ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಪ್ರಜಾಪ್ರಭುತ್ವದಲ್ಲಿ ಪ್ರಜೆಯೇ ಗುಲಾಮ

Last Updated 22 ನವೆಂಬರ್ 2020, 9:30 IST
ಅಕ್ಷರ ಗಾತ್ರ

ಸ್ವಾತಂತ್ರ್ಯ, ಸಮಾನತೆ ಮತ್ತು ಪ್ರಜಾಪ್ರಭುತ್ವಗಳೆಲ್ಲ ಇದ್ದರೂ ಅವುಗಳನ್ನು ಅಂತರಂಗೀಕರಿಸಿಕೊಳ್ಳುವ ರೀತಿಯಲ್ಲಿ ನಮ್ಮ ಮನಸ್ಥಿತಿ ಪರಿವರ್ತನೆ ಆಗಿಲ್ಲ ಎಂಬುದಕ್ಕೆ ಎಷ್ಟು ಉದಾಹರಣೆಗಳನ್ನಾದರೂ ಕೊಡಬಹುದು. ಪೌರಾಣಿಕವಾಗಿ ಮತ್ತು ಐತಿಹಾಸಿಕವಾಗಿ ನಮ್ಮದು ಊಳಿಗಮಾನ್ಯ ಮತ್ತು ಗುಲಾಮಿ ಮನಸ್ಥಿತಿ. ಆಧುನಿಕ ಯುಗದಲ್ಲಿಯೂ ಆ ಮನಸ್ಥಿತಿ ನಮ್ಮನ್ನು ಬಿಟ್ಟು ಹೋಗುತ್ತಿಲ್ಲ.

ಈಗ ನಮ್ಮ ದೇಶದಲ್ಲಿ ಪ್ರಜೆಗಿಂತ ದೊಡ್ಡವರು ಯಾರೂ ಇಲ್ಲ. ಆದರೆ ಅದು ನಿಜವೇ?

ವರ್ಣಾಶ್ರಮದ ರೀತಿಯಲ್ಲಿ ಶ್ರೇಣೀಕರಣಗೊಂಡ ವ್ಯವಸ್ಥೆಯೇ ಇಂದಿಗೂ ನಮ್ಮ ಸಮಾಜವನ್ನು ಆಳುತ್ತಿದೆ. ರಾಜಕಾರಣಿಗಳು, ನ್ಯಾಯಾಧೀಶರು, ಅಧಿಕಾರಿಗಳು ಹೀಗೆ ಹಲವು ವರ್ಣಗಳು ಈಗ ನಮ್ಮಲ್ಲಿ ಇವೆ.ಪ್ರಜಾಪ್ರಭುತ್ವವನ್ನು ಕೂಡ ಊಳಿಗಮಾನ್ಯ ವ್ಯವಸ್ಥೆಗೆ ಒಗ್ಗಿಸಿ, ಬಗ್ಗಿಸಿಕೊಂಡ ನಾಗರಿಕ ವ್ಯವಸ್ಥೆ ನಮ್ಮದು.

ಭಾರತದಲ್ಲಿ ದೊಡ್ಡದೊಂದು ಅಧಿಕಾರಿ ವರ್ಗ ಇದೆ. ಐಎಎಸ್, ಐಪಿಎಸ್‌, ಐಎಫ್‌ಎಸ್‌ಗಳೆಂಬ ‘ಪ್ರತಿಷ್ಠಿತ ವರ್ಗ’ ಅದರ ಮೇಲ್ಪದರದಲ್ಲಿ ಇದೆ. ಈ ಅಧಿಕಾರಿಗಳಿಗೆ ತಕ್ಕಮಟ್ಟಿನ ಸಂಬಳ, ಸಾರಿಗೆ ಮತ್ತು ಇತರ ಸೌಲಭ್ಯಗಳು ಇವೆ. ಸಾರಿಗೆ ಮತ್ತು ಇತರ ಸೌಲಭ್ಯಗಳು ಬ್ರಿಟಿಷರು ನಮ್ಮನ್ನು ಆಳುತ್ತಿದ್ದಾಗ ಯುರೋಪಿನ ಅಧಿಕಾರಿಗಳಿಗೆ ಇದ್ದ ರೀತಿಯಲ್ಲಿಯೇ ಇವೆ. ಆದರೆ, ಇವರಿಗೆ ಈ ಸೌಲಭ್ಯಗಳನ್ನೆಲ್ಲ ಕೊಡುವವರು ಯಾರು? ಪ್ರಜೆಗಳ ಶ್ರಮದಿಂದ ಸೃಷ್ಟಿಯಾಗುವ ಸಂಪತ್ತು, ಅದರ ಮೇಲಿನ ತೆರಿಗೆಯ ಮೂಲಕವೇ ಇವನ್ನೆಲ್ಲ ಭರಿಸಲಾಗುತ್ತದೆ.

ಆದರೆ, ‘ಜನರ ಕಷ್ಟಕ್ಕೆ ಸ್ಪಂದಿಸುತ್ತೇವೆ, ನಮ್ಮ ಕಚೇರಿಯ ಬಾಗಿಲು ಜನರಿಗಾಗಿ ಸದಾ ತೆರೆದಿರುತ್ತದೆ’ ಎಂದೆಲ್ಲ ಈ ಅಧಿಕಾರಿ ವರ್ಗ ಆಗಾಗ ಹೇಳುವುದಿದೆ. ಹೀಗೆ ಹೇಳುವ ಅಧಿಕಾರಿಯೇ ಬಹಳ ಒಳ್ಳೆಯ ಅಧಿಕಾರಿ ಎಂದು ತೆರಿಗೆ ಕಟ್ಟುವ ಜನರೂ ಭಾವಿಸಿದ್ದಾರೆ ಎಂಬುದೇ ಇಲ್ಲಿನ ವಿಪರ್ಯಾಸ. ಸಂಬಳ, ಸೌಲಭ್ಯ ಕೊಟ್ಟು ತಾವೇ ಕೆಲಸಕ್ಕೆ ಇರಿಸಿರುವ ವ್ಯಕ್ತಿಯು ದರ್ಪ ಮೆರೆಯುತ್ತಿದ್ದಾನಲ್ಲ ಎಂದು ಪ್ರಜೆಗಳಿಗೆ ಅನ್ನಿಸುವುದೇ ಇಲ್ಲ.

ಜನರು ನೇಮಿಸಿದ ಸೇವಕ ವರ್ಗ ಎಂಬ ದೃಷ್ಟಿಯಲ್ಲಿ ನೋಡುವುದಾದರೆ ಅಧಿಕಾರಿಗಳು ಹೇಗೆಯೋ, ನ್ಯಾಯಾಧೀಶರೂ ಹಾಗೆಯೇ. ಆದರೆ, ನಮ್ಮ ನ್ಯಾಯಾಂಗ ವ್ಯವಸ್ಥೆಯೇ ವಿಮರ್ಶಾತೀತ ಎಂದು ಭಾವಿಸಲು ಬಹಳಷ್ಟು ಕಾರಣಗಳಿವೆ. ಅದರಲ್ಲಿ ಮುಖ್ಯವಾದುದು ನ್ಯಾಯಾಂಗದ ಕೈಯಲ್ಲಿ ಇರುವ ನ್ಯಾಯಾಂಗ ನಿಂದನೆ ಎಂಬ ಅಸ್ತ್ರ. ನ್ಯಾಯಾಂಗದ ವಿರುದ್ಧ ನೀವು ಏನಾದರೂ ಆರೋಪ ಮಾಡಿದರೆ, ಆ ಆರೋಪದ ಬಗ್ಗೆ ಅದೇ ನ್ಯಾಯಾಂಗ ವಿಚಾರಣೆ ನಡೆಸುತ್ತದೆ. ‘ಪ್ರಜೆ’ ಎಂಬ ಪರಿಕಲ್ಪನೆಯು ಹತ್ತಿರಕ್ಕೆ ಸುಳಿಯುವುದಕ್ಕೂ ಅವಕಾಶ ಇಲ್ಲದ ವ್ಯವಸ್ಥೆ ಇದು ಎಂದು ಅನಿಸುತ್ತದೆ.

ಪತ್ರಿಕಾರಂಗವು ಪ್ರಜಾಪ್ರಭುತ್ವ ವ್ಯವಸ್ಥೆಯ ನಾಲ್ಕನೇ ಸ್ತಂಭ ಎಂದು ಹೇಳಲಾಗುತ್ತದೆ. ಹಾಗೆ ಹೇಳುವುದಕ್ಕೆ ಯಾವುದೇ ಅಡ್ಡಿ ಇಲ್ಲ. ಆದರೆ, ಪತ್ರಿಕಾರಂಗಕ್ಕೆ ಅಥವಾ ಮಾಧ್ಯಮ ರಂಗಕ್ಕೆ ನಮ್ಮ ಸಂವಿಧಾನದಲ್ಲಿ ವಿಶೇಷ ಸವಲತ್ತುಗಳೇನೂ ಇಲ್ಲ. ಒಬ್ಬ ಪ್ರಜೆಗೆ ಇರುವ ಎಲ್ಲ ಹಕ್ಕುಗಳೂ ಪತ್ರಕರ್ತನಿಗೆ ಇವೆ. ಆದರೆ, ಪ್ರಜೆಗಿಂತ ತಾವು ಬಹಳ ಮೇಲೆ ಇರುವವರು ಎಂದು ಭಾವಿಸುವ ಪತ್ರಕರ್ತರೇ ಹೆಚ್ಚು. ಹಾಗಾಗಿ ಆಧುನಿಕ ವರ್ಣ ವ್ಯವಸ್ಥೆಯಲ್ಲಿ ಇಂತಹುದೊಂದು ವರ್ಗವೂ ಸೃಷ್ಟಿಯಾಗಿದೆ.

ಪ್ರಜಾಪ್ರಭುತ್ವ, ಸಮಾನತೆ ಮತ್ತು ಸ್ವಾತಂತ್ರ್ಯದ ಗಟ್ಟಿ ಪ್ರತಿಪಾದಕರಾಗಿ ಇರಬೇಕಾದವರು ಜನಪ್ರತಿನಿಧಿಗಳು ಮತ್ತು ರಾಜಕಾರಣಿಗಳು. ಏಕೆಂದರೆ, ಈ ವ್ಯವಸ್ಥೆಯನ್ನು ಅರ್ಥ ಮಾಡಿಕೊಂಡು ಜನರ ಸೇವಕರಾಗಿ ಇರಲು ನಿರ್ಧರಿಸಿದ ವರ್ಗ ಇದು. ಆದರೆ, ಗ್ರಾಮ ಪಂಚಾಯಿತಿಯ ಒಂದು ವಾರ್ಡ್‌ನ ಸದಸ್ಯ ಅಥವಾ ಸದಸ್ಯೆ, ಆ ವಾರ್ಡ್‌ನ ಎಲ್ಲರಿಗಿಂತ ತಾನು ದೊಡ್ಡವನು ಅಥವಾ ದೊಡ್ಡವಳು ಎಂದು ಭಾವಿಸುವುದಿಲ್ಲವೇ? ಈ ‘ದೊಡ್ಡತನ’ವು ಮುಂದಿನ ಹಂತಗಳಿಗೆ ಹೋದಂತೆ ಇನ್ನಷ್ಟು ದೊಡ್ಡದಾಗುತ್ತಾ ಹೋಗುತ್ತದೆ. ಶಾಸಕ, ಮಂತ್ರಿ, ಮುಖ್ಯಮಂತ್ರಿ, ಪ್ರಧಾನ ಮಂತ್ರಿ ಮುಂತಾದವರು ಯಾವುದೋ ಕಾಲದ ರಾಜ, ಮಹಾರಾಜ, ಚಕ್ರವರ್ತಿಗಳಿಗಿಂತ ಕಡಿಮೆ ಏನಲ್ಲ. ಕೆಲವೊಮ್ಮೆ ಅವರು ಅವತಾರ ಪುರುಷರೂ ಆಗಿಬಿಡಬಹುದು. ಇವರನ್ನು ಬದಿಗಿಟ್ಟರೂ, ನಮ್ಮಲ್ಲಿ ಜನರನ್ನು ಉದ್ಧಾರ ಮಾಡುವುದಕ್ಕೇ ಹುಟ್ಟಿದ ಅವತಾರಪುರುಷ/ಸ್ತ್ರೀಗಳೇನೂ ಕಡಿಮೆ ಇಲ್ಲ. ಇವರು ಕೂಡ ‘ಸಾಮಾನ್ಯ ಪ್ರಜೆ’ಗಿಂತ ಬಹಳ ದೊಡ್ಡವರು. ಹಾಗಾಗಿಯೇ ‘ಪ್ರಜೆ’ಯನ್ನು ಗುರುತಿಸಲು ನಾವು ‘ಸಾಮಾನ್ಯ ಪ್ರಜೆ’ ಎಂಬ ಉಪಾಧಿಯನ್ನೂ ಕಂಡುಕೊಂಡಿದ್ದೇವೆ.

ಪ್ರಜಾಪ್ರಭುತ್ವ, ಸ್ವಾತಂತ್ರ್ಯ, ಸಮಾನತೆಯನ್ನು ಹೀಗೆಲ್ಲ ಅಣಕಿಸಿದ, ಅವಮಾನಿಸಿದ, ಹಿಂಸಿಸಿದ ಬೇರೊಂದು ದೇಶ ಇದೆಯೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT