ರಾಜಕೀಯ ಪಕ್ಷಗಳ ವಿರುದ್ಧ ಮೊಕದ್ದಮೆ ಬೆಂಗಳೂರು, ಅ. 19– ಚುನಾವಣಾ ಆಯೋಗದ ಮಾರ್ಗಸೂಚಿ ಉಲ್ಲಂಘಿಸಿ ಬರಹ ಹಾಗೂ ಭಿತ್ತಿಪತ್ರಗಳ ಮೂಲಕ ಸಾರ್ವಜನಿಕ ಕಟ್ಟಡಗಳ ಗೋಡೆಗಳನ್ನು ವಿರೂಪಗೊಳಿಸಿದ ಅರೋಪದ ಮೇಲೆ ಆಡಳಿತಾರೂಢ ಕಾಂಗ್ರೆಸ್ ಪಕ್ಷವೂ ಸೇರಿದಂತೆ ನಾಲ್ಕು ರಾಜಕೀಯ ಪಕ್ಷಗಳ ವಿರುದ್ಧ ನಗರದ ಪೊಲೀಸರು ಆರು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.
‘ಶೇಷನ್ ಷರತ್ತು ಕಾಂಗೈಗೆ ಅನ್ವಯ ಇಲ್ಲ’ ವಾರಂಗಲ್, ಅ.19 (ಯುಎನ್ಐ)– 4 ತಿಂಗಳೊಳಗೆ ಸಾಂಸ್ಥಿಕ ಚುನಾವಣೆ ಪೂರ್ತಿಗೊಳಿಸಿದ ಪಕ್ಷಗಳ ಮಾನ್ಯತೆ ರದ್ಧುಪಡಿಸಲಾಗುವುದು ಎಂಬ ಟಿ.ಎನ್. ಶೇಷನ್ ಅವರ ಬೆದರಿಕೆ ಬಗ್ಗೆ ಇಂದು ಪ್ರಧಾನಿ ಹಾಗೂ ಎಐಸಿಸಿ ಅಧ್ಯಕ್ಷ ಪಿ.ವಿ. ನರಸಿಂಹರಾವ್ ಪ್ರತಿಕ್ರಿಯೆ ವ್ಯಕ್ತಪಡಿಸುತ್ತ ‘ಆ ವಿಷಯ ಭಾರತದ ರಾಷ್ಟ್ರೀಯ ಕಾಂಗ್ರೆಸ್ಸಿಗೆ ಅನ್ವಯವಾಗದು’ ಎಂದರು.
ಆಯೋಧ್ಯೆಯ ಶ್ರೀರಾಮಂದಿರ ನಿರ್ಮಾಣದಲ್ಲಿ ಹಸ್ತಕ್ಷೇಪ ಮಾಡುವ ಯಾವ ಉದ್ದೇಶವೂ ಸರಕಾರಕ್ಕಿಲ್ಲ, ಇದೀಗ ತಾನೇ ರಚಿತವಾದ ರಾಜಕೀಯೇತರ ಶಂಕರಾಚಾರ್ಯರ ಟ್ರಸ್ಟ್ ಸರಕಾರದ ಉದ್ದೇಶಕ್ಕೆ ಅನುಗುಣವಾಗಿಯೇ ಸ್ಥಾಪನೆಗೊಂಡಿದ್ದು, ಅಯೋಧ್ಯೆ ಸಮಸ್ಯೆಯನ್ನು ಬಗೆಹರಿಸುವುದು ಎಂಬ ವಿಶ್ವಾಸವನ್ನು ರಾವ್ ವ್ಯಕ್ತಪಡಿಸಿದರು
ಕಾಂಗೈ ಟಿಕೆಟ್ ಹಂಚಿಕೆ ನಾಟಕ: ವೀರೇಂದ್ರ ಟೀಕೆ ಬೆಂಗಳೂರು, ಅ. 19– ‘ನವೆಂಬರ್ನಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಟಿಕೆಟ್ ಹಂಚಿಕೆ ವಿಷಯದಲ್ಲಿ ಹೈಕಮಾಂಡ್ ತೀರ್ಮಾನವೇ ಅಂತಿಮ. ಈಗ ನಡೆಯುತ್ತಿರುವುದೆಲ್ಲ ನಾಟಕ’ ಎಂದು ಕಾಂಗೈನ ಹಿರಿಯ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್ ಇಂದು ಇಲ್ಲಿ ಟೀಕಿಸಿದರು.
ಬೆಂಗಳೂರು ವರದಿಗಾರರ ಕೂಟ ಏರ್ಪಡಿಸಿದ್ದ ಪತ್ರಿಕಾ ಸಂವಾದದಲ್ಲಿ ಮಾತನಾಡಿದರು.