ಬೆಂಗಳೂರು, ನ. 23– ಮೋಜು, ತರಬೇತಿ, ಕ್ರೀಡೆ, ಗಗನ ಛಾಯಾಗ್ರಹಣಕ್ಕೆ ಆದರ್ಶಪ್ರಾಯವಾದ ಎರಡು ಸೀಟುಗಳ ಸುಸಜ್ಜಿತ ವಿಮಾನ ‘ಹಂಸ’ ಇಂದು ಮುಗಿಲಿನಲ್ಲಿ ವಿಹಾರ ಆರಂಭಿಸುವುದರೊಂದಿಗೆ ಭಾರತೀಯ ವಾಯುಯಾನ ಚರಿತ್ರೆಯಲ್ಲಿ ಹೊಸದೊಂದು ಶಕೆ ಗರಿಗೆದರಿತು.
ವಿಧಾನಸಭೆ ವಿಶೇಷ ಅಧಿವೇಶನ: ದೇಶಪಾಂಡೆ ಆಗ್ರಹ
ಹುಬ್ಬಳ್ಳಿ, ನ. 23– ರೈತರ ಬೆಳೆ ಸಾಲವನ್ನು ಬಡ್ಡಿ ಸಹಿತ ಮನ್ನಾ ಮಾಡಬೇಕೆಂದು ಇಂದು ಇಲ್ಲಿ ಆಗ್ರಹಪಡಿಸಿದ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ವಿ. ದೇಶಪಾಂಡೆ ಅವರು ಇತ್ತೀಚಿನ ಅತಿವೃಷ್ಟಿ ಹಾಗೂ ಭೂಕಂಪದಿಂದ ಉದ್ಭವಿಸಿದ ಪರಿಸ್ಥಿತಿ ಮತ್ತು ರಾಜ್ಯದ ಹಣಕಾಸು ಸ್ಥಿತಿಯ ಚರ್ಚೆಗೆ ವಿಧಾನಸಭೆಯ ವಿಶೇಷ ಅಧಿವೇಶನ ವೊಂದನ್ನು ಕರೆಯಲು ಆಗ್ರಹಿಸಿದರು.
ರಾಜ್ಯಗಳ ಹಣಕಾಸು ಖೋತಾ ಏರಿಕೆ
ಮುಂಬೈ, ನ. 23 (ಯುಎನ್ಐ)– 1993–94ರಲ್ಲಿ ರಾಜ್ಯ ಸರ್ಕಾರಗಳ ಒಟ್ಟು ಖೋತಾ 23,706 ಕೋಟಿ ರೂಪಾಯಿ ಆಗುವುದೆಂದು ಅಂದಾಜು ಮಾಡಲಾಗಿದೆ. ಇದು ಕಳೆದ ವರ್ಷದ ಖೋತಾಕ್ಕಿಂತ ಶೇ 18.6ರಷ್ಟು ಅಧಿಕ.
ರಿಸರ್ವ್ ಬ್ಯಾಂಕಿನ ಹಣಕಾಸು ವಿಶ್ಲೇಷಣೆ ವಿಭಾಗ ಮಾಡಿರುವ ಪರಾಮರ್ಶೆಯಿಂದ ಈ ಅಂಶ ವ್ಯಕ್ತವಾಗಿದೆ.
ರಾಜ್ಯಕ್ಕೆ ರೂ. 386 ಕೋಟಿ ವಿಶ್ವಬ್ಯಾಂಕ್ ನೆರವು
ರಾಯಚೂರು, ನ. 23– ರಾಜ್ಯದ ಹತ್ತು ಜಿಲ್ಲೆಗಳ ಒಂದು ಸಾವಿರ ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರು ಮತ್ತು ಪರಿಸರ ನೈರ್ಮಲ್ಯ ಕಲ್ಪಿಸಲು 386 ಕೋಟಿ ರೂ. ನೆರವನ್ನು ವಿಶ್ವಬ್ಯಾಂಕ್ ನೀಡಲಿದೆ ಎಂದು ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಇಂದು ಪ್ರಕಟಿಸಿದರು.