ಬೆಂಗಳೂರು, ಜುಲೈ 30– ಆರೋಗ್ಯ, ವೈದ್ಯಕೀಯ ಸೇವೆ ಸೇರಿದಂತೆ ಸರ್ಕಾರಿ ಸೇವಾ ವಲಯ, ಷೇರು ಮಾರುಕಟ್ಟೆ, ಡಿಬೆಂಚರ್ ವ್ಯವಹಾರವನ್ನು ಗ್ರಾಹಕರ ಸಂರಕ್ಷಣಾ ಕಾಯ್ದೆ ವ್ಯಾಪ್ತಿಗೆ ತರುವ ಸಾಧ್ಯತೆಗಳ ಬಗ್ಗೆ ಕೇಂದ್ರ ಸರ್ಕಾರ ಗಂಭೀರವಾಗಿ ಆಲೋಚಿಸುತ್ತಿದೆ.
ರಾಷ್ಟ್ರೀಯ ಗ್ರಾಹಕರ ವಿವಾದಗಳ ಪರಿಹಾರ ಆಯೋಗದ ಒಂದು ತಿಂಗಳ ಅವಧಿಯ ದಕ್ಷಿಣ ವಲಯದ ಪ್ರಥಮ ಅಧಿವೇಶನ ಉದ್ಘಾಟಿಸಿದ ಸಚಿವ ಬೂಟಾಸಿಂಗ್, ಗ್ರಾಹಕರ ಹಿತರಕ್ಷಣೆಗಾಗಿ ರಚಿಸಿದ್ದ ತಜ್ಞರ ಸಮಿತಿಯು ಸಲ್ಲಿಸಿರುವ ವರದಿಯಲ್ಲಿ ಈ ಶಿಫಾರಸುಗಳನ್ನು ಮಾಡಲಾಗಿದೆ ಎಂದರು.
ಗಡಿ ವಿವಾದ: ಮರಾಠಿಗರಿಗೆ ಸಲಹೆ
ನವದೆಹಲಿ, ಜುಲೈ 30– ಮಹಾರಾಷ್ಟ್ರ– ಕರ್ನಾಟಕ ಗಡಿ ಸಮಸ್ಯೆಯ ಬಗೆಗೆ ಗಡಸು ನಿಲುವನ್ನು ಬಿಟ್ಟು ಕರ್ನಾಟಕದ ಜತೆ ಮಾತುಕತೆ ನಡೆಸಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಪ್ರಯತ್ನಿಸಬೇಕೆಂದು ಕೇಂದ್ರ ಗೃಹ ಸಚಿವ ಎಸ್.ಬಿ.ಚವಾಣ್ ಇಂದು ಮಹಾರಾಷ್ಟ್ರದ ಮುಖ್ಯಮಂತ್ರಿ ಮತ್ತು ಸಂಸತ್ ಸದಸ್ಯರಿಗೆ ಸಲಹೆ ಮಾಡಿದರು.