ಬೆಂಗಳೂರು, ಜ. 31– ಪೊಲೀಸ್ ವ್ಯವಸ್ಥೆಯನ್ನು ಮಾನವೀಯಗೊಳಿಸಿ, ನಾಗರಿಕರು ಧೈರ್ಯವಾಗಿ ಪೊಲೀಸ್ ಠಾಣೆಗೆ ಹೋಗಿ ದೂರು ಕೊಡುವಂತಹ ವಾತಾವರಣ ನಿರ್ಮಿಸುವುದಕ್ಕೆ ತಾವು ಮೊದಲ ಆದ್ಯತೆ ಕೊಡುವುದಾಗಿ ರಾಜ್ಯದ ನೂತನ ಪೊಲೀಸ್ ಮಹಾನಿರ್ದೇಶಕ ಆರ್. ರಾಮಲಿಂಗಂ ಇಂದು ಇಲ್ಲಿ ಹೇಳಿದರು.
ಇಂದು ನಿವೃತ್ತಿಯಾದ ಪೊಲೀಸ್ ಮಹಾನಿರ್ದೇಶಕ ಎಸ್.ಎನ್.ಎಸ್.ಮೂರ್ತಿ ಅವರಿಂದ ಅಧಿಕಾರ ವಹಿಸಿಕೊಂಡ ನಂತರ ಪತ್ರಕರ್ತರ ಜತೆ ಮಾತನಾಡಿದ ಅವರು, ನಾಗರಿಕರ ಜತೆ ಸೌಜನ್ಯದಿಂದ ಹೇಗೆ ವರ್ತಿಸಬೇಕು ಎಂಬ ಬಗ್ಗೆ ರಾಜ್ಯದಾದ್ಯಂತ ಪೊಲೀಸರಿಗೆ ತರಬೇತಿ ನೀಡಲಾಗುವುದು ಎಂದರು.
ಡಂಕೆಲ್ ವಿರೋಧಿ ಸಪ್ತಾಹ
ಬೆಂಗಳೂರು, ಜ. 31 – ರಾಷ್ಟ್ರದ ಸ್ವಾವಲಂಬನೆ, ಸಾರ್ವಭೌಮತ್ವಕ್ಕೆ ಧಕ್ಕೆ ತರುವ ಡಂಕೆಲ್ ಪ್ರಸ್ತಾವಕ್ಕೆ ಒಪ್ಪಿಗೆ ನೀಡಬಾರದೆಂದು ಒತ್ತಾಯಿಸಿ ಭಾರತೀಯ ಜನತಾ ಪಕ್ಷವು ಫೆಬ್ರುವರಿ 5ರಿಂದ 11ರವರೆಗೆ ರಾಜ್ಯದಾದ್ಯಂತ ಡಂಕೆಲ್ ವಿರೋಧಿ ಸಪ್ತಾಹವನ್ನು ಆಚರಿಸಲಿದೆ.
‘ಕೃಷಿ ಕ್ಷೇತ್ರಕ್ಕೆ ಮಾರಕವಾಗಿರುವ ಡಂಕೆಲ್ ಪ್ರಸ್ತಾವಕ್ಕೆ ಕೇಂದ್ರ ಸರ್ಕಾರ ಅಂತಿಮ ಒಪ್ಪಿಗೆ ಸೂಚಿಸಬಾರದು ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ಈಶ್ವರಪ್ಪ ಒತ್ತಾಯಿಸಿದರು.