ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೂದಾಳು... ಕನ್ನಡ ವಿದ್ವತ್‌ ಪ್ರಪಂಚದ ಕಟ್ಟಾಳು

Last Updated 13 ಫೆಬ್ರುವರಿ 2021, 19:30 IST
ಅಕ್ಷರ ಗಾತ್ರ

ನಟರಾಜ ಬೂದಾಳರ ಕೃತಿಗಳ ಮೇಲೆ ಚರ್ಚೆ-ಮಂಥನ ಕಾರ್ಯಕ್ರಮ ಇಂದು (ಫೆ.14) ತುಮಕೂರಿನಲ್ಲಿ ಆಯೋಜಿತವಾಗಿದೆ. ಈ ಸಂದರ್ಭದಲ್ಲಿ ಅವರ ಚಿಂತನೆಯ ಮೇಲೊಂದು ಪರಿಚಯಾತ್ಮಕ ನೋಟ...

***

ಕರ್ನಾಟಕ ಸಂಸ್ಕೃತಿಯನ್ನು ಬೇರೆಬೇರೆ ಕಾಲಘಟ್ಟಗಳಲ್ಲಿ, ವಿಭಿನ್ನ ಉದ್ದೇಶ ಮತ್ತು ದೃಷ್ಟಿಕೋನಗಳಿಂದ ಅರ್ಥೈಸುವ ಕೆಲಸವನ್ನು ಕನ್ನಡ ವಿದ್ವತ್ತು ಮಾಡಿಕೊಂಡು ಬಂದಿದೆ. ಈ ಸಂಸ್ಕೃತಿ ಚಿಂತನ ಪರಂಪರೆಗೆ ಸರಿಸುಮಾರು ಒಂದು ಶತಮಾನ ಕಾಲದ ಚರಿತ್ರೆಯಿದೆ.

ಕನ್ನಡದಲ್ಲಿ ಹೆಚ್ಚಿನ ಸಂಸ್ಕೃತಿ ಚಿಂತನೆಗಳು ಸಾಹಿತ್ಯಕ ನೆಲೆಯಿಂದ ಹುಟ್ಟಿದವು. ಆದರೆ ಅರ್ಥಪೂರ್ಣ ಸಂಸ್ಕೃತಿ ಚಿಂತನೆಯು ಸಾಹಿತ್ಯವನ್ನೂ ಒಳಗೊಂಡಂತೆ ಚರಿತ್ರೆ ಸಮಾಜ ರಾಜಕಾರಣ ತತ್ವಶಾಸ್ತ್ರಗಳ ಬುನಾದಿಯಲ್ಲಿ ಹರಹಿಕೊಳ್ಳುತ್ತದೆ; ಶಾಸನಗಳಿಂದ ಹಿಡಿದು ತತ್ವಪದಗಳ ತನಕ, ರಾಜಕೀಯ ವಿದ್ಯಮಾನಗಳಿಂದ ಹಿಡಿದು ಟಿವಿ ಚಾನೆಲ್ಲುಗಳ ತನಕ, ಜನರ ಆಲೋಚನಾ ಕ್ರಮವನ್ನು ಬದಲಿಸುವ ಎಲ್ಲ ಕ್ಷೇತ್ರಗಳಿಗೆ ಲಗತ್ತಾದ ಸಾಮಗ್ರಿಗಳನ್ನು ತೆಕ್ಕೆಗೆ ತೆಗೆದುಕೊಂಡು ವಿಶ್ಲೇಷಿಸಲು ಹವಣಿಸುತ್ತದೆ; ವಿಶ್ಲೇಷಣೆ-ವ್ಯಾಖ್ಯಾನಗಳನ್ನು ತಾತ್ವೀಕರಿಸಿ ಹೊಸ ತಿಳಿವನ್ನು ಸೃಷ್ಟಿಸುತ್ತದೆ; ಈ ತಿಳಿವಿನ ಬೆಳಕಿನಲ್ಲಿ ಸಮಾಜವನ್ನು ಮತ್ತಷ್ಟು ಆರೋಗ್ಯಕರವಾಗಿ ಕಟ್ಟುವ ಕನಸನ್ನು ಹುದುಗಿಸುತ್ತದೆ; ಈ ತಿಳಿವು-ಕನಸುಗಳನ್ನು ಜನರ ಪ್ರಜ್ಞೆಯ ಭಾಗವಾಗಬೇಕೆಂದು ಹಂಬಲಿಸುತ್ತದೆ. ಹೀಗಾಗಿ ಸಂಸ್ಕೃತಿ ಚಿಂತನೆಯು ಕೇವಲ ತಾತ್ವಿಕ ಚೌಕಟ್ಟುಗಳನ್ನು ಸೃಷಿಸುವ ವಿದ್ವತ್ಕಾರ್ಯವಲ್ಲ. ಅದೊಂದು ಹೊಣೆಗಾರಿಕೆ. ಈ ದಿಸೆಯಲ್ಲಿ ಕೆಲಸ ಮಾಡುತ್ತಿರುವ ವಿದ್ವಾಂಸರಲ್ಲಿ ನಟರಾಜ ಬೂದಾಳರೂ ಪ್ರಮುಖರು.

ಸ್ಥೂಲವಾಗಿ ಹೇಳಬಹುದಾದರೆ, ಕನ್ನಡದ ಸಂಸ್ಕೃತಿ ಚಿಂತನೆಯಲ್ಲಿ ಪ್ರಧಾನವಾಗಿ ಎರಡು ಧಾರೆಗಳಿವೆ. ಒಂದು-ಸಾಂಪ್ರದಾಯಿಕ ಧಾರೆ. ಇದು ಮುಖ್ಯವಾಗಿ ಅಧಿಕಾರಸ್ಥ ವರ್ಗಗಳ ಪರವಾದ ದೃಷ್ಟಿಕೋನಗಳ ಮೂಲಕ ನಾಡಿನ ಬದುಕನ್ನು ಕಾಣುತ್ತ ಚಿಂತನೆಯನ್ನು ರೂಪಿಸುತ್ತದೆ. ಪರೋಕ್ಷವಾಗಿ ವರ್ತಮಾನದಲ್ಲಿ ಅಧಿಕಾರಸ್ಥ ವರ್ಗಗಳ ಯಜಮಾನಿಕೆಯನ್ನು ಮುಂದುವರೆಸಲು ಬೇಕಾದ ಆಲೋಚನಾ ಕ್ರಮವನ್ನು ಸ್ಥಾಪಿಸುತ್ತದೆ. ಇನ್ನೊಂದು- ಅಧಿಕಾರಸ್ಥ ವಲಯಗಳನ್ನು ವಿಮರ್ಶೆ ಮಾಡುತ್ತ ಮೂಡುವ ಧಾರೆ. ಇದು ಸಾಮಾಜಿಕವಾಗಿ ಕೆಳಸ್ತರಕ್ಕೆ ಸೇರಿದ ದುಡಿಮೆಗಾರ ಸಮುದಾಯಗಳ ಬಾಳ ವಿನ್ಯಾಸಗಳಲ್ಲಿರುವ ಸಂಸ್ಕೃತಿಯನ್ನು ವಿಶ್ಲೇಷಿಸುತ್ತದೆ; ದಮನಿತ ವರ್ಗಗಳಲ್ಲಿ ಚಾರಿತ್ರಿಕ ಅರಿವು ಮತ್ತು ಹಕ್ಕುಪ್ರಜ್ಞೆ ಮೂಡಿಸಲು ಯತ್ನಿಸುತ್ತದೆ. ಈ ಧಾರೆಯಲ್ಲಿ ಶಂಬಾ ಜೋಶಿ, ಕೆ.ಜಿ. ನಾಗರಾಜಪ್ಪ, ಎಸ್.ಎಸ್. ಹಿರೇಮಠ, ಎಚ್.ಎಸ್. ಶಿವಪ್ರಕಾಶ್, ಡಿ.ಆರ್. ನಾಗರಾಜ್, ಕೋಟಿಗಾನಹಳ್ಳಿ ರಾಮಯ್ಯ, ಬಿಳಿಮಲೆ, ಬಸವರಾಜ ಕಲ್ಗುಡಿ, ಬಂಜಗೆರೆ, ಲಕ್ಷ್ಮೀಪತಿ ಕೋಲಾರ, ಕೃಷ್ಣಮೂರ್ತಿ ಹನೂರು, ನಟರಾಜ ಬೂದಾಳು, ಪದ್ಮಾಲಯ ನಾಗರಾಜ ಮೊದಲಾಗಿ ಹಲವರಿದ್ದಾರೆ. ಈ ಹಿನ್ನೆಲೆಯಲ್ಲಿ ಬೂದಾಳರ ಚಿಂತನೆಗಿರುವ ಕೆಲವು ಮುಖ್ಯ ಚಹರೆಗಳನ್ನು ಗಮನಿಸಬಹುದು:

ಅ ಬೌದ್ಧ ಶಾಕ್ತ ಸಿದ್ಧ ಸೂಫಿ ಶರಣ ಚಾರ್ವಾಕ ನಾಥ ಅಚಲ ಆಜೀವಿಕಾ ಸಹಜಯಾನ ಮುಂತಾದ ದರ್ಶನಗಳ ಮೂಲಕ ಸಂಸ್ಕೃತಿಯನ್ನು ನಿರ್ವಚಿಸುವುದು; ಮುಖ್ಯವಾಗಿ ಬೌದ್ಧಚಿಂತಕ ನಾಗಾರ್ಜುನ, ಅಲ್ಲಮಪ್ರಭು ಹಾಗೂ ತತ್ವಪದಕಾರರ ಅನುಸಂಧಾನದಲ್ಲಿ ಹೊಸಹೊಸ ಪ್ರಮೇಯಗಳನ್ನು ಕಟ್ಟುವುದು. ಈ ಅರ್ಥದಲ್ಲಿ ಬೂದಾಳರ ಸಂಸ್ಕೃತಿ ಚಿಂತನೆಯನ್ನು, ಭಾರತದ ಬಂಡುಕೋರ ಶ್ರಮಣ ಅಥವಾ ಗುರುಮಾರ್ಗಗಳನ್ನು ಸಮಕಾಲೀನಗೊಳಿಸುವ ವ್ಯಾಖ್ಯಾನ ಎಂದು ಕರೆಯಬಹುದು.

ಆ ಕನ್ನಡ ಸಾಹಿತ್ಯದ ಬೇರೆಬೇರೆ ಕಾಲಘಟ್ಟದ ಪಠ್ಯಗಳನ್ನು ಮರುವ್ಯಾಖ್ಯಾನಕ್ಕೆ ಒಳಪಡಿಸುವುದು; ತನ್ಮೂಲಕ ಹೊಸ ತಾತ್ವಿಕ ಚೌಕಟ್ಟುಗಳನ್ನು ಹೊಮ್ಮಿಸುವುದು. ಈ ನಿಟ್ಟಿನಲ್ಲಿ ಬೂದಾಳರು ನಾಗಾರ್ಜುನನ ಮಧ್ಯಮಮಾರ್ಗ, ಅಲ್ಲಮನ ಶೂನ್ಯತತ್ವ ಹಾಗೂ ಜೈನ ಅನೇಕಾಂತವಾದಗಳ ಮೂಲಕ ಕನ್ನಡ ಪಠ್ಯಗಳನ್ನು ವಿಶ್ಲೇಷಿಸುತ್ತ ಕನ್ನಡ ಕಾವ್ಯಮೀಮಾಂಸೆಯನ್ನು ಕಟ್ಟಿರುವರು. ಪಂಪನ ಕಾವ್ಯವನ್ನು ಅನೇಕಾಂತವಾದದ ಮೂಲಕ, ತತ್ವಪದ ಹಾಗೂ ವಚನಗಳನ್ನು ಶೂನ್ಯವಾದದ ಮೂಲಕ ವಿಶ್ಲೇಷಿಸುತ್ತ ಅವರು ಹುಟ್ಟಿಸಿರುವ ಹೊಳಹುಗಳು ವಿಶೇಷವಾಗಿವೆ.

ಹೀಗೆ ಕಟ್ಟಲಾದ ತಾತ್ವಿಕ ಚೌಕಟ್ಟು ಅಥವಾ ತತ್ವಸಂಹಿತೆಗಳನ್ನು ಕೇವಲ ಶೈಕ್ಷಣಿಕ ಜ್ಞಾನದ ಸಾಧನಗಳಾಗಿಸದೆ, ಸಾಮಾಜಿಕರ ಪ್ರಜ್ಞೆಯನ್ನು ರೂಪಿಸುವ ಹತ್ಯಾರಗಳಾಗಿಸಲು ಹಂಬಲಿಸುವುದು; ಬದುಕಿನಲ್ಲಿ ಪರ್ಯಾಯವಾದ ಹಾದಿಗಾಣಿಸುವ ಮತ್ತು ಬದುಕಿನ ವಿಧಾನವನ್ನು ಬದಲಾಯಿಸುವ ಕೈಮರಗಳನ್ನಾಗಿಸಲು ಇಚ್ಛಿಸುವುದು. ಈ ಹಿನ್ನೆಲೆಯಲ್ಲಿ ಅವರು ಕೀಲಿಕೈ ರೂಪದ ಕೆಲವು ಬೌದ್ಧ ಪರಿಕಲ್ಪನೆಗಳನ್ನು ಆಧರಿಸಿ, ‘ಬುದ್ಧನಡೆ’ ಎಂಬ ಹೆಸರಿನ ಕಿರುಪುಸ್ತಕಗಳ ಸರಣಿಯನ್ನು ಆರಂಭಿಸಿದ್ದಾರೆ. ಈ ಪ್ರಯತ್ನಗಳು ಅವರ ಚಿಂತನೆಗಳಿಗೆ ಆಕ್ಟಿವಿಸ್ಟ್‌ ತುರ್ತನ್ನು ಒದಗಿಸಿವೆ.

ಮೇಲ್ಕಾಣಿಸಿದ ತಾತ್ವಿಕ ಭಿತ್ತಿಯಲ್ಲಿ ಕಳೆದೆರಡು ದಶಕಗಳಿಂದ ಬೂದಾಳರು ‘ನಾಗಾರ್ಜುನನ ಮೂಲಮಾಧ್ಯಮಕ ಕಾರಿಕಾ’ (2006), ‘ನಾಗಾರ್ಜುನ- ಅಲ್ಲಮಪ್ರಭು’ (2010), ‘ಕನ್ನಡ ಕಾವ್ಯಮೀಮಾಂಸೆ’ (2016), ‘ಪ್ರತ್ಯೇಕ ಬುದ್ಧ ಅಲ್ಲಮಪ್ರಭು’ (2017), ‘ಹಿಂದಣ ಹೆಜ್ಜೆಯನರಿತಲ್ಲದೆ’ (2017), ‘ಮಾತಿನ ಮೊದಲು’ (2019), ‘ಸಂಸ್ಕೃತಿ ಮೀಮಾಂಸೆ’ (2020) ಇತ್ಯಾದಿ ಕೃತಿಗಳನ್ನು ಪ್ರಕಟಿಸಿದರು. ಇವುಗಳ ಜತೆ ಅವರು ತಾವೊ ದರ್ಶನವನ್ನು, ನಾಗಾರ್ಜುನನ ನುಡಿಕತೆಗಳನ್ನು ಹಾಗೂ ಸರಹಪಾದನ ಚರ್ಯಾಗೀತೆಗಳನ್ನು ತರ್ಜುಮೆ ಮಾಡಿದರು. ಈ ದಿಸೆಯಲ್ಲಿ ಅವರು ಕೈಗೊಂಡು ಪೂರೈಸಿದ ಮಹತ್ವದ ಕಾರ್ಯವೆಂದರೆ, ಇನ್ನೂರಕ್ಕೂ ಮಿಕ್ಕು ತತ್ವಪದಕಾರರ ಹಾಡುಗಳನ್ನು ಹಲವಾರು ಸಂಪುಟಗಳಲ್ಲಿ ಸಂಪಾದಿಸಿ ಕೊಟ್ಟಿದ್ದು; ಕರ್ನಾಟಕದ ಅಧ್ಯಯನಕ್ಕೆ ಹೊಸ ಆಕರಗಳನ್ನು ಒದಗಿಸುವುದಲ್ಲದೆ, ಅವನ್ನು ಖುದ್ದಾಗಿ ಅಧ್ಯಯನ ಮಾಡಿ ಅಧ್ಯಯನಕ್ಕೆ ಮಾದರಿಗಳನ್ನುಸೃಷ್ಟಿಸಿದ್ದು.

ತಮ್ಮ ಚಿಂತನೆ ಮತ್ತು ದಾರ್ಶನಿಕ ಹುಡುಕಾಟಗಳಲ್ಲಿ ಬೂದಾಳರು ಕೆಲವು ವಿಶಿಷ್ಟ ಪರಿಕಲ್ಪನೆಗಳನ್ನು ರೂಪಿಸಿದ್ದಾರೆ- ‘ಪ್ರಕ್ರಿಯಾ ಮೀಮಾಂಸೆ’ ‘ನಿಸರ್ಗಸಹಜ ವಿವೇಕ’ ‘ಬುದ್ಧನಡೆ’ ಇತ್ಯಾದಿ. ‘ಬುದ್ಧನಡೆ’ಯನ್ನು ‘ಯಾರಿಗೂ ಕೇಡುಮಾಡದೆ ಬಾಳಬಯಸುವ ಎಲ್ಲ ಮನುಷ್ಯರಿಗೆ ಹೊಳೆಯುವ ನಿಸರ್ಗವಿವೇಕ’ ಎಂದವರು ವ್ಯಾಖ್ಯಾನಿಸುತ್ತಾರೆ. ಅವರ ಚಿಂತನೆಗಳ ಹಿಂದೆ ಕನ್ನಡದ ಮಹತ್ವದ ವಿದ್ವಾಂಸರಾಗಿದ್ದ ಡಿ.ಆರ್.ನಾಗರಾಜ್ ಮುಂತಾದವರ ಪ್ರೇರಣೆಯಿದೆ. ಆದರೆ ಡಿ.ಆರ್. ಆರಂಭಿಸಿದ ಬೌದ್ಧಿಕ ಯಾನವು ಅವರ ಕೈಯಲ್ಲಿ ಬೇರೊಂದೇ ಆಯಾಮವನ್ನೂ ಕಸುವನ್ನೂ ಪಡೆದುಕೊಂಡಿದೆ. ಇದಕ್ಕೆ ಕಾರಣ ಅವರ ತಿರುಗಾಟಗಳು. ಕನ್ನಡದಲ್ಲಿ ಗ್ರಂಥಸ್ಥ ಮತ್ತು ಕ್ಷೇತ್ರಕಾರ್ಯದ ಅನುಭವದ ಮೇಲೆ ಬೆಳೆದ ವಿದ್ವತ್ ಮಾದರಿಗಳು ಕೆಲವೊಮ್ಮೆ ಪ್ರತ್ಯೇಕವಾಗಿ ನಿಲ್ಲುವುದುಂಟು. ಬೂದಾಳರಲ್ಲಿ ಈ ಎರಡೂ ಮಾದರಿಗಳು ಅರ್ಥಪೂರ್ಣವಾಗಿ ಕೂಡಿಕೊಳ್ಳುತ್ತವೆ. ವೈಯಕ್ತಿಕವಾಗಿ ನನಗೆ ಅವರೊಟ್ಟಿಗೆ ತತ್ವಪದ ಹಾಡಿಕೆಯನ್ನು ಕೇಳುತ್ತ ಹಲವಾರು ರಾತ್ರಿಗಳನ್ನು ಕಳೆವ ಅವಕಾಶ ಒದಗಿರುವುದುಂಟು. ಸಾಂಸ್ಕೃತಿಕ ವಿಶಿಷ್ಟವಾದ ಯಾವುದಾದರೂ ಆಚರಣೆ ಕರ್ನಾಟಕದ ಯಾವುದಾದರೂ ಮೂಲೆಯಲ್ಲಿ ಇದೆಯೆಂದಾದರೆ, ಕಾಣಲು ಅವರು ಧಾವಿಸುವರು. ದುಡಿವ ಜನರ ಸಾಂಸ್ಕೃತಿಕ ಲೋಕಗಳನ್ನು ಕಾಣುವ, ಜನರ ಜತೆ ಮಾತುಕತೆಯಾಡುವ ಅವರ ತವಕ-ಶ್ರದ್ಧೆ ಅಪೂರ್ವ.

ಸಾಂಸ್ಕೃತಿಕ ಹುಡುಕಾಟವು ಒಂದು ಬೌದ್ಧಿಕ ಮತ್ತು ಕ್ರಿಯಾತ್ಮಕ ಯಾನ. ಹೊಳೆದಡದಲ್ಲಿ ಧ್ಯಾನಸ್ಥ ಅವಸ್ಥೆಯಲ್ಲಿ ಒಬ್ಬರೇ ಕೂತು ಗಾಳಹಾಕಿ ಮೀನು ಹಿಡಿವ ಕೆಲಸವೂ ಹೌದು. ತಂಡವಾಗಿ ದೊಡ್ಡ ಬಲೆಯೊಂದಿಗೆ ಕಡಲಿಗಿಳಿದು ಮಾಡುವ ಮೀನುಗಾರಿಕೆಯೂ ಹೌದು. ಈ ದಿಸೆಯಲ್ಲಿ ಬೂದಾಳರು ಮಾಡುತ್ತಿರುವ ಪ್ರಯೋಗ ಮತ್ತು ಹುಡುಕಾಟ, ಸೃಷ್ಟಿಮಾಡಿರುವ ಪ್ರಮೇಯಗಳು, ನಮ್ಮ ತಲೆಮಾರಿನ ಹಲವರ ತುಡಿತಗಳನ್ನು ಪ್ರತಿನಿಧಿಸುತ್ತವೆ. ಅವರು ತಮ್ಮ ಚಿಂತನೆಯನ್ನು ಬರೀ ಪುಸ್ತಕ ರೂಪದಲ್ಲಿ ಪ್ರಕಟಿಸುತ್ತಿಲ್ಲ. ಕಟ್ಟೆಯ ಮೇಲೆ ಕೂತು ಹರಟುವಂತಹ ಮಾತುಕತೆಯ ಮೂಲಕವೂ ನೆರೆದ ನೆರವಿಗಳಲ್ಲಿ ತೋಂಡಿಯಾಗಿ ಹಂಚಿಕೊಳ್ಳುತ್ತಾರೆ. ಅವರ ಈ ಹುಡುಕಾಟ ಮತ್ತು ಹಂಚಿಕೆಗಳು ಮುಗಿದಿಲ್ಲ, ಪ್ರಕ್ರಿಯೆಯಲ್ಲಿವೆ. ಓದುಗರು ಅವರ ಚಿಂತನೆಗಳನ್ನು ಅರಿಯಬೇಕಿದೆ; ಸಮ್ಮತಿ-ಭಿನ್ನಮತ-ತಿದ್ದುಪಡಿಗಳ ಮೂಲಕ ಬೆಳೆಸಬೇಕಿದೆ. ಚಿಂತನೆ ಅಥವಾ ವಿದ್ವತ್ತು ಎಷ್ಟೇ ಘನವಾಗಿರಲಿ, ಓದುಗರಲ್ಲಿ ಅನುಸಂಧಾನಗೊಂಡು ತಕ್ಕ ಅರ್ಥವಂತಿಕೆ ಪಡೆದುಕೊಳ್ಳುವುದೇ ಅದು ಜೀವಂತವಾಗಿ ಬದುಕುವ ಉಪಕ್ರಮವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT