ಬೆಂಗಳೂರು, ಜ. 22– ರಾಯಚೂರು, ಗುಲ್ಬರ್ಗ ಜಿಲ್ಲೆಗಳ ಅಬಕಾರಿ ಕಾಂಟ್ರಾಕ್ಟ್ ನೀಡಿಕೆಯಲ್ಲಿ ಸರಕಾರ ಯಾವ ವ್ಯಕ್ತಿಯ ಬಗೆಗೂ ಪಕ್ಷಪಾತ ತೋರಿಲ್ಲವೆಂದು ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲರು ಇಂದು ವಿಧಾನಸಭೆಯಲ್ಲಿ ಸ್ಪಷ್ಟಪಡಿಸಿದರು.
ಸುಪ್ರೀಂ ಕೋರ್ಟು ಒಂದೇ ದಿನದಲ್ಲಿ 1168 ಮದ್ಯದ ಅಂಗಡಿಗಳಿಗೆ ಲೈಸನ್ಸ್ ಕೊಡಲು ಹೇಗೆ ಸಾಧ್ಯವಾಯಿತು ಎಂದು ಸಂಶಯ ವ್ಯಕ್ತಪಡಿಸಿದೆಯೆಂದು ಹೇಳಿದ ಅವರು ಶ್ರೀ ಕೆ.ವಿ. ನಿರಂಜನ ಅವರಿಗೆ ಮಾತ್ರ ಈ ರೀತಿ ಮಾಡಿಲ್ಲವೆಂದೂ ಆಮೇಲೆ ಸುಪ್ರೀಂ ಕೋರ್ಟಿಗೆ ಹೋದ ಶ್ರೀ ಭೂಮರೆಡ್ಡಿ ಅವರಿಗೂ ಹಿಂದೆ ಜೂನ್ 30 ರಂದು ಭಾನುವಾರವಾದರೂ ಒಂದೇ ದಿನದಲ್ಲಿ ಲೈಸನ್ಸ್ ಕೊಡಲಾಗಿದೆಯೆಂದರು.
ನಗರದಲ್ಲಿ ಹಸಿವಿನಿಂದ 115 ಸಾವು
ಬೆಂಗಳೂರು, ಜ. 22– ಕಳೆದ ವರ್ಷ ನಗರದಲ್ಲಿ ಸಂಭವಿಸಿದ 517 ಅಸ್ವಾಭಾವಿಕ ಮರಣಗಳ ಪೈಕಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳ ಸಂಖ್ಯೆ 287. ಇದರಲ್ಲಿ ಬಡತನ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡವರ ಸಂಖ್ಯೆ 115.
ಅಯೂಬ್ ಪತ್ರದಿಂದ ಆಶಾಭಾವನೆ
ನವದೆಹಲಿ, ಜ. 22– ಎರಡು ದೇಶಗಳ ನಡುವಣ ಬಾಂಧವ್ಯವನ್ನು ಮಾಮೂಲು ಸ್ಥಿತಿಗೆ ತರುವ ಬಗ್ಗೆ ಭಾರತ–ಪಾಕಿಸ್ತಾನಗಳು ಜಂಟಿ ವ್ಯವಸ್ಥೆ ಏರ್ಪಡಿಸಲು ಸಾಧ್ಯವಾಗಬಹುದೆಂಬ ಆಶಾಭಾವನೆಯನ್ನು ಪಾಕಿಸ್ತಾನದ ಅಧ್ಯಕ್ಷ ಅಯೂಬ್ ಖಾನ್ ಅವರ ಪತ್ರ ಇಲ್ಲಿಯ ಅಧಿಕೃತ ವಲಯಗಳಲ್ಲಿ ಮೂಡಿಸಿದೆ.