ಹುಬ್ಬಳ್ಳಿ, ಆ. 19– ಹಿರಿಯ ಪೊಲೀಸ್ ಅಧಿಕಾರಿಗಳ ಯಾವುದೇ ಆದೇಶವಿಲ್ಲದೆ ರಾಜ್ಯ ಮೀಸಲು ಪಡೆ ಪೊಲೀಸ್ ಚಾಲಕ ಗುಂಡು ಹಾರಿಸಿದಾಗ ಮಹಿಳೆಯೊಬ್ಬರು ಸತ್ತ ಪರಿಣಾಮವಾಗಿ ನಗರದಲ್ಲಿ ಮತ್ತೆ ಹಿಂಸಾಕೃತ್ಯಗಳು ನಡೆದು ಉದ್ರಿಕ್ತ ಗುಂಪೊಂದು ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿ ಹಲವಾರು ವಾಹನಗಳನ್ನು ಸುಟ್ಟಿತು.
ಹಿಂಸಾಕೃತ್ಯಗಳು ನಡೆದ ಹಿನ್ನೆಲೆಯಲ್ಲಿ, ಬೆಂಗಳೂರಿಗೆ ಹೊರಟಿದ್ದ ಕ್ಷಿಪ್ರ ಕಾರ್ಯಾಚರಣೆ ಪಡೆಯನ್ನು ಹಿಂದಕ್ಕೆ ಕರೆಸಿಕೊಳ್ಳಲಾಗಿದ್ದು ನಗರದಲ್ಲಿ ಇಂದು ಸಂಜೆ 6ರಿಂದ ನಾಳೆ ಮುಂಜಾನೆ 9ರವರೆಗೆ ಕರ್ಫ್ಯೂ ವಿಧಿಸಲಾಗಿದೆ.
ಪ್ರಥಮ ಬಾರಿಗೆ ತುಂಬಿದ ಸುಪಾ
ಕಾರವಾರ, ಆ. 19– ಸುಪಾ ಜಲಾಶಯ ತುಂಬುತ್ತಿದ್ದು ಭಾನುವಾರ ಬೆಳಿಗ್ಗೆ 11 ಗಂಟೆಗೆ 5 ಸಾವಿರದಿಂದ 15 ಸಾವಿರ ಕ್ಯುಸೆಕ್ ನೀರನ್ನು ಬಿಡಲು ಪ್ರಾರಂಭಿಸಲಾಗುವುದು ಎಂದು ಕಾಳಿ ಜಲವಿದ್ಯುತ್ ಯೋಜನೆಯ ಮುಖ್ಯ ಎಂಜಿನಿಯರ್ (ಸಿವಿಲ್) ಕೆ. ಸಂಕಪ್ಪ ಶೆಟ್ಟಿ ತಿಳಿಸಿದ್ದಾರೆ.
1985ರಿಂದ ಸುಪಾ ಜಲಾಶಯದಲ್ಲಿ ನೀರು ಸಂಗ್ರಹಿಸಲು ಪ್ರಾರಂಭವಾಗಿದ್ದು, ಜಲಾಶಯ ಮೊದಲ ಬಾರಿಗೆ ತುಂಬುತ್ತಿದೆ.ಅಣೆಕಟ್ಟಿನ ಎತ್ತರ 564 ಮೀಟರ್ ಇದ್ದು, ಇಂದು ಸಂಜೆ ಜಲಾಶಯದ ನೀರಿನ ಮಟ್ಟ 563.03 ಮೀಟರ್ಗಳಷ್ಟಿತ್ತು ಎಂದು ಸಂಕಪ್ಪ ಶೆಟ್ಟಿ ಅವರು ವಿವರಿಸಿದರು.
ತುಂಗಭದ್ರಾ ಕಾಲುವೆ ಬಿರುಕು ರೈತರ ಆಕ್ರೋಶ
ರಾಯಚೂರು, ಆ. 19– ತುಂಗಭದ್ರಾ ಎಡದಂಡೆ ಮುಖ್ಯಕಾಲುವೆಯಲ್ಲಿ ನಿನ್ನೆ ಮತ್ತೆ ಬಿರುಕುಂಟಾಗಿದ್ದು ಕಳೆದ ಮಾರ್ಚಿ ತಿಂಗಳಿನಿಂದ ಈವರೆಗೆ ಸಂಭವಿಸಿದ ಹನ್ನೆರಡನೆಯ ಬಿರುಕು ಇದಾಗಿದೆ. ರೈತರು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.