ನವದೆಹಲಿ, ಜ.5–ಕರ್ನಾಟಕದ ರಾಜಕೀಯ ಬಿಕ್ಕಟ್ಟಿಗೆ ಪರಿಹಾರವನ್ನು ಕಂಡು ಹಿಡಿಯಲು ಮೂವರು ವೀಕ್ಷಕರ ತಂಡವನ್ನು ಇನ್ನು ಒಂದೆರಡು ದಿನಗಳಲ್ಲೇ ಕಳುಹಿಸಲು ಕಾಂಗ್ರೆಸ್–ಐ ಹೈಕಮಾಂಡ್ ತೀರ್ಮಾನಿಸಿದೆ ಎಂದು ನಂಬಲರ್ಹ ಮೂಲಗಳಿಂದ ತಿಳಿದು ಬಂದಿದೆ. ರಾಜ್ಯಕ್ಕೆ ಇತ್ತೀಚೆಗೆ ಭೇಟಿ ನೀಡಿದ್ದ ಕೇಂದ್ರ ಗೃಹ ಸಚಿವ ಎಸ್.ಬಿ. ಚವಾಣ್ ಅವರು ಪ್ರಧಾನಿ ಪಿ.ವಿ. ನರಸಿಂಹ ರಾವ್ ಅವರಿಗೆ ಸಲ್ಲಿಸಿರುವ ವರದಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ ಅವರಿಗೆ ಪ್ರತಿಕೂಲಕರವಾಗಿದೆ ಎಂದು ಹೇಳಲಾಗಿದೆ.