ಶಾಸನಸಭೆಯಲ್ಲಿ ಮಹಿಳೆಯರಿಗೆ ಶೇ 25 ಸ್ಥಾನ ಮೀಸಲು ಬೆಂಗಳೂರು, ಮಾರ್ಚಿ 8– ರಾಜ್ಯ ಶಾಸನಸಭೆಯಲ್ಲಿ ಮಹಿಳೆಯರಿಗೆ ಶೇ 25ರಷ್ಟು ಸ್ಥಾನ ಮೀಸಲಾತಿಗೆ ಪೂರಕವಾಗಿ ಪ್ರಜಾಪ್ರತಿನಿಧಿ ಕಾಯ್ದೆಗೆ ತಿದ್ದುಪಡಿ ಮಾಡುವಂತೆ, ಬರುವ ವಿಧಾನಮಂಡಲದ ಅಧಿವೇಶನದಲ್ಲಿ ಠರಾವು ಅಂಗೀಕರಿಸಿ ಕೇಂದ್ರಕ್ಕೆ ಕಳುಹಿಸಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ. ದೇವೇಗೌಡ ಪ್ರಕಟಿಸಿದರು.
ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಮತ್ತು ಮಹಿಳಾ ಹಾಗೂ ಮಕ್ಕಳ ಅಭಿವೃದ್ಧಿ ಇಲಾಖೆ ಸಂಯುಕ್ತವಾಗಿ ಏರ್ಪಡಿಸಿದ್ದ ಸಮಾರಂಭವನ್ನು ಉದ್ಘಾಟಿಸಿದ ಅವರು, ‘ಇದರಿಂದ ವಿಧಾನಸಭೆಯ ಒಟ್ಟು 224 ಸ್ಥಾನಗಳ ಪೈಕಿ 56 ಸ್ಥಾನಗಳು ಮಹಿಳೆಯರಿಗೆ ದೊರಕಿದಂತಾಗುತ್ತದೆ’ ಎಂದರು.
ಮೂತ್ರಪಿಂಡ ಕಳವು ಹಗರಣದ ಆರೋಪಿ ಡಾ. ಸಿದ್ಧರಾಜು ಶರಣು ಬೆಂಗಳೂರು, ಮಾರ್ಚಿ 8– ಕಳೆದ ಫೆಬ್ರುವರಿಯಿಂದ ನಾಪತ್ತೆಯಾಗಿದ್ದ, ಮೂತ್ರಪಿಂಡ ಕಳವು ಹಗರಣದ ಪ್ರಮುಖ ಆರೋಪಿ, ವಿಕ್ಟೋರಿಯಾ ಆಸ್ಪತ್ರೆಯ ಮೂತ್ರಪಿಂಡ ತಜ್ಞ ಡಾ. ಸಿದ್ಧರಾಜು, ನಗರದ ಕಮರ್ಷಿಯಲ್ ಸ್ಟ್ರೀಟ್ ಪೊಲೀಸರ ಎದುರು ಇಂದು ಶರಣಾದರು.
ತಮ್ಮ ಇಬ್ಬರು ವಕೀಲರೊಂದಿಗೆ ಬಂದ ಸಿದ್ಧರಾಜು,ಹಗರಣದ ಕುರಿತು ತನಿಖೆ ನಡೆಸುತ್ತಿರುವ ಸರ್ಕಲ್ ಇನ್ಸ್ಪೆಕ್ಟರ್ ವಿ.ಎಸ್. ಡಿಸೋಜಾ ಅವರ ಮುಂದೆ ಹಾಜರಾದರು.