ಮುಲಾಯಂ ಸರ್ಕಾರಕ್ಕೆ ಬೆಂಬಲ ವಾಪಸ್ಗೆ ಉ.ಪ್ರ. ಕಾಂಗೈ ನಿರ್ಧಾರ
ನವದೆಹಲಿ, ಸೆ. 11 (ಪಿಟಿಐ, ಯುಎನ್ಐ)– ಉತ್ತರ ಪ್ರದೇಶದ ಮುಲಾಯಂ ಸಿಂಗ್ ಅವರ ಸರ್ಕಾರಕ್ಕೆ ಕಾಂಗ್ರೆಸ್ (ಐ) ಶಾಸಕಾಂಗ ಪಕ್ಷವು ಬೆಂಬಲ ವಾಪಸು ತೆಗೆದುಕೊಳ್ಳುವುದಾಗಿ ನಿರ್ಣಯ ಅಂಗೀಕರಿಸಿದ್ದು ಇದೀಗ ಆ ಸರ್ಕಾರದ ಅಳಿವು–ಉಳಿವು ಕಾಂಗೈನ ವರಿಷ್ಠ ಮಂಡಲಿಯು ವಹಿಸುವ ನಿಲುವನ್ನು ಆಧರಿಸಿದೆ.
ತಾರಾಪುರ ಘಟಕಕ್ಕೆ ದೇಶೀಯ ಇಂಧನ
ಮುಂಬೈ, ಸೆ. 11 (ಯುಎನ್ಐ)– ಫ್ರಾನ್ಸಿನಿಂದ ಸಂಸ್ಕರಿತ ಯುರೇನಿಯಂ ಇಂಧನ ಪೂರೈಕೆ ನಿಂತು ಹೋಗಲಿರುವುದರಿಂದ 2000ನೇ ಸಂವತ್ಸರದ ನಂತರ ತಾರಾಪುರ ಪರಮಾಣು ರಿಯಾಕ್ಟರ್ ಅನ್ನು ಯುರೇನಿಯಂ ಇಂಧನದ ಬದಲಾಗಿ ದೇಶೀಯವಾಗಿ ಸಿದ್ಧಪಡಿಸಲಾದ ಬೆರೆಸಿದ ಆಕ್ಲೈಡ್ ಇಂಧನ(ಎಂಓಎಕ್ಸ್)ದ ನೆರವಿನಿಂದ ನಡೆಸಲು ಭಾರತ ಎಲ್ಲಾ ಸಿದ್ಧತೆಗಳನ್ನೂ ಮಾಡಿಕೊಳ್ಳುತ್ತಿದೆ.
ಅಷ್ಟೇ ಅಲ್ಲದೆ ತಾರಾಪುರ ಸ್ಥಾವರದ ಒಂದನೇ ಘಟಕದಲ್ಲಿ ಪ್ರಾಯೋಗಿಕವಾಗಿ ಈಗಾಗಲೇ ಎಂಓಎಕ್ಸ್ ಇಂಧನವನ್ನು ಉಪಯೋಗಿಸಲಾಗುತ್ತಿದೆ ಎಂದು ಪರಮಾಣು ವಿದ್ಯುತ್ ನಿಗಮದ ಕಾರ್ಯಕಾರಿ ನಿರ್ದೇಶಕರು ತಿಳಿಸಿದರು.
ಸರ್ಕಾರಿ ಗೌರವದೊಂದಿಗೆ ನಾಗನೂರು ಸ್ವಾಮೀಜಿ ಸಮಾಧಿ
ಬೆಳಗಾವಿ, ಸೆ. 11– ಶುಕ್ರವಾರ ಲಿಂಗೈಕ್ಯರಾದ ಜಿಲ್ಲೆಯ ನಾಗನೂರು ರುದ್ರಾಕ್ಷಿ ಮಠದ ಡಾ. ಶಿವಬಸವ ಸ್ವಾಮಿಗಳ ಅಂತ್ಯಕ್ರಿಯೆ ಇಂದು ಸಂಜೆ ಇಲ್ಲಿ ಸಕಲ ಸರ್ಕಾರಿ ಮರ್ಯಾದೆಯೊಡನೆ ನೆರವೇರಿತು.