ದಳಕ್ಕೆ ಗ್ರಾಮೀಣರ ಒಲವು: ದೇವೇಗೌಡ
ಬೆಂಗಳೂರು, ನ. 16– ‘ಶೀಘ್ರದಲ್ಲೇ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಜನತಾದಳ ಹಾಗೂ ಕಾಂಗೈ ನಡುವೆ ತೀವ್ರ ಸೆಣಸಾಟ ನಡೆಯಲಿದೆ’ ಎಂದು ಜನತಾದಳದ ಅಧ್ಯಕ್ಷ ಎಚ್.ಡಿ. ದೇವೇಗೌಡ ಅವರು ಇಂದು ಇಲ್ಲಿ ವ್ಯಾಖ್ಯಾನಿಸಿದರು. ರಾಜ್ಯ ಸರ್ಕಾರದ ದಿಕ್ಕೆಟ್ಟ ಆಡಳಿತದಿಂದಲೂ ಬೇಸತ್ತಿರುವ ಜನರು ಕಾಂಗೈ ಬಗ್ಗೆ ಕೆಂಡ ಕಾರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಅದರಲ್ಲೂ ವಿಶೇಷವಾಗಿ, ಗ್ರಾಮೀಣ ಪ್ರದೇಶದ ಜನರಿಗೆ ದಳದ ಬಗ್ಗೆ ಹೆಚ್ಚಿನ ಒಲವಿದೆ ಎಂಬುದು ತಮ್ಮ ಪ್ರವಾಸದ ಸಂದರ್ಭದಲ್ಲಿ ವ್ಯಕ್ತವಾಗಿದೆ ಎಂದು ಅವರು ಹೇಳಿದರು.