ಪ್ರಸಕ್ತ ಚುನಾವಣೆಯ ಪ್ರಚಾರದಲ್ಲಿ ಕೋರೆ ಅವರು ಅಂತರ ಕಾಯ್ದುಕೊಂಡ ಕಾರಣಕ್ಕಾಗಿ ಈ ಭೇಟಿ ಮಹತ್ವ ಪಡೆದಿದೆ.
ಮತಕ್ಷೇತ್ರದ ಬೆಳಗಾವಿ, ಬಾಗಲಕೋಟೆ, ವಿಜಯಪುರ ಜಿಲ್ಲೆ ಸೇರಿ ಕೆಎಲ್ಇ ಶಿಕ್ಷಣ ಸಂಸ್ಥೆಯಲ್ಲಿಯೇ 3,000ಕ್ಕೂ ಹೆಚ್ಚು ಮತದಾರರು ಇದ್ದಾರೆ. ಯಾವುದೇ ಅಭ್ಯರ್ಥಿ ಗೆಲುವಿಗೂ ಸಂಸ್ಥೆಯ ಮತಗಳು ಮಹತ್ವದ ಪಾತ್ರ ವಹಿಸಲಿವೆ.
ಆದರೆ, ಪ್ರಭಾಕರ ಕೋರೆ ಅವರು ಈವರೆಗೆ ಪಕ್ಷದ ಅಭ್ಯರ್ಥಿಗಳ ಪರವಾಗಿ ಬಹಿರಂಗ ಪ್ರಚಾರದಲ್ಲಿ ಪಾಲ್ಗೊಂಡಿಲ್ಲ. ಹೀಗಾಗಿ, ಅವರ ಮನವೊಲಿಸಲು ಬಸವರಾಜ ಬೊಮ್ಮಾಯಿ ಕೊನೆಯ ಯತ್ನ ನಡೆಸಿದರು ಎಂಬ ಮಾತುಗಳು ಪಕ್ಷದ ವಲಯದಲ್ಲಿ ಹರಿದಾಡುತ್ತಿವೆ.
‘ಕೋರೆ ಅವರು ಕಳೆದ 15 ದಿನಗಳಿಂದ ಅಮೆರಿಕ ಪ್ರವಾಸದಲ್ಲಿದ್ದರು. ಹೀಗಾಗಿ ಪ್ರಚಾರಕ್ಕೆ ಬಂದಿಲ್ಲ. ಚುನಾವಣೆ ವಿಚಾರದಲ್ಲಿ ಅವರು ಪಕ್ಷದಿಂದ ಅಂತರ ಕಾಯ್ದುಕೊಂಡಿಲ್ಲ. ಶನಿವಾರದ ಸಭೆಗಳಲ್ಲಿ ಭಾಗವಹಿಸಲಿದ್ದಾರೆ’ ಎಂದು ವಿಧಾನ ಪರಿಷತ್ ಸದಸ್ಯರೂ ಆದ ಚುನಾವಣೆಯ ಬಿಜೆಪಿ ಪ್ರಭಾರಿ ಎನ್.ರವಿಕುಮಾರ ಪ್ರತಿಕ್ರಿಯೆ ನೀಡಿದರು.