ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್ ಸಂಪರ್ಕ ಪಡೆಯಲು ಇನ್ನು ‘ವಾಸ್ತವ್ಯ ಪ್ರಮಾಣಪತ್ರ’ ಕಡ್ಡಾಯ ಅಲ್ಲ

Last Updated 2 ಜುಲೈ 2022, 9:11 IST
ಅಕ್ಷರ ಗಾತ್ರ

ಬೆಂಗಳೂರು: ವಿದ್ಯುತ್ ಸಂಪರ್ಕ ಪಡೆಯಲು ‘ವಾಸ್ತವ್ಯ ಪ್ರಮಾಣಪತ್ರ’ (ಒಸಿ) ಕಡ್ಡಾಯ ಎಂಬ ನಿಯಮವನ್ನು ರಾಜ್ಯ ಸರ್ಕಾರ ತೆಗೆದು ಹಾಕಿದೆ. ಹೀಗಾಗಿ, ಇನ್ನು‌ ಮುಂದೆ ಗುರುತಿನ ಚೀಟಿ ಹಾಗೂ ಸ್ವತ್ತಿನ ಹಕ್ಕುಪತ್ರ ಇದ್ದರೆ ವಿದ್ಯುತ್ ಸಂಪರ್ಕ ಪಡೆಯಬಹುದು.

ಈ ಸಂಬಂಧ ನಗರಾಭಿವೃದ್ಧಿ ಇಲಾಖೆ ಹೊರಡಿಸಿದ್ದ ತಿದ್ದುಪಡಿ ಆದೇಶವನ್ನು ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿದೆ.

‘ಈ ಆದೇಶದಿಂದ ಬಿಬಿಎಂಪಿ ವ್ಯಾಪ್ತಿಯಲ್ಲಿ ಸುಮಾರು ಐದು ಲಕ್ಷ ಕುಟುಂಬಗಳಿಗೆ ಅನುಕೂಲ ಆಗಲಿದೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಜಾರಿಗೆ ಬಂದಿದ್ದ ಈ ‘ಕತ್ತಲೆ ಭಾಗ್ಯ’ದ ಕಾನೂನನ್ನು ನಮ್ಮ ಸರ್ಕಾರ ಬದಲಾಯಿಸಿದೆ. ಇದರಿಂದ ಎಲ್ಲರ ಮನೆಯಲ್ಲೂ ಬೆಳಕು ಮೂಡಲಿದೆ‘ ಎಂದು ಇಂಧನ ಸಚಿವ ವಿ. ಸುನೀಲ್ ಕುಮಾರ್ ಟ್ವೀಟ್ ಮಾಡಿದ್ದಾರೆ.

ನಿರ್ಮಾಣ ಸಂದರ್ಭದಲ್ಲಿ ನಿಯಮ ಉಲ್ಲಂಘಿಸಿದ ಮನೆ, ವಸತಿ ಸಮುಚ್ಚಯಗಳಿಗೆ ಬಿಬಿಎಂಪಿ ವಾಸ್ತವ್ಯ ಪ್ರಮಾಣಪತ್ರ ನೀಡಲು ನಿರಾಕರಿಸಿದ್ದರೆ ಅಂಥ ಮನೆ ಹಾಗೂ ಫ್ಲಾಟ್‌ಗಳಿಗೆ ವಿದ್ಯುತ್ ಸಂಪರ್ಕ ನೀಡದಂತೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಆದೇಶ ಹೊರಡಿಸಲಾಗಿತ್ತು. ಇದರಿಂದ 5 ಲಕ್ಷಕ್ಕೂ ಹೆಚ್ಚು ಕುಟುಂಬಗಳು ವಿದ್ಯುತ್ ಸಂಪರ್ಕ ಪಡೆಯಲು ವಿಫಲವಾಗಿದ್ದವು. ಬಿಬಿಎಂಪಿ ಹಾಗೂ ಇಂಧನ‌ ಇಲಾಖೆಯ ಈ ಧೋರಣೆ ಜನರ ಆಕ್ರೋಶಕ್ಕೆ ಕಾರಣ ಆಗಿತ್ತು.

ಬೆಂಗಳೂರಿನ ಶಾಸಕರು ಸುನೀಲ್ ಕುಮಾರ್ ಅವರನ್ನು ಭೇಟಿ ಮಾಡಿ ನಿಯಮ‌ ಬದಲಿಸುವಂತೆ ಮನವಿ ಸಲ್ಲಿಸಿದ್ದರು. ಕೈಗಾರಿಕೆ ಇಲಾಖೆ ಹಾಗೂ ಕಾಸಿಯಾ ಸಂಸ್ಥೆ ಕೂಡಾ ನಿಯಮ‌ ಬದಲಾವಣೆಗೆ ಕೋರಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜೊತೆ ಸುನೀಲ್‌ ಕುಮಾರ್‌ ಈ ಬಗ್ಗೆ ಚರ್ಚೆ ನಡೆಸಿದ್ದರು.‌ ಬಳಿಕ ಕೆಇಆರ್‌ಸಿಗೆ ಪತ್ರ ಬರೆಯಲಾಗಿತ್ತು. ಸಾರ್ವಜನಿಕರಿಂದ ಈ ಬಗ್ಗೆ ಅಹವಾಲು ಸ್ವೀಕರಿಸಿದ್ದ ಆಯೋಗ, ತಿದ್ದುಪಡಿ ಆದೇಶ ಹೊರಡಿಸಿತ್ತು. ಅದೀಗ ಈಗ ರಾಜ್ಯಪತ್ರದ ಮೂಲಕ ಅಧಿಕೃತಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT