ತೆಲಸಂಗ: ‘ಸೋಲಿನ ಭೀತಿ ಎದುರಾಗಿದ್ದರಿಂದ ಹತಾಸೆಗೊಳಗಾಗಿ ಅನಾಗರಿಕರಂತೆ ಮಾತನಾಡುತ್ತಿರುವ ರಮೇಶ ಜಾರಕಿಹೊಳಿಗೆ ಅದೇ ಭಾಷೆಯಲ್ಲಿ ಉತ್ತರ ಕೊಡುವಟ್ಟು ಸಾಮರ್ಥ್ಯ ಇದೆ. ಆದರೂ ಈ ನೆಲದ ಸಂತರ ಸಂಸ್ಕಾರದ ನೆರಳಲ್ಲಿ ಬೆಳೆದ ನಮಗೂ ಅವರಿಗೂ ಇರುವ ವ್ಯತ್ಯಾಸದ ಬಗ್ಗೆ ಜನ ಆಡಿಕೊಳ್ಳಬಾರದು. ಹೀಗಾಗಿ ನಮ್ಮ ಪಕ್ಷದ ಯಾರೊಬ್ಬರೂ ಕೆಟ್ಟದಾಗಿ ಮಾತಾಡಿ ಬಾಯಿಯನ್ನು ಬಚ್ಚಲ ಮಾಡಿಕೊಳ್ಳಬೇಡಿ’ ಎಂದು ಅಥಣಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ ಸವದಿ ಹೇಳಿದರು.
ಸಮೀಪದ ಕೊಟ್ಟಲಗಿ ಗ್ರಾಮದಲ್ಲಿ ಗುರುವಾರ ಮತಯಾಚನೆ ಸಭೆಯಲ್ಲಿ ಮಾತನಾಡಿದ ಅವರು, ‘ಮತದಾರರನ್ನು ತಮ್ಮ ಕಿಸೆಯಲ್ಲಿ ಇಟ್ಟುಕೊಂಡಂತೆ ಅವರ ವರ್ತನೆ ಇದೆ. ದುಡ್ಡಿನಿಂದ ಮತ ಖರಿದಿ ಮಾಡಬಹುದು ಎಂದುಕೊಂಡಿದ್ದಾರೆ. ಅಥಣಿ ಜನ ಸ್ವಾಭಿಮಾನಿಗಳು. ಅಥಣಿ ಆಡಳಿತ ಗೋಕಾಕದಿಂದ ನಡೆಯಲು ಬಿಡುವಷ್ಟು ದಡ್ಡರಿಲ್ಲ’ ಎಂದರು.
‘ಅಥಣಿ ಅಭಿವೃದ್ಧಿ ಪಡಿಸಿದ್ದರ ಬಗ್ಗೆ ರಾಜ್ಯ ಮಾತ್ರವಲ್ಲ. ಪಕ್ಕದ ಮಹಾರಾಷ್ಟ್ರದಲ್ಲಿಯೂ ಲಕ್ಷ್ಮಣ ಸವದಿಯವರಂತೆ ಆಡಳಿತ ಮತ್ತು ಅಭಿವೃದ್ಧಿ ಬೇಕೆಂಬ ಕೂಗು ಕೇಳಿಬರುತ್ತಿದೆ. ರಮೇಶಗೆ ಗೊತ್ತಿಲ್ಲ; ಬರದ ಭೂಮಿಗೆ ಹಸಿರು ಸೀರೆ ಉಡಿಸಿ ರೈತರ ಮೊಗದಲ್ಲಿ ನಗೆ ನೀಡಿದ್ದು ಸವದಿ. ಅಥಣಿಯಲ್ಲಿ ಅಪ್ಪ–ಮಗ ಬಿಟ್ಟರೆ ಮತ್ಯಾರಿಗೂ ಅವಕಾಶವೇ ಬೇಡವೇ ಎಂದು ಪ್ರಶ್ನಿಸುವ ರಮೇಶ ಅವರೆ; ಮೊದಲು ನಿಮ್ಮ ಕುಟುಂಬ ಬಿಟ್ಟು ಬೆರೆಯವರಿಗೆ ಕ್ಷೇತ್ರವನ್ನು ಬಿಟ್ಟುಕೊಟ್ಟು ಮೊದಲು ಮಾದರಿ ಆಗಿ’ ಎಂದೂ ಕುಟುಕಿದರು.
ಮುಖಂಡರಾದ ಗಜಾನನ ಮಂಗಸೂಳಿ, ಸದಾಶಿವ ಬುಟಾಳಿ, ಶ್ರೀಕಾಂತ ಪೂಜಾರಿ, ಬಸವರಾಜ ಬುಟಾಳಿ, ಶ್ಯಾಮರಾವ ಪೂಜಾರಿ, ಶುವು ಗುಡ್ಡಾಪೂರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು