ನವದೆಹಲಿ, ಮಾ. 27 (ಯುಎನ್ಐ)– ಪರಸ್ಪರ ಸಹಕಾರಿಯಾದ ಆರ್ಥಿಕ ಸಂಬಂಧಗಳ ವೃದ್ಧಿ, ಮುಂದುವರೆದ ದೇಶಗಳ ಜಿ–7 ಗುಂಪಿನೊಂದಿಗೆ ಹೆಚ್ಚಿನ ಸಹಯೋಗ ಮತ್ತು ವಿಶ್ವಸಂಸ್ಥೆಯ ಸ್ವರೂಪದ ಪುನರ್ರಚನೆ ಪರಿಶೀಲನೆ– ಇವು ನಾಳೆಯಿಂದ ಇಲ್ಲಿ ಆರಂಭವಾಗಲಿರುವ ಜಿ–15 ದೇಶಗಳ ನಾಲ್ಕನೇ ಶೃಂಗ ಸಭೆಯಲ್ಲಿ ಚರ್ಚಿತವಾಗಲಿರುವ ಮುಖ್ಯ ವಿಷಯಗಳು.
ಜಿಂಬಾಬ್ವೆ, ಇಂಡೋನೇಷ್ಯ, ಮಲೇಷಿಯ, ನೈಜೀರಿಯ, ಸೆನಗಲ್ ಮತ್ತು ಅರ್ಜೆಂಟೀನಗಳು ಭಾಗವಹಿಸಲಿರುವ ಜಿ–15 ಶೃಂಗ ಸಭೆಯನ್ನು ಅಧ್ಯಕ್ಷ ದೇಶವಾಗಿರುವ ಭಾರತದ ಪ್ರಧಾನಿ ಪಿ.ವಿ. ನರಸಿಂಹರಾವ್ ಉದ್ಘಾಟಿಸಲಿದ್ದಾರೆ.
ಕರಾಚಿಯಲ್ಲಿ ಹಿಂಸಾಚಾರ ನಾಲ್ಕು ಸಾವು
ಕರಾಚಿ, ಮಾ. 27 (ಎಪಿ)– ಕರಾಚಿಯಲ್ಲಿ ಇಂದು ಮುಷ್ಕರ ನಡೆಯುತ್ತಿದ್ದ ಕಾಲದಲ್ಲಿ ಭಾರೀ ಹಿಂಸಾಚಾರ ಸಂಭವಿಸಿ ಕನಿಷ್ಠ ನಾಲ್ಕು ಮಂದಿ ಸತ್ತಿದ್ದಾರೆ. ಈ ಸಂದರ್ಭದಲ್ಲಿ ಹಲವಾರು ಕಾರುಗಳು ಪುಡಿಯಾಗಿದ್ದಲ್ಲದೆ ಇಡೀ ನಗರವೇ ಸ್ತಬ್ಧವಾಗಿತ್ತು.
ಮೊಯಿಲಿ ಪಾದದ ಮೂಳೆ ಮುರಿತ: ವಿಶ್ರಾಂತಿಗೆ ಸಲಹೆ
ಬೆಂಗಳೂರು, ಮಾ. 27– ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಅವರು ತಮ್ಮ ಮನೆಯ ಮೆಟ್ಟಿಲುಗಳಿಂದ ಜಾರಿದ್ದರಿಂದ ಅವರ ಬಲಪಾದದ ಮೂಳೆ ಸಣ್ಣ ಪ್ರಮಾಣದಲ್ಲಿ ಮುರಿದಿದ್ದು, ಪ್ಲಾಸ್ಟರ್ ಹಾಕಲಾಗಿದೆ. ವಿಶ್ರಾಂತಿ ತೆಗೆದುಕೊಳ್ಳುವಂತೆ ವೈದ್ಯರು ಅವರಿಗೆ ಸಲಹೆ ಮಾಡಿದ್ದಾರೆ.