ಬೆಂಗಳೂರು, ಜುಲೈ 31– ‘ಸಂಬಳವೂ ಹೆಚ್ಚಿಲ್ಲ, ಕೂಳೂ ಇಲ್ಲ. ಏನೋ ಉಪ ಮುಖ್ಯಮಂತ್ರಿ ಅಂಥ ಮಾಡಿದ್ದಾರೆ. ಉನ್ನತ ಸ್ಥಾನ ಎಂಬ ಒಂದೇ ಸಮಾಧಾನ’ ಈ ಅಭಿಪ್ರಾಯ ಸ್ವತಃ ಎಸ್.ಎಂ.ಕೃಷ್ಣ ಅವರಿಂದಲೇ ವ್ಯಕ್ತವಾಯಿತು.
ಸಂದರ್ಭ: ರಾಜ್ಯ ವಿದ್ಯುತ್ ಮಂಡಲಿ ಎಂಜಿನಿಯರುಗಳ ಸಂಘದ ಮಹಾಧಿವೇಶನ.
ಇಪ್ಪತ್ತು ವರ್ಷ ಸೇವೆ ಸಲ್ಲಿಸಿದ ಸಹಾಯಕ ಎಂಜಿನಿಯರುಗಳಿಗೆ ಬಡ್ತಿ ನೀಡಬೇಕು ಎಂಬ ಬೇಡಿಕೆಯನ್ನು ಪ್ರಸ್ತಾಪಿಸಿ ಮಾತನಾಡಿದ ಅವರು ಬಡ್ತಿ ನೀಡಿಕೆಯಿಂದ ವೇತನ ಹೆಚ್ಚಳವಾಗುವುದಿಲ್ಲ. ಉನ್ನತ ಸ್ಥಾನ ದೊರೆತಿದೆ ಎಂಬ ನೆಮ್ಮದಿ ಇರುತ್ತದೆ ಅಷ್ಟೇ ಎಂದು ಮೇಲಿನಂತೆ ತಮ್ಮದೇ ಉದಾಹರಣೆ ನೀಡಿದರು.
ಪದವಿ ಮಟ್ಟದಲ್ಲಿ ವೃತ್ತಿ ಶಿಕ್ಷಣ: ರಾಜ್ಯದಲ್ಲಿ ಆರಂಭ
ಬೆಂಗಳೂರು, ಜುಲೈ 31– ರಾಜ್ಯದಲ್ಲಿ ಕಾಲೇಜುಗಳಿಗೆ ಸ್ವಾಯತ್ತತೆ ನೀಡುವ ಪ್ರಕ್ರಿಯೆ ಶುರುವಾಗಲು ಅನುಕೂಲ ಆಗುವಂತೆ ಸಂಬಂಧಪಟ್ಟ ನೀತಿ–ನಿಯಮಗಳಲ್ಲಿ ಮಾರ್ಪಾಟು ತರಲಾಗುವುದು ಮತ್ತು ಈ ನಿಟ್ಟಿನಲ್ಲಿ ಆಗಬಹುದಾದ ಅನಗತ್ಯ ವಿಳಂಬ ತಪ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಭರವಸೆ ನೀಡಿದರು.
ಮೌಂಟ್ ಕಾರ್ಮೆಲ್ ಕಾಲೇಜಿನ ಪ್ರಥಮ ಪದವಿ ತರಗತಿಗಳಲ್ಲಿ ವೃತ್ತಿಪರ ಶಿಕ್ಷಣ ಅಳವಡಿಕೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.