ಬೆಂಗಳೂರು: ‘ಕರ್ನಾಟಕ ಸುವರ್ಣ ಸಂಭ್ರಮ ಲಾಂಛನದಲ್ಲಿ ಕನ್ನಡ ಅಂಕಿಗೆ ಅಪಮಾನ ಮಾಡಲಾಗಿದೆ’ ಎಂದು ಕರ್ನಾಟಕ ವಿಕಾಸ ರಂಗ ಆಕ್ಷೇಪ ವ್ಯಕ್ತಪಡಿಸಿದೆ.
‘ಮೈಸೂರು ರಾಜ್ಯವೆಂದು ಇದ್ದ ಹೆಸರನ್ನು 1973ರಲ್ಲಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರು ಕರ್ನಾಟಕ ಎಂದು ಮರು ನಾಮಕರಣ ಮಾಡಿದರು. ಆ ಹೆಸರು ನಾಮಕರಣ ಮಾಡಿ 50 ವರ್ಷಗಳು ತುಂಬಿದ ಸಂದರ್ಭದಲ್ಲಿ ರಾಜ್ಯ ಸರ್ಕಾರ ಕರ್ನಾಟಕ ಸುವರ್ಣ ಸಂಭ್ರಮ ಆಚರಿಸುತ್ತಿದೆ. ಈ ಸಂಬಂಧ ರೂಪಿಸಲಾಗಿರುವ ಲಾಂಛನದಲ್ಲಿ ಇಂಡೋ-ಅರೇಬಿಕ್ ಅಂಕಿ ಮೇಲ್ಭಾಗದಲ್ಲಿಯೇ ದೊಡ್ಡದಾಗಿ
ರಾರಾಜಿಸುತ್ತಿದೆ. ಕನ್ನಡ ಅಂಕಿ ಕೆಳಭಾಗದಲ್ಲಿ ತುಳಿತಕ್ಕೊಳಗಾಗಿ ನರಳುತ್ತಿದೆ’ ಎಂದು ವಿಕಾಸ ರಂಗದ ಅಧ್ಯಕ್ಷ ವ.ಚ.ಚನ್ನೇಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ಕನ್ನಡವನ್ನು ಉಳಿಸಿ ಬೆಳೆಸಬೇಕಾದ ರಾಜ್ಯ ಸರ್ಕಾರವೇ ಕನ್ನಡ ಅಂಕಿಗೆ ಈ ರೀತಿ ಅಪಮಾನ ಮಾಡಿದರೆ ಹೇಗೆ? ಕನ್ನಡ ವಿರೋಧಿ ಧೋರಣೆ ಖಂಡನೀಯ. ಲಾಂಛನದಲ್ಲಿ ಕನ್ನಡ ಅಂಕಿಯನ್ನು ಮಾತ್ರ ಹಾಕಬೇಕು. ಇಲ್ಲದಿದ್ದರೆ ಸರ್ಕಾರ ನವೆಂಬರ್ 1ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಳ್ಳುವ ರಾಜ್ಯೋತ್ಸವ ಸಮಾರಂಭದಲ್ಲಿ ಪ್ರತಿಭಟನೆ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.