ಬೆಂಗಳೂರು, ಸೆ. 28– ಸುಪ್ರೀಂ ಕೋರ್ಟ್ ಆದೇಶಕ್ಕೆ ಅನುಗುಣವಾಗಿ ಪ್ರಸಕ್ತ ಸಾಲಿನ ವೃತ್ತಿ ಶಿಕ್ಷಣ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ನಾಳೆಯಿಂದಲೇ ಪ್ರವೇಶ ನೀಡಲು ರಾಜ್ಯದ ಎಲ್ಲ ಖಾಸಗಿ ವೈದ್ಯ, ದಂತ ವೈದ್ಯ ಹಾಗೂ ಎಂಜಿನಿಯರಿಂಗ್ ಕಾಲೇಜುಗಳ ಆಡಳಿತ ವರ್ಗ ನಿರ್ಧರಿಸಿದೆ.
ವೃತ್ತಿ ಶಿಕ್ಷಣ ಕೋರ್ಸುಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನಿಗದಿಪಡಿಸಿರುವ ಶುಲ್ಕದಲ್ಲಿ ಕಾಲೇಜುಗಳನ್ನು ನಡೆಸಲು ಅಸಾಧ್ಯವಾದ್ದರಿಂದ, ಪ್ರಸ್ತುತ ವರ್ಷದಿಂದಲೇ ಕಾಲೇಜುಗಳನ್ನು ಮುಚ್ಚುವುದಾಗಿ ಸರ್ಕಾರಕ್ಕೆ ನೀಡಿದ್ದ ನೋಟೀಸನ್ನು ಹಿಂತೆಗೆದುಕೊಳ್ಳಲೂ ಅದು ಒಪ್ಪಿತು.
ಅ. 2ರಿಂದ ‘ನಿರ್ಮಲ ಕರ್ನಾಟಕ’ ಕಾರ್ಯಾರಂಭ
ಬೆಂಗಳೂರು, ಸೆ. 28– ಪ್ರತಿಯೊಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ವಂತ ಬಳಕೆಗಾಗಿ ಕನಿಷ್ಠ ನೂರು ಶೌಚಾಲಯ ನಿರ್ಮಿಸಲು ರೂಪಿಸಿರುವ ಮಹತ್ವಾಕಾಂಕ್ಷೆಯ ‘ನಿರ್ಮಲ ಕರ್ನಾಟಕ’ ಯೋಜನೆ ಗಾಂಧಿ ಜಯಂತಿಯಂದು ಆರಂಭವಾಗಲಿದೆ. ದೇವನಹಳ್ಳಿ ತಾಲ್ಲೂಕಿನ ಆವತಿ ಗ್ರಾಮದಲ್ಲಿ ನಿರ್ಮಿಸಿರುವ 100 ಮಾದರಿ ಶೌಚಾಲಯಗಳನ್ನು ಉದ್ಘಾಟಿಸುವ ಮೂಲಕ ಯೋಜನೆಗೆ ಚಾಲನೆ ಸಿಗಲಿದೆ.