ಬೆಂಗಳೂರು, ಆ. 22– ಊರು, ದೇವಸ್ಥಾನ, ಹೋಟೆಲ್, ಬಾವಿ ಮತ್ತು ನಲ್ಲಿಗಳಿಗೆ ಪ್ರವೇಶವಿಲ್ಲದೆ ಸಾರ್ವಜನಿಕ ಬದುಕಿನಿಂದ ದೂರ ಉಳಿದ ದಲಿತರು ಮತ್ತು ಹಿಂದುಳಿದ ವರ್ಗಗಳಿಗೆ ದನಿ ಕೊಟ್ಟ ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸ್ ಅವರ ಪ್ರತಿಮೆ ವಿಧಾನಸೌಧದ ಪಶ್ಚಿಮ ದ್ವಾರದಲ್ಲಿ ಅನಾವರಣಗೊಳ್ಳಲು ಸಿದ್ಧವಾಗಿದೆ.
ಕೈ ಮೇಲೆತ್ತಿರುವ ಎಂಟೂವರೆ ಅಡಿ ಎತ್ತರದ ಪ್ರತಿಮೆಯನ್ನು 1,100 ಕೆ.ಜಿ ಕಂಚಿನ ಲೋಹದಿಂದ 9 ಲಕ್ಷ ರೂಪಾಯಿ ವೆಚ್ಚದಲ್ಲಿ ತಯಾರಿಸಲಾಗಿದೆ. ನಾಡಿನ ಖ್ಯಾತ ಶಿಲ್ಪಿ ವೆಂಕಟಾಚಲಪತಿ ಅವರು ಏಳು ತಿಂಗಳಲ್ಲಿ ಕಂಚಿಗೆ ಜೀವ ತುಂಬಿದ್ದಾರೆ. ಶಿಲ್ಪಿಗಳಾದ ಕನಕಾ ಮೂರ್ತಿ, ನಾಗಪುರದ ಸುಧಾಕರ ಬೇಲೇಕರ್ ಅವರು ವೆಂಕಟಾಚಲಪತಿ ಅವರ ಜತೆ ಕೈಜೋಡಿಸಿದ್ದಾರೆ.
‘ಆತ್ಮಕಥೆ’ ಒಲ್ಲದ ಆರ್ವಿ
ಮದ್ರಾಸ್, ಆ. 22 (ಯುಎನ್ಐ)– ‘ರಾಷ್ಟ್ರಪತಿಯಾಗಿ ನನ್ನ ದಿನಗಳು’ ಪುಸ್ತಕ ಬರೆದು ಕಾಂಗ್ರೆಸ್ಸಿಗರ ಆಕ್ರೋಶಕ್ಕೆ ಗುರಿಯಾದ ಮಾಜಿ ರಾಷ್ಟ್ರಪತಿ ಆರ್. ವೆಂಕಟರಾಮನ್ ಅವರು ತಮ್ಮ ಆತ್ಮಕಥೆ ಬರೆಯುವ ಆಲೋಚನೆ ಹೊಂದಿಲ್ಲ.