ನವದೆಹಲಿ, ಫೆ. 14 (ಯುಎನ್ಐ): ಲೋಕಸಭೆಗೆ ಅವಧಿಗೆ ಮುನ್ನವೇ ಚುನಾವಣೆ ನಡೆಸುವ ಸಾಧ್ಯತೆಯನ್ನು ಪ್ರಧಾನಿ ಪಿ.ವಿ. ನರಸಿಂಹರಾವ್ ಇಂದು ಇಲ್ಲಿ ಸ್ಪಷ್ಟವಾಗಿ ತಳ್ಳಿಹಾಕಿದರು. ಎರಡು ರೂಪಾಯಿಗೆ ಕಿಲೊ ಅಕ್ಕಿ ಪೊರೈಕೆಯಂಥ ಜನಪ್ರಿಯ ಯೋಜನೆ ಕುರಿತು ಚರ್ಚಿಸಲು ರಾಜ್ಯ ಮುಖ್ಯಮಂತ್ರಿಗಳ ಸಭೆ ಕರೆಯುವ ಬಗ್ಗೆ ಅವರು ಇಂಗಿತ ನೀಡಿದರು.
ನಿಗದಿತ ಮೀಸಲು ಪ್ರಮಾಣ ಬದಲು ಅಸಾಧ್ಯ: ಕೋರ್ಟ್
ನವದೆಹಲಿ, ಫೆ. 14 (ಪಿಟಿಐ): ಹಿಂದುಳಿದ ಜಾತಿಗಳಿಗೆ ಸೇರಿದ ಕೆಲವು ಅಭ್ಯರ್ಥಿ ಗಳನ್ನು ಈಗಾಗಲೇ ಸಾಮಾನ್ಯ ವರ್ಗದಲ್ಲಿ ನೇಮಕ ಮಾಡಲಾಗಿದೆ ಅಥವಾ ಅವರಿಗೆ ಬಡ್ತಿ ನೀಡಲಾಗಿದೆ ಎಂದಮಾತ್ರಕ್ಕೆ ಈ ವರ್ಗಕ್ಕೆ ಈಗಾಗಲೇ ನಿಗದಿಪಡಿಸಲಾಗಿರುವ ಮೀಸಲಾತಿಯ ಪ್ರಮಾಣವನ್ನು ಯಾವುದೇ ರಾಜ್ಯ ಹೆಚ್ಚು ಕಡಿಮೆ ಮಾಡಲು ಅಥವಾ ಬದಲಾಯಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿತು.
ಹಿಂದುಳಿದ ಜಾತಿಗಳಿಗೆ ಮೀಸಲಾಗಿರಿಸಿದ ವರ್ಗದಲ್ಲಿ ಸಾಮಾನ್ಯ ವರ್ಗದ ಯಾವುದೇ ಅಭ್ಯರ್ಥಿಯನ್ನು ನೇಮಿಸುವುದು ಸಾಧ್ಯವಿಲ್ಲ ಎಂದು 15 ಪುಟಗಳ ತನ್ನ ತೀರ್ಪಿನಲ್ಲಿ ಪೀಠ ಹೇಳಿದೆ.
ಲೋಕಸಭೆ: ಟಾಡಾ ಕೈ ಬಿಡಲು ಆಗ್ರಹ
ನವದೆಹಲಿ, ಫೆ. 14 (ಪಿಟಿಐ, ಯುಎನ್ಐ): ಸಾಕಷ್ಟು ದುರುಪಯೋಗ ಆಗುತ್ತಿದೆ ಎನ್ನಲಾಗಿರುವ ಭಯೋತ್ಪಾದನೆ ಹಾಗೂ ವಿಧ್ವಂಸಕ ಕೃತ್ಯ ತಡೆ ಕಾಯ್ದೆಯನ್ನು (ಟಾಡಾ) ರದ್ದು ಮಾಡಬೇಕು ಅಥವಾ ಅದಕ್ಕೆ ತಿದ್ದುಪಡಿ ತರಬೇಕೆಂದು ಲೋಕಸಭೆಯಲ್ಲಿಂದು ಸದಸ್ಯರು ಪಕ್ಷಭೇದ ಮರೆತು ಆಗ್ರಹಪಡಿಸಿದರು.
ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಕಾಂಗೈನ ಮಮತಾ ಬ್ಯಾನರ್ಜಿ ಅವರು ಟಾಡಾ ಕಾಯ್ದೆ ದುರುಪಯೋಗ ತಪ್ಪಿಸಲು ಆ ಕಾಯ್ದೆಯನ್ನು ಬಳಸಬಹುದಾದಸಂದರ್ಭಗಳನ್ನು ನಿರ್ದಿಷ್ಟವಾಗಿ ಸರ್ಕಾರವೇ ಪ್ರಕಟಿಸಬೇಕು ಎಂದರು.