ಕೇರಳ ಸರ್ಕಾರವನ್ನು ವಜಾ ಮಾಡಲು ಕೇಂದ್ರಕ್ಕೆ ಸಾಧ್ಯವಿಲ್ಲ
ನವದೆಹಲಿ, ಅ.20: ರಾಜ್ಯಾಂಗವನ್ನು ಉಲ್ಲಂಘಿಸಿದ ಅಥವಾ ರಾಜ್ಯದಲ್ಲಿ ಘಟನಾತ್ಮಕ ಆಡಳಿತ ಕುಸಿದು ಬಿದ್ದಿದೆಯೆಂಬ ಕಾರಣದ ಮೇಲೆ ಕೇಂದ್ರವು ತಮ್ಮ ಸರ್ಕಾರವನ್ನು ವಜಾ ಮಾಡಲು ಸಾಧ್ಯವಿಲ್ಲ
ವೆಂದು ಕೇರಳದ ಮುಖ್ಯಮಂತ್ರಿ ಇ.ಎಂ.ಎಸ್. ನಂಬೂದ್ರಿಪಾಡ್ ಅವರು ಇಂದು ಇಲ್ಲಿ ತಿಳಿಸಿದರು.
‘ರಾಜ್ಯಾಂಗದ ರೀತ್ಯ ನಾವು ಕೆಲವು ತಪ್ಪುಗಳನ್ನು ಮಾಡಿದ್ದೇವೆಂದೂ, ಅದರಿಂದಾಗಿ ಕೇಂದ್ರವು ಕೇರಳ ಸರ್ಕಾರವನ್ನು ವಜಾ ಮಾಡುವುದೆಂದು ಊಹಾಪೋಹಗಳೆದ್ದಿವೆ’ ಎಂದು ಅವರು ತಿಳಿಸಿದರು.
‘ಕೇಂದ್ರ ಸರ್ಕಾರಿ ನೌಕರರ ಮುಷ್ಕರದ ನಂತರ ಕೇಂದ್ರ, ಕೇರಳ ನಡುವಣ ಸಂಬಂಧ ಕುರಿತು ಸುಮಾರು 30 ನಿಮಿಷ ಪ್ರಧಾನಿಯವರೊಡನೆ ಮಾತುಕತೆ ನಡೆಸಲಾಗಿದೆ’ ಎಂದು ಹೇಳಿದರು.
**
ಸ್ವಾತಂತ್ರ್ಯ ಹೋರಾಟಗಾರರಿಗೆ ಚೇತನ ನೀಡಿದ ಐ.ಎನ್.ಎ: ರಾಷ್ಟ್ರಪತಿ ಪ್ರಶಂಸೆ
ಇಂಫಾಲ್, ಅ.20: ‘ನೇತಾಜಿ ಅವರು 25 ವರ್ಷಗಳ ಹಿಂದೆ ಇಲ್ಲಿಗೆ ಸಮೀಪದಲ್ಲಿ ಆಜಾದ್ ಹಿಂದ್ ಸರ್ಕಾರವನ್ನು ಸ್ಥಾಪಿಸುವ ಬಗ್ಗೆ ಕೈಗೊಂಡ ಕ್ರಮವು ಭಾರತದಲ್ಲಿಯ ಸ್ವಾತಂತ್ರ್ಯ ಹೋರಾಟಗಾರರಿಗೆ ತುಂಬಾ ಉತ್ಸಾಹ ಹಾಗೂ ಪ್ರೋತ್ಸಾಹವನ್ನು ನೀಡಿತು’ ಎಂದು ರಾಷ್ಟ್ರಪತಿ ಡಾ. ಜಾಕೀರ್ ಹುಸೇನ್ ಅವರು ಹೇಳಿದರು.
**
‘ಚುಕ್ಕು ಪುಕ್ಕು, ರೈಲು ಬಂತು ದಾರಿಬಿಡಿ...
ಬೆಂಗಳೂರು, ಅ.20: ರೈಲಿನಾಟದಿಂದಲೇ ತೃಪ್ತಿ ಪಡೆಯುತ್ತಿದ್ದ ಬೆಂಗಳೂರಿನ ಪುಟ್ಟಾಣಿಗಳು ತಮ್ಮದೇ ಆದ ನಿಜವಾದ ರೈಲನ್ನು ಪಡೆಯಲು ಬಹಳ ದಿನ ಕಾಯಬೇಕಾಗಿಲ್ಲ.ಚಾಚಾ ನೆಹರೂ ಹುಟ್ಟು ಹಬ್ಬದ ದಿನ ಮಕ್ಕಳ ರೈಲು, ಕಬ್ಬನ್ ಪಾರ್ಕಿನ್ ವಿಕ್ಟರಿ ಹಾಲ್ ಪಕ್ಕದಲ್ಲಿರುವ ತನ್ನ ಪುಟ್ಟ ನಿಲ್ದಾಣ ಬಿಡಲು ಭರದಿಂದ ಸಿದ್ಧತೆಗಳು ನಡೆದಿವೆ.
ಮಕ್ಕಳ ದಿನಾಚರಣೆಯಂದು(ನವೆಂಬರ್ 14) ಪ್ರಥಮ ಯಾನ ಪ್ರಾರಂಭಿಸುವ ರೈಲು ಒಂದು ಬಾರಿಗೆ 45 ಮಕ್ಕಳನ್ನು ಒಯ್ಯಲಿದೆ.
ದಿನದಿನಕ್ಕೆ ಬಹುಸಂಖ್ಯೆಯ ನಾಗರಿಕರನ್ನು ಆಕರ್ಷಿಸುತ್ತಿರುವ ಕಬ್ಬನ್ ಪಾರ್ಕಿಗೆ ಈ ರೈಲು ವಿಶೇಷ ಆಕರ್ಷಣೆಯಾಗಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.