ಬುಧವಾರ, 29 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ICC World Cup 2023: ಭಾರತ ತಂಡವನ್ನು ಕಾಡುತ್ತಿದೆ ಈ 4 ಸಮಸ್ಯೆಗಳು

Published 4 ಅಕ್ಟೋಬರ್ 2023, 11:15 IST
Last Updated 4 ಅಕ್ಟೋಬರ್ 2023, 11:15 IST
ಅಕ್ಷರ ಗಾತ್ರ

ಬೆಂಗಳೂರು: ಐಸಿಸಿ ಏಕದಿನ ವಿಶ್ವಕಪ್‌ಗೆ ಕ್ಷಣಗಣನೆ ಆರಂಭವಾಗಿದೆ. ಅಕ್ಟೋಬರ್ 5ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಇಂಗ್ಲೆಂಡ್‌ ಹಾಗೂ ನ್ಯೂಜಿಲೆಂಡ್‌ ನಡುವೆ ಮೊದಲ ಪಂದ್ಯ ನಡೆಯಲಿದೆ. ಭಾರತದ ಅಭಿಯಾನವು ಅಕ್ಟೋಬರ್‌ 8ರಂದು ಆರಂಭವಾಗಲಿದ್ದು, ಚೆನ್ನೈನ ಎಂ.ಎ ಚಿದಂಬರಂ ಮೈದಾನದಲ್ಲಿ ಆಸ್ಟ್ರೇಲಿಯಾದ ವಿರುದ್ಧ ಮೊದಲ ಪಂದ್ಯ ಆಡಲಿದೆ.

ಈ ಬಾರಿ ವಿಶ್ವಕಪ್‌ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಭಾರತವೂ ಒಂದಾಗಿದ್ದು, ಅದಕ್ಕಾಗಿ ತಂಡದ ಆಟಗಾರರು ಉತ್ತಮ ಸಿದ್ಧತೆಯನ್ನೂ ನಡೆಸುತ್ತಿದ್ದಾರೆ. ಮೂರನೇ ಬಾರಿಗೆ ಭಾರತ ಏಕದಿನ ವಿಶ್ವಕಪ್ ಎತ್ತಿಹಿಡಿಯುವುದನ್ನು ಕಾಣಲು ಅಭಿಮಾನಿಗಳು ಕೂಡ ಕಾತುರದಿಂದ ಕಾಯುತ್ತಿದ್ದಾರೆ. ಉತ್ತಮ ತಂಡವನ್ನು ಆಯ್ಕೆ ಮಾಡಿದ್ದರೂ ಕೂಡ, ಕೆಲವೊಂದು ಕೊರತೆಗಳು ಹಾಗೂ ದೌರ್ಬಲ್ಯಗಳು ಭಾರತ ತಂಡವನ್ನು ಕಾಡುತ್ತಿದೆ. ಇತ್ತೀಚಿನ ಪಂದ್ಯಗಳಲ್ಲಿ ಭಾರತ ತಂಡದ ಆಟಗಾರರು ಪದೇ ಪದೇ ಮಾಡಿರುವ ತಪ್ಪುಗಳು ಕೂಡ ವಿಶ್ವಕಪ್‌ನಲ್ಲಿ ದುಬಾರಿಯಾಗಿ ಪರಿಣಮಿಸುವ ಸಾಧ್ಯತೆ ಇದೆ.

ಈ ನಾಲ್ಕು ಕೊರತೆಗಳು ಭಾರತ ತಂಡವನ್ನು ಕಾಡುತ್ತಿದೆ

1. ಬಲಗೈ–ಎಡಗೈ ಬ್ಯಾಟಿಂಗ್‌ ಅಸಮತೋಲನ
ವಿಶ್ವಕಪ್‌ಗೆ ಆಯ್ಕೆಯಾಗಿರುವ ತಂಡದಲ್ಲಿ ಬಲಗೈ–ಎಡಗೈ ಬ್ಯಾಟಿಂಗ್ ಸಮತೋಲನವಾಗಿಲ್ಲ. ಇಶಾನ್‌ ಕಿಶನ್ ಬಿಟ್ಟರೆ ಬೇರಾವ ಎಡಗೈ ಬ್ಯಾಟರ್‌ಗಳು ಇಲ್ಲ. ಕೆ.ಎಲ್ ರಾಹುಲ್‌ಗೆ ಅವಕಾಶ ಸಿಕ್ಕರೆ ಇಶಾನ್‌ ಆಡುವುದು ಅನುಮಾನ. ಬೀಸು ಹೊಡೆತಗಳ ಎಡಗೈ ಬ್ಯಾಟರ್‌ಗಳ ಕೊರತೆ ತಂಡದಲ್ಲಿ ಎದ್ದು ಕಾಣುತ್ತಿದೆ. ಕೆಳ ಕ್ರಮಾಂಕದಲ್ಲಿ ಆಡುವ ರವೀಂದ್ರ ಜಡೇಜ ಅವರನ್ನು ಹೆಚ್ಚಾಗಿ ನಂಬುವಂತಿಲ್ಲ. ಪಂದ್ಯದ ರಣತಂತ್ರದಲ್ಲಿ ಎಡಗೈ–ಬಲಗೈ ಬ್ಯಾಟರ್‌ಗಳ ಉಪಸ್ಥಿತಿಯೂ ಪ್ರಮುಖ ಪಾತ್ರ ವಹಿಸಲಿದ್ದು, ಭಾರತ ತಂಡಲ್ಲಿ ಈ ಕೊರತೆ ಕಾಡುತ್ತಿದೆ.
2. ಪಾರ್ಟ್‌ಟೈಮ್‌ ಬೌಲರ್‌ಗಳ ಕೊರತೆ
ಪಾರ್ಟ್‌ಟೈಮ್‌ ಬೌಲರ್‌ಗಳ ಕೊರತೆ ಕೂಡ ಭಾರತ ತಂಡವನ್ನು ಬಾಧಿಸುತ್ತಿದೆ. ವಿರಾಟ್‌ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ ಅವರು ಬೌಲಿಂಗ್‌ ಮಾಡುತ್ತಾರೆಯಾದರೂ, ಇತ್ತೀಚಿನ ದಿನಗಳಲ್ಲಿ ಅವರು ಬಾಲ್ ಕೈಗೆತ್ತಿಕೊಂಡಿದ್ದು ತೀರಾ ವಿರಳ. 2011ರ ವಿಶ್ವಕಪ್‌ ಗೆಲ್ಲುವಲ್ಲಿ ಪಾರ್ಟ್‌ಟೈಮ್‌ ಬೌಲರ್‌ಗಳ ಕೊಡುಗೆ ಕೂಡ ಇತ್ತು. ಯುವರಾಜ್‌ ಸಿಂಗ್‌ ಬ್ಯಾಟಿಂಗ್‌ ಜತೆಗೆ ಬೌಲಿಂಗ್‌ನಲ್ಲೂ ಅದ್ಭುತ ಪ್ರದರ್ಶನ ನೀಡಿದ್ದರು. ವಿರೇಂದ್ರ ಸೆಹ್ವಾಗ್‌, ಸಚಿನ್‌ ತೆಂಡೂಲ್ಕರ್‌ ಹಾಗೂ ಸುರೇಶ್‌ ರೈನಾ ಕೂಡ ಬಾಲ್‌ ಕೈಗೆತ್ತಿಕೊಂಡಿದ್ದರು.
3. ಕಳಪೆ ಫೀಲ್ಡಿಂಗ್‌
ಇತ್ತೀಚಿನ ಪಂದ್ಯಗಳಲ್ಲಿ ಭಾರತ ತಂಡದ ಆಟಗಾರರ ಕಳಪೆ ಫೀಲ್ಡಿಂಗ್ ಕೂಡ ಟೀಕೆಗೆ ಗುರಿಯಾಗಿದೆ. ಸುಲಭದ ಕ್ಯಾಚ್‌ಗಳನ್ನು ಕೈಚೆಲ್ಲುವುದು, ಕಳಪೆ ಕ್ಷೇತ್ರ ರಕ್ಷಣೆ ಭಾರತದ ತಂಡದ ದೌರ್ಬಲ್ಯಗಳಲ್ಲಿ ಒಂದು. ಇಬ್ಬರು ಮೂವರು ಆಟಗಾರರು ಹೊರತುಪಡಿಸಿದರೆ ಉಳಿದ ಆಟಗಾರರು ಕ್ಷೇತ್ರ ರಕ್ಷಣೆಯಲ್ಲಿ ಸುಧಾರಿಸಬೇಕಿದೆ.
4. ಡೆತ್‌ ಓವರ್‌ಗಳಲ್ಲಿ ಬೌಲಿಂಗ್‌ ಸಮಸ್ಯೆ
ಪವರ್‌ಪ್ಲೇನಲ್ಲಿ ಹೊಸ ಬಾಲ್‌ನಲ್ಲಿ ಜಸ್‌ಪ್ರೀತ್‌ ಬೂಮ್ರಾ, ಮೊಹಮ್ಮದ್‌ ಶಮಿ ಹಾಗೂ ಮೊಹಮ್ಮದ್‌ ಸಿರಾಜ್‌ ಉತ್ತಮ ಬೌಲಿಂಗ್‌ ಪ್ರದರ್ಶನ ನೀಡುತ್ತಿದ್ದಾರೆ. ಆದರೆ ಕೊನೆಯ ಓವರ್‌ಗಳಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನ ನೀಡಲು ವಿಫಲವಾಗುತ್ತಿದ್ದಾರೆ. ಡೆತ್‌ ಓವರ್‌ಗಳಲ್ಲಿ ಹೆಚ್ಚಿನ ರನ್‌ ಹರಿದುಹೋಗುತ್ತಿದೆ. ಈ ಸಮಸ್ಯೆಯನ್ನು ಭಾರತ ಉತ್ತಮ ಪಡಿಸಿಕೊಳ್ಳಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT