ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಮರೆಯಬಾರದ ವಿಭಿನ್ನ ರಾಜಕೀಯ ಮಾದರಿಗಳು

ದಲಿತ ಪ್ರಗತಿ ಚಕ್ರದ ಹಿನ್ನಡೆಯ ಈ ಕಾಲದಲ್ಲಿ ದಿಟ್ಟ ರಾಜಕಾರಣದ ಹುಡುಕಾಟ
Last Updated 13 ಸೆಪ್ಟೆಂಬರ್ 2022, 19:31 IST
ಅಕ್ಷರ ಗಾತ್ರ

ಕರ್ನಾಟಕದ ವೈಚಾರಿಕ ಲೋಕದ ದಿಕ್ಕನ್ನೂ ದಲಿತ ಚಳವಳಿ, ದಲಿತ ರಾಜಕಾರಣಗಳನ್ನೂ ತಮ್ಮ ಪ್ರಖರ ಮಾತು- ಚಿಂತನೆಗಳ ಮೂಲಕ ಬದಲಿಸಿದ ಬಿ.ಬಸವಲಿಂಗಪ್ಪನವರ (ಜನನ: 21.4.1921) ಜನ್ಮಶತಮಾನೋತ್ಸವ ವರ್ಷ ಸದ್ದಿಲ್ಲದೆ ಸರಿದುಹೋಯಿತು. ಕರ್ನಾಟಕದ ಮತ್ತೊಬ್ಬ ಹಿರಿಯ ರಾಜಕಾರಣಿ ಬಿ.ರಾಚಯ್ಯನವರ (ಜನನ: 10.8.1922) ಜನ್ಮಶತಮಾನೋತ್ಸವ ವರ್ಷ ಈಗ ಆರಂಭವಾಗಿದೆ.

ಫೈರ್ ಬ್ರ್ಯಾಂಡ್ ರಾಜಕಾರಣಿ ಬಸವಲಿಂಗಪ್ಪನವರನ್ನೇ ಮರೆತು ಜಡವಾಗಿರುವ ಕನ್ನಡನಾಡು, ರಾಚಯ್ಯನವರಂಥ ಸೌಮ್ಯ ರಾಜಕಾರಣಿಯನ್ನು ನೆನೆಯುತ್ತದೆಂದು ನಿರೀಕ್ಷಿಸುವುದು ಕಷ್ಟ. ಆದರೆ ದಲಿತ ಚಳವಳಿಗಿಂತ ಮೊದಲಿನ ದಲಿತಕೇಂದ್ರಿತ ರಾಜಕೀಯವು ಒಟ್ಟು ಬಡವರ ಸಾಮಾಜಿಕ ಚಲನೆಗಳಿಗೆ ನಾಂದಿ ಹಾಡಿದ ಘಟ್ಟವನ್ನೂ ಅದಕ್ಕೆ ಕಾರಣರಾದ ನಾಯಕರನ್ನೂ ಮರೆತರೆ ದಮನಿತರ ಚಲನೆಯ ಆರಂಭದ ಚರಿತ್ರೆಯನ್ನೇ ಕಡೆಗಣಿಸಿದಂತಾಗುತ್ತದೆ.

ಭಾರತದ ಸ್ವಾತಂತ್ರ್ಯೋತ್ತರ ದಲಿತ ರಾಜಕಾರಣ ದಲ್ಲಿ ಮೊದಲಿಗೆ ಗಾಂಧಿ- ನೆಹರೂ ಮಾದರಿಯ ನಂತರ ಅಂಬೇಡ್ಕರ್ ಮಾದರಿ, ಜಗಜೀವನರಾಂ ಮಾದರಿಗಳು ಬಹುಕಾಲ ಮುಂದುವರಿದವು. ಕಾನೂನು ಪದವಿ ಪಡೆದು ಕಾಂಗ್ರೆಸ್ ಸೇರಿದ ಬಸವಲಿಂಗಪ್ಪ, ಅಂಬೇಡ್ಕರ್ ಮಾದರಿಯನ್ನು ಕಾಂಗ್ರೆಸ್ಸಿನೊಳಕ್ಕೆ ತರಲೆತ್ನಿ ಸಿದರು. ಪ್ರಜಾ ಸೋಷಲಿಸ್ಟ್ ಪಾರ್ಟಿಯ ಮೂಲಕ ಶಾಸಕರಾಗಿ ಗೆದ್ದು, ನಂತರ ಕಾಂಗ್ರೆಸ್ ಸೇರಿದ ರಾಚಯ್ಯ, ಜಗಜೀವನರಾಂ ಮಾದರಿಯ ಮೆದು ಮಧ್ಯಮ ರಾಜಕಾರಣವನ್ನು ಮುಂದುವರಿಸಿದರು. ಕರ್ನಾಟಕದಲ್ಲಿ ಅಂಬೇಡ್ಕರ್ ಚಿಂತನೆ ಗಾಢವಾಗಿ ಹಬ್ಬುವ ಮೊದಲೇ ಅಂಬೇಡ್ಕರ್ ಬರಹಗಳನ್ನು ಬಸವಲಿಂಗಪ್ಪ ಓದಿದ್ದರು. ಬಸವಣ್ಣ, ಕುವೆಂಪು, ಬೇಂದ್ರೆ ಸಾಹಿತ್ಯ, ಅಮೆರಿಕದ ಕಪ್ಪು ಸಾಹಿತ್ಯವನ್ನೂ ಓದುತ್ತಿದ್ದ ಅವರು ತೀಕ್ಷ್ಣ ಮಾತಿನ ದಿಟ್ಟ ನಾಯಕರಾಗಿದ್ದರು. ಅವರ ಕೊಡುಗೆ ದಲಿತ ಚಳವಳಿಗಷ್ಟೇ ಅಲ್ಲ, ನಂತರದ ಶೂದ್ರ ಬರಹಗಾರರ ಒಕ್ಕೂಟ, ದಲಿತ ಸಾಹಿತ್ಯ, ಬಂಡಾಯ ಸಾಹಿತ್ಯಗಳಂಥ ಸಾಂಸ್ಕೃತಿಕ ಬೆಳವಣಿಗೆಗಳ ಹಿನ್ನೆಲೆಯಲ್ಲೂ ಇದೆ.

ತರುಣ ಬಸವಲಿಂಗಪ್ಪ ಸೈಕಲ್ಲೇರಿ ಹರಿಹರದ ಅಕ್ಕಪಕ್ಕದ ಹಳ್ಳಿಗಳ ದಲಿತ ಮಕ್ಕಳನ್ನು ಶಾಲೆಗೆ ಸೇರಿಸುವಂತೆ ತಿಳಿಹೇಳುತ್ತಿದ್ದರು. ಈ ದಲಿತ ಕಾಳಜಿ ಅವರು ಮುಂದೆ ಹಲ ಬಗೆಯ ಅಧಿಕಾರಗಳನ್ನು ಹಿಡಿದಾಗ ಖಚಿತ ದಿಕ್ಕುಗಳನ್ನು ಪಡೆಯಿತು. ತಲೆ ಮೇಲೆ ಮಲ ಹೊರುವುದನ್ನು ನಿಷೇಧಿಸಿ ಕಾನೂನು ಜಾರಿಗೆ ತಂದ ಅವರು, ದಲಿತರಿಗೆ ಮಂಜೂರಾದ ಜಮೀನಿನ ಪರಭಾರೆಯಾಗದಂತೆ ಮಾಡಿದ ಕಾನೂನನ್ನೂ ರೂಪಿಸಿದರು. ಎಲ್ಲ ಜಾತಿಗಳ ಬಡವರಿಗೂ ನೆರವಾದ ‘ಉಳುವವನಿಗೇ ಭೂಮಿ’ ಆಶಯ ಕಾನೂನಾದಾಗ ಅವರು ಕಂದಾಯ ಮಂತ್ರಿಯಾಗಿದ್ದರು. ಭಾರತಕ್ಕೇ ಮಾದರಿಯಾದ ಈ ಮೂರೂ ಕ್ರಾಂತಿಕಾರಿ ಶಾಸನಗಳ ಹಿಂದೆ ಬಸವಲಿಂಗಪ್ಪನವರ ಕಾಳಜಿ, ಅಧ್ಯಯನ, ಶ್ರಮ, ಬದ್ಧತೆಗಳಿವೆ. ಬಸವಲಿಂಗಪ್ಪ 37ನೇ ವಯಸ್ಸಿನಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರದಲ್ಲಿ ಗೃಹಖಾತೆಯ ಉಪಮಂತ್ರಿಯಾದಾಗ ದಲಿತರ ಹಿತ ಕಾಯ್ದ ರೀತಿ ಯಾವುದೇ ಗೃಹಮಂತ್ರಿಯ ಆದ್ಯ ಕರ್ತವ್ಯಗಳ ಖಚಿತ ಮಾದರಿಯನ್ನು ರೂಪಿಸಿತು. ಮುಂದೆ ರಾಚಯ್ಯನವರು ಕೂಡ ರಾಜ್ಯದ ಗೃಹಮಂತ್ರಿಯಾಗಿ ದಲಿತರಲ್ಲಿ ಆತ್ಮವಿಶ್ವಾಸ ತುಂಬಿದ ಕಾಲವೂ ಬಂತು. ಪ್ರಬಲ ಜಾತಿಗಳ ಪ್ರತಿನಿಧಿಗಳಿಗಿಂತ, ದಲಿತ ರಾಜಕಾರಣಿಗಳು ಗೃಹಮಂತ್ರಿಗಳಾಗುವುದು ಅತ್ಯಂತ ಮುಖ್ಯ ಎಂಬುದನ್ನು ಈ ಇಬ್ಬರು ನಾಯಕರೂ ತೋರಿಸಿಕೊಟ್ಟರು.

ತರುಣ ಬಸವಲಿಂಗಪ್ಪನವರಿಗಿಂತ ಭಿನ್ನ ವಾಗಿದ್ದ ತರುಣ ರಾಚಯ್ಯ ಕೂಡ ಸೈಕಲ್ಲೇರಿ ಊರೂರು ಸುತ್ತಿ ಜನಜಾಗೃತಿ ಮೂಡಿಸಿದ್ದರು. ದಲಿತ ಜಾಗೃತಿ- ವಿಮೋಚನೆಯು ಬಸವಲಿಂಗಪ್ಪನವರಂಥ ಖಡಕ್ ನಾಯಕರಂತೆ, ರಾಚಯ್ಯನವರಂಥ ಸೌಮ್ಯ ನಾಯಕರಿಂದಲೂ ರೂಪುಗೊಂಡಿದ್ದನ್ನು ಈ ಆರಂಭದ ಹೆಜ್ಜೆಗಳು ಹೇಳುತ್ತವೆ. 1950ರ ದಶಕದಲ್ಲಿ ರಾಚಯ್ಯನವರು ದಲಿತ ಹುಡುಗರನ್ನು ಜೀತದಿಂದ ಬಿಡಿಸಲೆತ್ನಿಸಿದ್ದರು. ಸರ್ಕಾರಿ ಅಧಿಕಾರಿಗಳನ್ನು ಕಾಡಿ ಬೇಡಿ, ಆ ಹುಡುಗರನ್ನು ಸಣ್ಣಪುಟ್ಟ ಕೆಲಸಗಳಿಗೆ ಸೇರಿಸಿದ್ದರು. ಹೀಗೆ ಜೀತಮುಕ್ತರಾಗಿ ಸರ್ಕಾರಿ ಕೆಲಸಗಳಿಗೆ ಸೇರಿದ ಹುಡುಗರು ಮುಂದೆ ದಲಿತ ಚಳವಳಿಯ ಬೆಂಬಲಿಗರಾಗಿಯೋ ಸ್ಥಳೀಯ ನಾಯಕರುಗಳಾಗಿಯೋ ಬೆಳೆದಿರಬಹುದಾದ ಸಾಧ್ಯತೆಗಳನ್ನು ಅಲ್ಲಗಳೆಯಲಾಗದು. ಸ್ವಾತಂತ್ರ್ಯಾ ನಂತರದ ದಶಕಗಳಲ್ಲಿ ರಾಜಕಾರಣಕ್ಕಿಳಿದ ಎಲ್ಲ ಜಾತಿಗಳ ನಾಯಕರಲ್ಲೂ ತಂತಮ್ಮ ಸಮುದಾಯಗಳಿಗೆ ನೆರವಾಗುವ ಮೂಲಕ ಜನನಾಯಕರಾಗುವ ಮಾದರಿಯಿತ್ತು; ಅಥವಾ ರಾಜಕೀಯಕ್ಕಿಳಿದು ಜನರಿಗೆ ನೆರವಾಗುತ್ತಾ ಜನನಾಯಕರಾಗುವ ಮಾದರಿಯಿತ್ತು. ರಾಜಕಾರಣದ ಈ ಮೂಲ ಮಾದರಿಗಳೇ ಮಾಯ
ವಾಗುತ್ತಿರುವ ಕಾಲದಲ್ಲಿ ಬಸವಲಿಂಗಪ್ಪ, ರಾಚಯ್ಯನವರ ಮಾದರಿ ಆದರ್ಶವಾಗಿ ಕಾಣತೊಡಗುತ್ತದೆ.

ರಾಚಯ್ಯನವರು ಹೈಸ್ಕೂಲ್ ದಿನಗಳಿಂದಲೇ ವಿದ್ಯಾರ್ಥಿ ನಾಯಕರಾಗಿದ್ದವರು. 1953ರಲ್ಲಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯನವರು ಮೈಸೂರಿಗೆ ಬಂದಿದ್ದರು. ಆಗ ಶಾಸಕರಾಗಿದ್ದ ರಾಚಯ್ಯನವರು ಮುಖ್ಯಮಂತ್ರಿಯವರಿಗೆ ಮೈಸೂರಿನ ಲಲಿತ್‌ಮಹಲ್ ಕಟ್ಟಡ ತೋರಿಸುತ್ತಾ ಮಾಡಿಕೊಂಡ ಕೋರಿಕೆ: ‘ಇಂಥ ಒಂದು ಸುಂದರ ವಿದ್ಯಾರ್ಥಿ ನಿಲಯದ ಕಟ್ಟಡವೊಂದು ಅಶೋಕಪುರಂನಲ್ಲಿ ನಿರ್ಮಾಣವಾದರೆ, ನೂರಾರು ದಲಿತ ವಿದ್ಯಾರ್ಥಿಗಳಿಗೆ ವಿದ್ವತ್ತಿನ ಕೇಂದ್ರವಾಗುತ್ತದೆ’. ಮುಂದಿನ ವರ್ಷವೇ ಅಲ್ಲಿ ವಿದ್ಯಾರ್ಥಿ ನಿಲಯ ನಿರ್ಮಾಣವಾಯಿತು. ರಾಚಯ್ಯನವರ ಬೇಡಿಕೆಯ ಫಲ ಹಲವು ತಲೆಮಾರುಗಳ ದಲಿತ ವಿದ್ಯಾರ್ಥಿಗಳ ಬದುಕಿನ ದಿಕ್ಕನ್ನೂ ಬದಲಿಸಿದೆ, ಅಶೋಕಪುರಂನ ದಿಟ್ಟ ವಿದ್ಯಾರ್ಥಿಗಳು ಕರ್ನಾಟಕದ ದಲಿತ ಚಳವಳಿಯ ದಿಕ್ಕನ್ನೂ ಬದಲಿಸಿದ್ದಾರೆ. ಬಸವಲಿಂಗಪ್ಪನವರು ಕಾಂಗ್ರೆಸ್ಸಿನೊಳಗಿದ್ದೇ ಎಲ್ಲೆಡೆಯಿರುವ ಜಾತಿವಿಕಾರವನ್ನು ಪ್ರಶ್ನಿಸುತ್ತಿದ್ದರು. ಬಾಬಾಸಾಹೇಬರ ನೈತಿಕ ಸಿಟ್ಟಿನ ಮಾದರಿಯನ್ನು, ವೈಚಾರಿಕ ನೋಟಗಳನ್ನು, ಬೌದ್ಧ ಚಿಂತನೆಯ ಪ್ರಸಾರದ ಮಾದರಿಯನ್ನು ಮುಂದುವರಿಸುತ್ತಿದ್ದರು. ರಾಚಯ್ಯನವರಂಥ ರಾಜಕಾರಣಿಗಳು ಸವರ್ಣೀಯರನ್ನು ನೇರವಾಗಿ ಎದುರು ಹಾಕಿಕೊಳ್ಳದೆ ಚುನಾವಣಾ ರಾಜಕಾರಣ ಮಾಡುತ್ತಾ ದಲಿತರ ಹಿತಾಸಕ್ತಿ ಕಾಯ್ದುಕೊಳ್ಳಲೆತ್ನಿಸಿದರು.

ರಾಚಯ್ಯನವರ ಮಾತಿನಲ್ಲಿ ಅಂಬೇಡ್ಕರ್ ಚಿಂತನೆ ಗಳು ಎದ್ದು ಕಾಣುವಂತೆ ಇರಲಿಲ್ಲ. ಆದರೆ ಅಂಬೇಡ್ಕರ್ ಅವರ ಸಾಮಾಜಿಕ ಕಾರ್ಯಕ್ರಮಗಳನ್ನು ಎಷ್ಟರಮಟ್ಟಿಗೆ ಅಧಿಕಾರ ರಾಜಕಾರಣದ ಮಿತಿಯಲ್ಲಿ ಅಳವಡಿಸಿಕೊಂಡು ಸಾಧಿಸಬಹುದೋ ಅಷ್ಟು ದೂರವಂತೂ ಅವರು ಸಾಗಿದರು. ರಾಚಯ್ಯನವರಂಥ ಕಾಳಜಿಯ ರಾಜಕಾರಣಿಗಳು ದಲಿತ ಚಳವಳಿ ಶುರುವಾಗುವ ಮೊದಲು ಹಾಗೂ ಆನಂತರ ಕೂಡ ಒಂದಲ್ಲ ಒಂದು ಬಗೆಯಲ್ಲಿ ದಲಿತ ಚಳವಳಿಗೆ ಪೂರಕವಾದ ಕೆಲಸಗಳನ್ನು ಸರ್ಕಾರದೊಳಗಿದ್ದೇ ಮಾಡುತ್ತಾ ಬಂದರು.

ಈ ನಾಯಕರ ಬದುಕು, ರಾಜಕಾರಣಗಳನ್ನು ಒಟ್ಟಿಗೇ ನೋಡತೊಡಗಿದರೆ, ಕರ್ನಾಟಕದ ದಲಿತ ಸಮುದಾಯದ ಬದಲಾವಣೆಯ ಮೊದಲ ಘಟ್ಟದ ಸವಾಲುಗಳ ಪರಿಚಯವಾಗುತ್ತದೆ. ದಲಿತ ಚಳವಳಿಯಿನ್ನೂ ದೊಡ್ಡ ಮಟ್ಟದಲ್ಲಿ ಆರಂಭವಾಗದ ಕಾಲದಲ್ಲಿ ದಲಿತರ ಕಷ್ಟಗಳಿಗೆ ಪರಿಹಾರ ಹುಡುಕುತ್ತಿದ್ದ ಮೊದಲ ತಲೆಮಾರಿನ ನಾಯಕ- ರಾಜಕಾರಣಿಗಳ ಕಾಳಜಿಗಳ ದಾಖಲಾಗದ ಚರಿತ್ರೆಯ ವಿವರಗಳು ಗೋಚರವಾಗತೊಡಗುತ್ತವೆ. ಡಾ. ನಂಜಯ್ಯ ಹೊಂಗನೂರು ಅವರ ‘ಬಿ. ರಾಚಯ್ಯ ಅವರ ಜೀವನ ಮತ್ತು ರಾಜನೀತಿ’, ಲಕ್ಷ್ಮೀನಾರಾಯಣ ನಾಗವಾರ ಅವರ ‘ಬಿ. ಬಸವಲಿಂಗಪ್ಪ ಮತ್ತು ಬೂಸಾ ಚಳುವಳಿಯ ಕಾಲು ಶತಮಾನ’, ಎನ್.ಕೆ.ಹನುಮಂತಯ್ಯನವರ ‘ಕ್ರಾಂತಿಯ ವಸಂತ’ ಪುಸ್ತಕಗಳು ಕಡೆಗಣಿಸಲಾದ ಚರಿತ್ರೆಯ ಈ ಘಟ್ಟಗಳನ್ನು ದಾಖಲಿಸಲೆತ್ನಿಸಿವೆ.

ಸಾವಿರಾರು ವರ್ಷಗಳಿಂದ ಅಸ್ಪೃಶ್ಯತೆಯ ನೋವು, ಸಂಕಷ್ಟಗಳನ್ನು ತೀವ್ರವಾಗಿ ಅನುಭವಿಸಿ ನೊಂದ ಪದದಲಿತ ಸಮುದಾಯಗಳು ಅಂಬೇಡ್ಕರೋತ್ತರ ಯುಗದಲ್ಲಿ ನಡೆಸಿದ ಎಡೆಬಿಡದ ಹೋರಾಟಗಳಿಂದಾಗಿ ಪಡೆದಂಥ ಅಷ್ಟಿಷ್ಟು ರಾಜಕೀಯ ಅಧಿಕಾರವನ್ನೂ ಕಳೆದುಕೊಳ್ಳುತ್ತಿರುವ ಕಾಲ ಇದು. ದಲಿತ ಪ್ರಗತಿ ಚಕ್ರದ ಹಿನ್ನಡೆಯ ಈ ಕಾಲದಲ್ಲಿ ರಾಚಯ್ಯನವರ ತಾಳ್ಮೆಯ ರಾಜಕಾರಣದ ಸಾಧ್ಯತೆಗಳನ್ನು, ಬಸವಲಿಂಗಪ್ಪನವರ ದಿಟ್ಟ ರಾಜಕಾರಣದ ಮಹತ್ವವನ್ನು ಅರಿತು, ಇವೆರಡನ್ನೂ ಬೆಸೆದು ದಲಿತ ರಾಜಕಾರಣವನ್ನು ಮುಂದಿನ ದಿಕ್ಕಿನೆಡೆಗೆ ಒಯ್ಯಬೇಕಾದ ಸವಾಲು ಎದುರಾಗಿದೆ. ಬಸವಲಿಂಗಪ್ಪ ಹಾಗೂ ರಾಚಯ್ಯನವರ ರಾಜಕಾರಣದ ಮಾದರಿಗಳ ವಸ್ತುನಿಷ್ಠ ಅಧ್ಯಯನ ಈ ದಿಸೆಯಲ್ಲಿನ ಚರ್ಚೆ, ಕ್ರಿಯೆಗಳಿಗೆ ಹಾದಿ ಮಾಡಿಕೊಡಬಲ್ಲದು.

ನಟರಾಜ್ ಹುಳಿಯಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT