ನವದೆಹಲಿ, ಜ. 30 (ಯುಎನ್ಐ, ಪಿಟಿಐ)– ಮಹಾತ್ಮಾ ಗಾಂಧಿ ಅವರ 46ನೇ ಪುಣ್ಯತಿಥಿಯಾದ ಇಂದು ರಾಷ್ಟ್ರದಾದ್ಯಂತ ಎಲ್ಲ ನಗರಗಳಲ್ಲಿ ಮುಂಗೈಗೆ ಏಕತಾ ರಕ್ಷಾ ಬಂಧನ ಕಟ್ಟಿಕೊಂಡ ಸಾವಿರಾರು ಮಂದಿ ಕೈಗಳಿಗೆ ಕೈ ಬೆಸೆದು ಮಾನವ ಸರಪಳಿ ರಚಿಸಿದರು.
ದೆಹಲಿಯಲ್ಲಿ ಗಾಂಧೀಜಿ ಅವರ ಸಮಾಧಿ ಇರುವ ರಾಜಘಾಟ್ಗೆ ಗಣ್ಯರು ಭೇಟಿ ನೀಡಿ ಹೂಮಾಲೆಗಳನ್ನು ಇರಿಸಿದರು.
ಕಪಿಲ್ ಈಗ ವಿಶ್ವಪುರುಷ
ಬೆಂಗಳೂರು, ಜ. 30– ಕಪಿಲ್ ದೇವ್ ಅವರು ನ್ಯೂಜಿಲೆಂಡ್ನ ಸರ್ ರಿಚರ್ಡ್ ಹ್ಯಾಡ್ಲಿ ಅವರ 431 ಟೆಸ್ಟ್ ವಿಕೆಟ್ಗಳ ವಿಶ್ವದಾಖಲೆಯನ್ನು ಸರಿಗಟ್ಟುವುದರೊಂದಿಗೆ ಭಾರತ ತಂಡದವರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಎರಡನೆ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ಮೇಲೆ ಇನಿಂಗ್ಸ್ ಮತ್ತು 95 ರನ್ಗಳ ಸುಲಭ ವಿಜಯ ಪಡೆದರು.
ದಲಿತನಿಗೆ ಮಲ ತಿನ್ನಿಸಿದ ಪ್ರಕರಣ
ಕೋಲಾರ, ಜ. 30– ಕೋಲಾರ ತಾಲ್ಲೂಕು ಹರಟಿ ಗ್ರಾಮದಲ್ಲಿ ಕಣ್ಣಪ್ಪ (34) ಎಂಬ ದಲಿತನ ಮೇಲೆ ಹಲ್ಲೆ ನಡೆಸಿದ್ದೇ ಅಲ್ಲದೆ ಆತನಿಗೆ ಬಲಾತ್ಕಾರವಾಗಿ ಮಲ ತಿನ್ನಿಸಲಾಯಿತು ಎಂಬ ಆರೋಪದ ಮೇಲೆ ತಾಲ್ಲೂಕು ಕಾಂಗ್ರೆಸ್ (ಐ) ಸಮಿತಿಯ ಅಧ್ಯಕ್ಷ ವೆಂಕಟರಾಮೇಗೌಡ ಅವರೂ ಸೇರಿದಂತೆ ಹರಟಿ ಗ್ರಾಮದ ಎಂಟು ಜನ ಸವರ್ಣೀಯರ ವಿರುದ್ಧ ಪೊಲೀಸರು ಮೊಕದ್ದಮೆ ದಾಖಲು ಮಾಡಿಕೊಂಡಿದ್ದಾರೆ.