣ ಮತ್ತು ಸಿದ್ದರಾಮಯ್ಯ ಕೆಳಹಂತದಿಂದ ರಾಜಕೀಯಕ್ಕೆ ಬಂದವರು. ಅವರು ತಮ್ಮ ಪ್ರಚಾರವನ್ನು ತಾವೇ ಮಾಡಿಕೊಳ್ಳಲು ಸಮರ್ಥರು. ಸುಳ್ಳು ಹೇಳಿ ಸೈಟ್ ತೆಗೆದುಕೊಂಡ ನಿನಗೆ ಅಲ್ಲೇನು ಕೆಲಸ? ಅಲ್ಲಿಗೆ ಹೋಗಿ ನೀನೇನು ಕಡಿತಿಯಾ’ ಎಂದು ಹರಿಹಾಯ್ದರು.
‘ಸಂಸದ ಪ್ರತಾಪ ಸಿಂಹ ಓಟಿಗಾಗಿ ಸಂಘರ್ಷ ಮಾಡುತ್ತಿದ್ದಾನೆ. ಸಂಸತ್ತಿನಲ್ಲಿ ತೋರಿಸದ ಪ್ರತಾಪವನ್ನು ವರುಣ ಕ್ಷೇತ್ರದಲ್ಲಿ ತೋರಿಸುತ್ತಿದ್ದಾನೆ’ ಎಂದು ವ್ಯಂಗ್ಯವಾಡಿದರು.