ಪೊಲೀಸ್ ವಾಹನದಲ್ಲಿ ಅರ್ಜುನನ್ ಸೇರಿ ಮೂವರು ವೀರಪ್ಪನ್ ಬಂಟರ ಸಾವು
ಮೈಸೂರು, ಸೆ. 27– ಟಾಡಾ ವಿಶೇಷ ನ್ಯಾಯಾಲಯವು ರಾಜ್ಯದ ಪೊಲೀಸರ ವಶಕ್ಕೆ ಕೊಟ್ಟ 12 ಗಂಟೆಗಳ ಒಳಗಾಗಿ ಕಾಡುಗಳ್ಳ ವೀರಪ್ಪನ್ನ ಸೋದರ ಅರ್ಜುನನ್ (38), ವೀರಪ್ಪನ್ನ ಬಲಗೈ ಬಂಟರಾದ ಅಯ್ಯನ್ದೊರೆ (35) ಮತ್ತು ರಂಗಸ್ವಾಮಿ (38) ‘ವಿಷ ಸೇವನೆ’ಯಿಂದ ಪ್ರಾಣಬಿಟ್ಟಿದ್ದಾರೆ.
ಇಲ್ಲಿನ ಸೆಂಟ್ರಲ್ ಜೈಲಿನಿಂದ ಈ ಮೂವರನ್ನು ಮಹದೇಶ್ವರ ಬೆಟ್ಟಕ್ಕೆ ‘ಬಿಗಿ’ ಭದ್ರತೆಯಲ್ಲಿ ಪೊಲೀಸ್ ವ್ಯಾನಿನಲ್ಲಿ ಕರೆದೊಯ್ಯುತ್ತಿದ್ದಾಗ ದಾರಿ ಮಧ್ಯದಲ್ಲಿ ಇವರು ಪ್ರಾಣಬಿಟ್ಟಿದ್ದಾರೆ. ವಾಹನ ತಿರುಮಕೂಡಲು ನರಸೀಪುರವನ್ನು ದಾಟಿ ಕೊಳ್ಳೇಗಾಲದ ಹಾದಿಯಲ್ಲಿ ಸ್ವಲ್ಪ ದೂರ ಹೋಗಿತ್ತು. ಆಗ ಮೂವರೂ ನಡುಗಲು, ಬಿಕ್ಕಳಿಸಲು ಶುರುಮಾಡಿದರು. ಎಚ್ಚರತಪ್ಪಿ ಬಿದ್ದರು. ಕೂಡಲೇ ಅವರನ್ನು ತಿ.ನರ ಸೀಪುರಕ್ಕೆ ವಾಪಸ್ ಕರೆತಂದುಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ಪ್ರಯತ್ನ ನಡೆಸಲಾಯಿತು. ಚಿಕಿತ್ಸೆಗೆ ಯಾರೊಬ್ಬರೂ ಪ್ರತಿಕ್ರಿಯಿಸಲಿಲ್ಲ. ಮೂವರೂ ಸತ್ತಿದ್ದಾರೆಂದು ವೈದ್ಯರು ಘೋಷಿಸಿದರು. ಆಗ ಬೆಳಗಿನ ಜಾವ ಸುಮಾರು ಎರಡು ಗಂಟೆ.
ಗಣಿಗೆ ನೀರು ನುಗ್ಗಿ 75 ಕಾರ್ಮಿಕರ ಸಾವು
ನವದೆಹಲಿ, ಸೆ. 27 (ಯುಎನ್ಐ, ಪಿಟಿಐ)– ಬಿಹಾರದ ಭಾರತ್ ಕಲ್ಲಿದ್ದಲು ಗಣಿ ಸಂಸ್ಥೆಗೆ ಸೇರಿದ ಧನಬಾದ್ ಬಳಿ ಇರುವ ನಾಲ್ಕು ಗಣಿಗಳಲ್ಲಿ ಮಂಗಳವಾರ ಮಧ್ಯರಾತ್ರಿ ಮಳೆ ನೀರಿನಿಂದ ತುಂಬಿ ಹರಿಯುತ್ತಿದ್ದ ನದಿ ನೀರು ನುಗ್ಗಿ ಸುಮಾರು 75 ಮಂದಿ ಕಾರ್ಮಿಕರು ಸತ್ತಿದ್ದಾರೆ.