ಚಂದ್ರಗ್ರಹಕ್ಕೆ ಮಾನವ ರಹಿತ ರಷ್ಯನ್ ನೌಕೆ ಮಾಸ್ಕೋ, ಜು.13–ಚಂದ್ರಗ್ರಹಕ್ಕೆ ರಷ್ಯಾ ಇಂದು ಮಾನವ ರಹಿತ ನೌಕೆಯೊಂದನ್ನು ಪ್ರಯೋಗಿಸಿತು.
ಚಂದ್ರನ ಮೇಲೆ ನೌಕೆ ಇಳಿದು ಮತ್ತೆ ಅದು ಭೂಮಿಗೆ ವಾಪಸಾಗುವ ಅಸಾಧಾರಣ ಸಾಧನೆಗೆ ರಷ್ಯಾ ಪ್ರಯತ್ನಿಸಿದೆಯೆಂದು ವೀಕ್ಷಕರು ಭಾವಿಸಿದ್ದಾರೆ. ಇದು ಮನುಷ್ಯನನ್ನು ಚಂದ್ರನ ಮೇಲೆ ಇಳಿಸಲು ಅನಿವಾರ್ಯವಾದ ಪೂರ್ವಭಾವಿ ಕ್ರಮ.
ಈ ಪ್ರಯತ್ನ ಯಶಸ್ವಿಯಾದರೆ ಚಂದ್ರನನ್ನು ಮುಟ್ಟುವ ಪೈಪೋಟಿಯಲ್ಲಿ, ವಿಜ್ಞಾನ ಕ್ಷೇತ್ರದಲ್ಲಿ ರಷ್ಯಾ ಮುಂದುವರಿದಂತಾಗುತ್ತದೆ.
ರಾಷ್ಟ್ರಪತಿ ಸ್ಥಾನಕ್ಕೆ ಗಿರಿ ಸ್ಪರ್ಧೆ: ಕಾಂಗ್ರೆಸ್ ಉಮೇದುವಾರಿಕೆಗೆ ಅನಿರೀಕ್ಷಿತ ಸವಾಲು ನವದೆಹಲಿ.ಜುಲೈ13– ರಾಷ್ಟ್ರಪತಿ ಸ್ಥಾನಕ್ಕೆ ಸ್ಪರ್ಧಿಸಲು ತಾವು ತೀರ್ಮಾನಿಸಿರುವುದಾಗಿ ಹಂಗಾಮಿ ರಾಷ್ಟ್ರಪತಿ ವಿ.ವಿ.ಗಿರಿ ಅವರು ಇಂದು ಪ್ರಕಟಿಸಿದ್ದಾರೆ.
ಲೋಕಸಭಾಧ್ಯಕ್ಷ ಎನ್.ಸಂಜೀವ ರೆಡ್ಡಿ ಅವರನ್ನು ರಾಷ್ಟ್ರಪತಿ ಸ್ಥಾನಕ್ಕೆ ಉಮೇದುವಾರರನ್ನಾಗಿ ನಾಮಕರಣ ಮಾಡಲು ಪಕ್ಷದ ಪಾರ್ಲಿಮೆಂಟ್ ಮಂಡಲಿ ನಿರ್ಧರಿಸಿರುವುದೆಂದು ಕಾಂಗ್ರೆಸ್ ಅಧ್ಯಕ್ಷ ಎಸ್.ನಿಜಲಿಂಗಪ್ಪ ಅವರು ಇಂದು ಬೆಂಗಳೂರಿನಲ್ಲಿ ಬಹಿರಂಗ ಪಡಿಸಿದ ಸ್ವಲ್ಪ ಸಮಯಾನಂತರ ಗಿರಿ ಅವರು ತಮ್ಮ ತೀರ್ಮಾನ ಪ್ರಕಟಿಸಿದರು.
ಸಮಾಜವಾದಿ ಪಕ್ಷವಾಗದೆ ಕಾಂಗ್ರೆಸಿಗೆ ಉಳಿವಿಲ್ಲ: ಇಂದಿರಾ ಎಚ್ಚರಿಕೆ ಬೆಂಗಳೂರು, ಜುಲೈ. 13– ಕಾಂಗ್ರೆಸ್ ಸಂಸ್ಥೆಯು ಒಂದು ‘ಸಮಾಜವಾದಿ ಪಕ್ಷವಾಗಿ’ ಪರಿವರ್ತನೆಗೊಳ್ಳದಿದ್ದರೆ ಪಕ್ಷವಾಗಿ ಬಹಳ ಕಾಲ ಉಳಿಯುವುದಿಲ್ಲ ಎಂದು ಪ್ರಧಾನಮಂತ್ರಿ ಇಂದಿರಾಗಾಂಧಿ ಅವರು ಕಾಂಗ್ರೆಸಿಗರಿಗೆ ಇಂದು ಎಚ್ಚರಿಕೆ ನೀಡಿದರು.
ಕಾಂಗ್ರೆಸ್ ಒಂದು ಸಮಾಜವಾದಿ ಪಕ್ಷ. ಅದು ಸಮಾಜವಾದ ಸಾಧನೆಯತ್ತ ಹೋಗುತ್ತಾ ಇದ್ದರೂ ಜನರಲ್ಲಿ ವಿಶ್ವಾಸ ಉಂಟಾಗಿಲ್ಲ ಎಂದು ಎ.ಐ.ಸಿ.ಸಿ ಅಧಿವೇಶನವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ತಿಳಿಸಿದರು.