ಬೆಂಗಳೂರು, ಆ. 4– ಕೃಷ್ಣಾ ಮೇಲ್ದಂಡೆ ಯೋಜನೆಯ ಎರಡನೇ ಹಂತದ ಕಾರ್ಯಕ್ರಮದಲ್ಲಿ ಆಲಮಟ್ಟಿ ಜಲಾಶಯದ ಅಣೆಕಟ್ಟನ್ನು 524.26 ಮೀಟರ್ವರೆಗೆ ಎತ್ತರಿಸಲು ಸರ್ಕಾರ ಇಂದು ನಿರ್ಧರಿಸಿತು.
ಕೃಷ್ಣಾ ಜಲಾನಯನ ಯೋಜನೆಯ ಕರಡು ‘ವಸ್ತುಸ್ಥಿತಿ ಪತ್ರ’ ಸಿದ್ಧವಾಗಿದ್ದು, ಈ ಪತ್ರವನ್ನು ಮುಂದಿನ ಅಧಿವೇಶನದಲ್ಲಿ ಮಂಡಿಸಲಾಗುವುದು ಎಂದು ಸಚಿವ ಸಂಪುಟ ಸಭೆಯ ನಂತರ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ತಿಳಿಸಿದರು.
ತಲಾಖ್ ತೀರ್ಪಿಗೆ ಸುಪ್ರೀಂ ಕೋರ್ಟ್ ತಡೆ
ನವದೆಹಲಿ, ಆ. 4 (ಪಿಟಿಐ)– ಮೂರು ಬಾರಿ ‘ತಲಾಖ್’ ಹೇಳಿ ವಿಚ್ಛೇದನ ನೀಡುವ ಮುಸ್ಲಿಂ ಸಂಪ್ರದಾಯ ಸಂವಿಧಾನ ವಿರೋಧಿ ಎಂದು ಅಲಹಾಬಾದ್ ಹೈಕೋರ್ಟ್ ನೀಡಿರುವ ತೀರ್ಪಿಗೆ ಸುಪ್ರೀಂ ಕೋರ್ಟ್ ತಡೆ ನೀಡಿದೆ.
ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಖತೂನ್ ನಿಸಾ ಸಲ್ಲಿಸಿದ ಮನವಿಯ ಹಿನ್ನೆಲೆಯಲ್ಲಿ ನ್ಯಾಯಮೂರ್ತಿಗಳಾದ ಕುಲದೀಪ್ ಸಿಂಗ್ ಹಾಗೂ ಬಿ.ಎಲ್. ಹನ್ಸರಿಯ ಅವರಿರುವ ವಿಭಾಗೀಯ ಪೀಠ ತಡೆ ಆದೇಶಕ್ಕೆ ಒಪ್ಪಿಗೆ ನೀಡಿತು.
ಸಾಮೂಹಿಕ ವಿಚ್ಛೇದನ
ಬೀಜಿಂಗ್, ಆ. 4 (ಡಿಪಿಎ)– ಭಾರತದಲ್ಲಿ ಸಾಮೂಹಿಕ ವಿವಾಹಗಳು ಸಾಮಾನ್ಯ. ಆದರೆ ಚೀನಾದಲ್ಲಿ ಈಗ ಸಾಮೂಹಿಕ ವಿವಾಹ ವಿಚ್ಛೇದನ ಆರಂಭವಾಗಿದೆ.
ವಿಚ್ಛೇದನ ನೀಡುವ ತೊಂದರೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಷಾಂಗಾಯ್ನ ಕೋರ್ಟ್, ಸಾಮೂಹಿಕ ವಿವಾಹ ವಿಚ್ಛೇದನ ಕಾರ್ಯಕ್ರಮಗಳನ್ನು ನಡೆಸಲು ಆರಂಭಿಸಿದೆ. ‘ವಿಚ್ಛೇದನ ಮಾಡಬೇಕಾದರೆ ಯಾಕೆ ಹೊಡೆದಾಡುತ್ತೀರಿ? ವಿಚ್ಛೇದನ ಮಾನವೀಯವಾಗಿರಬೇಕು’ ಎಂದು ಕೋರ್ಟಿನ ಮುಂಭಾಗದಲ್ಲಿ ಬ್ಯಾನರ್ ಹಾಕಲಾಗಿದೆ.