ಸಿಕಂದರಾಬಾದಿನಲ್ಲಿ ಗೋಲಿಬಾರ್: 3 ಸಾವು, 25 ಜನರಿಗೆ ಗಾಯ ಹೈದರಾಬಾದ್, ಏ. 4– ಇಲ್ಲಿನ ಸಿಕಂದರಾಬಾದ್ ಪ್ರದೇಶದಲ್ಲಿ ವಿಪರೀತ ಕಲ್ಲೆಸೆತದಲ್ಲಿ ತೊಡಗಿದ್ದ ಉದ್ರಿಕ್ತ ತೆಲಂಗಾಣ ಚಳವಳಿಗಾರರನ್ನು ಚದುರಿಸಲು ಇಂದು ರಾತ್ರಿ ಗುಂಡು ಹಾರಿಸಿದಾಗ ಮೂವರು ಸತ್ತರು.
25ಕ್ಕೂ ಹೆಚ್ಚು ಜನಕ್ಕೆ ಗಾಯಗಳಾಗಿವೆ. ಇವರಲ್ಲಿ ಕೆಲವರಿಗೆ ಗುಂಡೇಟು ಬಿದ್ದಿದೆ. ಆಸ್ಪತ್ರೆಗೆ ದಾಖಲು ಮಾಡಿರುವ ನಾಲ್ವರ ಸ್ಥಿತಿ ಚಿಂತಾಜನಕ. ಇದಕ್ಕೆ ಮುನ್ನ ಪೊಲೀಸರು ಲಾಠಿ ಪ್ರಹಾರ ಮಾಡಿದರು. ಆಗಲೂ ಗುಂಪು ಚದುರದೆ ಹೋದಾಗ ಹುಸಿಗುಂಡು ಹಾರಿಸಲಾಯಿತು. ಕಲ್ಲೆಸೆತದಲ್ಲಿ ಒಬ್ಬ ಸರ್ಕಲ್ ಇನ್ಸ್ಪೆಕ್ಟರ್ ಸೇರಿ 30 ಮಂದಿ ಪೊಲೀಸರಿಗೆ ಗಾಯಗಳಾಗಿವೆ.
ದೆಹಲಿಯಲ್ಲಿ ಪೂರ್ಣ ಪಾನನಿರೋಧ ಜಾರಿಗೆ ಪ್ರಯತ್ನ ಅಹಮದಾಬಾದ್, ಏ. 4– ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ಪೂರ್ಣ ಪಾನನಿರೋಧ ಜಾರಿಗೆ ತರಲು ಅಲ್ಲಿನ ಮೆಟ್ರೋಪಾಲಿಟನ್ ಮಂಡಳಿಯ ಆಡಳಿತ ನಿರ್ವಹಿಸುತ್ತಿರುವ ಭಾರತೀಯ ಜನಸಂಘ ಇಚ್ಛಿಸಿರುವುದನ್ನು ಪಕ್ಷದ ಅಧ್ಯಕ್ಷ ಅಟಲ್ ಬಿಹಾರಿ ವಾಜಪೇಯಿ ಅವರು ಇಂದು ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.