ಅಣ್ಣಾ ಬಗ್ಗೆ ಟೀಕೆ ಶಂಕೆ: ವಿದ್ವಾಂಸರ ಮನೆ ಮೇಲೆ ದಾಳಿ: ವಿಗ್ರಹಗಳು ರಸ್ತೆಗೆ
ನೈವೇಲಿ, ಫೆ. 21– ಖ್ಯಾತ ತಮಿಳು ವಿದ್ವಾಂಸರಾದ ಶ್ರೀ ಕೃಪಾನಂದ ವಾರಿಯರ್ ಅವರ ನಿವಾಸದ ಮೇಲೆ ಮುನ್ನೂರು ಮಂದಿಯ ಉದ್ರಿಕ್ತ ಗುಂಪೊಂದು ಮಂಗಳವಾರ ರಾತ್ರಿ ದಾಳಿ ನಡೆಸಿ ಅವರು ಸುಮಾರು 40 ವರ್ಷಗಳಿಂದ ಅರ್ಚಿಸುತ್ತಿದ್ದ ಸುಬ್ರಮಣ್ಯ, ವಳ್ಳಿ, ದೇವಯಾನಿ ವಿಗ್ರಹಗಳನ್ನು ಹೊರಕ್ಕೆ ಎಸೆಯಿತು.
‘ಸಾಯುವ ವ್ಯಕ್ತಿಯನ್ನು ಎಷ್ಟೇ ಪ್ರಯತ್ನಪಟ್ಟರೂ ಉಳಿಸಿಕೊಳ್ಳುವುದಕ್ಕೆ ಆಗುವುದಿಲ್ಲ’ ಎಂದು ಶ್ರೀ ವಾರಿಯರ್ ಅವರು ಹಿಂದಿನ ದಿನ ತಾವು ನಡೆಸಿದ ಉಪನ್ಯಾಸದಲ್ಲಿ ಹೇಳಿದುದೇ ಈ ಘಟನೆಗೆ ಕಾರಣವೆಂದು ವರದಿಯಾಗಿದೆ.
ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ಶ್ರೀ ಸಿ.ಎನ್. ಅಣ್ಣಾದೊರೆ ಅವರ ವಿಷಯ ಪ್ರಸ್ತಾಪಿಸಿ ಶ್ರೀ ವಾರಿಯರ್ ಅವರು ಈ ಮಾತು ಹೇಳಿದ್ದರೆಂದು ಉಪನ್ಯಾಸ ಕೇಳುವುದಕ್ಕೆ ಬಂದಿದ್ದವರಲ್ಲಿ ಕೆಲವರು ವ್ಯಾಖ್ಯಾನ ಮಾಡಿದ್ದರು.
‘ಪ್ರಬುದ್ಧ ಕರ್ಣಾಟಕ’ದ ಚಿನ್ನದ ಹಬ್ಬ
ಮೈಸೂರು, ಫೆ. 21– ಎರಡು ವರ್ಷಗಳ ಹಿಂದೆ ತನ್ನ ಹೊನ್ನಿನ ಹಬ್ಬವನ್ನು ಬೃಹತ್ತಾಗಿ ಆಚರಿಸಿದ ಮೈಸೂರು ವಿಶ್ವವಿದ್ಯಾಲಯ ಇಂದು ತನ್ನ ಹೆಮ್ಮೆಯ ತ್ರೈಮಾಸಿಕ ಪ್ರಬುದ್ಧ ಕರ್ಣಾಟಕದ ಚಿನ್ನದ ಹಬ್ಬವನ್ನು ಭಾವಪೂರ್ಣವಾಗಿ ಆಚರಿಸಿ ಸಂಸ್ಥಾಪಕರ ಸೇವೆಯನ್ನು ಕೃತಜ್ಞತೆಯಿಂದ ಸ್ಮರಿಸಿತು.