ಹುಬ್ಬಳ್ಳಿ, ಆ. 20– ಪೊಲೀಸ್ ಪೇದೆಯೊಬ್ಬ ಹಾರಿಸಿದ ಗುಂಡಿಗೆ ಮಹಿಳೆಯೊಬ್ಬರು ಬಲಿಯಾದ ಶುಕ್ರವಾರದ ಘಟನೆಗೆ ಪ್ರತಿಕ್ರಿಯೆಯಾಗಿ ಇಂದು ನಗರದ ದಕ್ಷಿಣ ಭಾಗದಲ್ಲಿ ಹಬ್ಬಿದ ಹಿಂಸಾಚಾರ ಪೊಲೀಸರ ಸಂಯಮಭರಿತ ಕಾರ್ಯಾಚರಣೆಯಿಂದಾಗಿ ಸಂಪೂರ್ಣ ತಹಬಂದಿಗೆ ಬಂದು ಶಾಂತಿಯುತ ವಾತಾವರಣ ನೆಲೆಸಿತು.
ಈ ಮಧ್ಯೆ ಷಹರ ಠಾಣೆಯ ಇನ್ಸ್ಪೆಕ್ಟರ್ ಬಿ.ಬಿ. ಪಾಟೀಲರನ್ನು ಬೇರೆಡೆಗೆ ವರ್ಗಾವಣೆ ಮಾಡಿದ್ದು, ಅವರ ವಿರುದ್ಧ ಕ್ರಮಕ್ಕಾಗಿ ಒತ್ತಾಯಿಸಿ ನಾಳೆ ‘ಹುಬ್ಬಳ್ಳಿ ಬಂದ್’ಗೆ ನೀಡಿದ್ದ ಕರೆಯನ್ನು ಬಿಜೆಪಿ ವಾಪಸು ತೆಗೆದುಕೊಂಡಿದೆ.
ರಾಜ್ಯ ನದಿ ಶುದ್ಧೀಕರಣ– ಕೇಂದ್ರ ಅಸ್ತು
ಬೆಂಗಳೂರು, ಆ. 20– ಜಲಮಾಲಿನ್ಯ ತಡೆಯಲು ರಾಷ್ಟ್ರೀಯ ನದಿ ಶುದ್ಧೀಕರಣ ಕ್ರಿಯಾ ಯೋಜನೆ ಅನ್ವಯ ಕಾವೇರಿ ಮತ್ತು ಕೃಷ್ಣಾ ಜಲಾನಯನ ಪ್ರದೇಶದ ಎಂಟು ನಗರ ಹಾಗೂ ಪಟ್ಟಣಗಳಿಗಾಗಿ ರಾಜ್ಯ ಸರ್ಕಾರ ರೂಪಿಸಿರುವ ಯೋಜನೆಗೆ ಕೇಂದ್ರ ಸರ್ಕಾರದ ಒಪ್ಪಿಗೆ ದೊರೆತಿದೆ.
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ನೆರವಿನಲ್ಲಿ ಜಲಮಾಲಿನ್ಯ ತಡೆಯಲು ನಂಜನಗೂಡು, ಕೆ.ಆರ್.ನಗರ, ಶ್ರೀರಂಗಪಟ್ಟಣ, ಕೊಳ್ಳೇಗಾಲ, ಶಿವಮೊಗ್ಗ, ಭದ್ರಾವತಿ, ದಾವಣಗೆರೆ ಮತ್ತು ಹರಿಹರ ಪಟ್ಟಣಗಳಿಗಾಗಿ ಈ ಯೋಜನೆ ರೂಪಿಸಲಾಗಿದೆ.