ಕೊಯಮತ್ತೂರು, ಜ. 16– ತಾವು ನಿಯಮಗಳನ್ನು ರೂಪಿಸುವುದಿಲ್ಲ, ಬದಲಾಗಿ ಸಂವಿಧಾನವು ರಚಿಸಿದ ನಿಯಮಗಳಿಗೆ ಅನುಸಾರವಾಗಿ ವ್ಯವಹರಿಸುತ್ತಿರುವುದಾಗಿ ಮುಖ್ಯ ಚುನಾವಣಾ ಕಮೀಷನರ್ ಟಿ.ಎನ್. ಶೇಷನ್ ಅವರು ಹೇಳಿದ್ದಾರೆ.
‘ನಾನು ನಿಯಮಗಳನ್ನು ರೂಪಿಸಬೇಕು ಎಂದು ನಿರೀಕ್ಷೆ ಮಾಡಬೇಡಿ. ನಾನೊಬ್ಬ ಅಂಪೈರ್ (ತೀರ್ಪುಗಾರ). ಅಂಪೈರೇ ನಿಯಮ ರೂಪಿಸಲು ತೊಡಗಿದರೆ ಆಟವು ಕೊಳಕಾಗುವುದು’ ಎಂದು ಅವರು ಇಲ್ಲಿ ಭಾರತದ ಪ್ರಜಾತಂತ್ರ ಹಾಗೂ ಚುನಾವಣೆ ಕುರಿತು ನೀಡಿದ ಉಪನ್ಯಾಸದಲ್ಲಿ ಹೇಳಿದರು.
ಚುನಾವಣಾ ಸುಧಾರಣೆ ಕುರಿತಾದ ತಮ್ಮ ವರದಿಯ ವಿಷಯದಲ್ಲಿ ಕೇಂದ್ರ ಸರಕಾರವು ಬಹಳ ಗಂಭೀರವಾದ ಮೌನವನ್ನು ಆಚರಿಸುತ್ತಿರುವುದರಿಂದ 1995ರ ಜನವರಿ 1ರ ನಂತರ ಗುರುತಿನ ಚೀಟಿ ಇಲ್ಲದೆ ಚುನಾವಣೆ ಇಲ್ಲ ಎಂಬ ತೀರ್ಮಾನಕ್ಕೆ ಬರಬೇಕಾಯಿತು ಎಂದು ಶೇಷನ್ ತಿಳಿಸಿದರು.
ಹೃದಯ ಶಸ್ತ್ರಚಿಕಿತ್ಸೆ
ತಿರುವನಂತಪುರ, ಜ. 16– ಇಲ್ಲಿನ ಶ್ರೀಚಿತ್ತಿರ ತಿರುನಾಳ್ ವೈದ್ಯಕೀಯ ಆಸ್ಪತ್ರೆಯ ತಜ್ಞರು ಹೊಸ ಬಗೆಯ ಹೃದಯ ಶಸ್ತ್ರಚಿಕಿತ್ಸಾ ವಿಧಾನವನ್ನು ಕಂಡು ಹಿಡಿದಿದ್ದಾರೆ.
ಹೃದಯ ಬಡಿತ ನಡೆಯುತ್ತಿದ್ದಂತೆಯೇ ಶಸ್ತ್ರಚಿಕಿತ್ಸೆ ನಡೆಸಬಹುದಾಗಿದೆ ಎಂದು ತಜ್ಞರಾದ ಡಾ. ವೈ.ಎ. ನಸೀರ್ ತಿಳಿಸಿದ್ದಾರೆ.