ಉರ್ದು ವಾರ್ತೆಗೆ ಉಗ್ರ ಪ್ರತಿಭಟನೆ ಬೆಂಗಳೂರು, ಅ. 6– ದೂರದರ್ಶನದಲ್ಲಿ ಉರ್ದು ವಾರ್ತಾ ಪ್ರಸಾರ ವಿರೋಧಿಸಿ ಕಳೆದ ಮೂರು ದಿನಗಳಿಂದ ನಗರದಾದ್ಯಂತ ನಡೆಯುತ್ತಿರುವ ಚಳವಳಿಯು ಇಂದು ಹಿಂಸಾಚಾರಕ್ಕೆ ತಿರುಗಿ ಸಚಿವರೊಬ್ಬರ ಕಾರು ಮತ್ತು ಅನೇಕ ಬಿಟಿಎಸ್ ಬಸ್ಗಳು ಪ್ರತಿಭಟನಾಕಾರರು ನಡೆಸಿದ ಕಲ್ಲು ತೂರಾಟಕ್ಕೆ ಸಿಕ್ಕಿದವು.
ಕಲ್ಲು ತೂರಾಟದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಎ.ಬಿ. ಮಾಲಕರೆಡ್ಡಿ ಹಾಗೂ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿ ಗಿರೀಶ್ಲಾಲ್ ಠಾಕೂರ್ ಲಾಲ್ ನಾನಾವತಿ ಅವರ ಕಾರುಗಳು ಜಖಂಗೊಂಡಿವೆ. ಪ್ರತಿಭಟನಾಕಾರರು ನಡೆಸಿದ ದಾಳಿಯಲ್ಲಿ ಆರೋಗ್ಯ ಸಚಿವರ ಆಪ್ತ ಸಹಾಯಕ ಮತ್ತು ಕಾರಿನ ಚಾಲಕ ಗಾಯಗೊಂಡಿದ್ದಾರೆ.
ಸಮಯ ಬರಲಿ: ಡಾ. ರಾಜ್ ಬೆಂಗಳೂರು, ಅ. 6– ‘ಆ ಸಮಯ ಬರಲಿ ಈಗ ಏನೂ ಹೇಳೋದಿಲ್ಲ’– ಇದು ಬೆಂಗಳೂರು ದೂರದರ್ಶನ ಉರ್ದು ವಾರ್ತೆ ಪ್ರಸಾರವನ್ನು ವಿರೋಧಿಸಿ ತೀವ್ರ ಪ್ರತಿಭಟನೆಗೆ ಮುಂದಾಗಿರುವ ಕನ್ನಡ ಸಾಹಿತ್ಯ ಪರಿಷತ್ತು ಸೇರಿದಂತೆ ನಾಡಿನ ಹಲವು ಕನ್ನಡಪರ ಸಂಘ ಸಂಸ್ಥೆಗಳ ಪ್ರಮುಖರು ಹೋರಾಟದ ನಾಯಕತ್ವ ವಹಿಸಿಕೊಳ್ಳುವಂತೆ ಮನವಿ ಮಾಡಿರುವ ಬಗ್ಗೆ ಡಾ. ರಾಜ್ ಅವರ ಗಮನ ಸೆಳೆದಾಗ ಅವರು ಈ ಮೇಲಿನಂತೆ ಪ್ರತಿಕ್ರಿಯಿಸಿದರು.
ದಸರಾ: ಜಂಬೂ ಸವಾರಿ ರದ್ದು ಬೆಂಗಳೂರು, ಅ. 6– ಪ್ಲೇಗ್ ಭೀತಿಯ ಹಿನ್ನೆಲೆಯಲ್ಲಿ ಅಕ್ಟೋಬರ್ 14ರಂದು ನಡೆಯಬೇಕಿದ್ದ ಐತಿಹಾಸಿಕ ದಸರಾ ಮೆರವಣಿಗೆ ‘ಜಂಬೂ ಸವಾರಿ’ ಹಾಗೂ ಪಂಜಿನ (ಟಾರ್ಚ್ಲೈಟ್) ಕವಾಯತನ್ನು ರಾಜ್ಯ ಸರ್ಕಾರ ರದ್ದುಪಡಿಸಿದೆ.
ಆದರೆ, ಉಳಿದ ಸಾಂಪ್ರದಾಯಿಕ ಸಭೆ– ಸಮಾರಂಭಗಳು ಎಂದಿನಂತೆ ನಡೆಯಲಿವೆ ಎಂದು ರೇಷ್ಮೆ ಖಾತೆ ರಾಜ್ಯ ಸಚಿವ ಡಾ. ಜಿ. ಪರಮೇಶ್ವರ ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಮೆರವಣಿಗೆಯನ್ನು ರದ್ದು ಮಾಡಿದರೂ ಮೈಸೂರು ಅರಮನೆ ಆವರಣದಲ್ಲಿ ಅಕ್ಟೋಬರ್ 14ರಂದು ಎಂದಿನಂತೆ ಸಾಂಪ್ರದಾಯಿಕ ನಂದಿಧ್ವಜ ಪೂಜೆ ನಡೆಯಲಿದೆ. ಜತೆಗೆ ವಸ್ತುಪ್ರದರ್ಶನ, ಕುಸ್ತಿ, ಕ್ರೀಡೆ, ಚಲನಚಿತ್ರ ಮತ್ತು ಸಂಗೀತೋತ್ಸವಗಳು ಜರುಗಲಿವೆ ಎಂದು ಪರಮೇಶ್ವರ ತಿಳಿಸಿದರು.