ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನುಡಿ ನಮನ | ಎಸ್. ಕೆ. ಭಗವಾನ್ - ಬಯಲ ದಾರಿ ಹಿಡಿದು ಹೋದ ‘ಗುರು’

Last Updated 20 ಫೆಬ್ರುವರಿ 2023, 22:15 IST
ಅಕ್ಷರ ಗಾತ್ರ

‘ದೊರೆ’ ಎಂದರೆ ರಾಜ. ‘ಭಗವಾನ್‌’ ಎಂದರೆ ದೇವರು. ನಿಮ್ಮ ಈ ಕಾಂಬಿನೇಷನ್‌ ಕೃಷ್ಣಾರ್ಜುನರ ಜೋಡಿಯಂತೆ ಎಂದು ಭಗವಾನ್‌ ಅವರ ಬಳಿ ನಾನು ಹೇಳಿಕೊಳ್ಳುತ್ತಿದ್ದ ಮಾತು ಈ ಸಂದರ್ಭದಲ್ಲಿ ಮೊದಲಿಗೆ ನೆನಪಾಗುತ್ತಿದೆ.

ನನ್ನ, ಅವರ ನಡುವೆ 50 ವರ್ಷಗಳ ಸುದೀರ್ಘ ಸಂಬಂಧ. ನನ್ನ ಈ ಸಿನಿಪಯಣದಲ್ಲಿ ಕೆಲವರು ಮನಸ್ಸಿನಲ್ಲಿ ಗುರು ಸ್ಥಾನದಲ್ಲಿ
ದ್ದಾರೆ. ಅದರಲ್ಲಿ ಜಿ.ವಿ. ಅಯ್ಯರ್‌, ಶ್ಯಾಮ್‌ ಬೆನಗಲ್‌, ಎಂ.ಎಸ್‌.ಸತ್ಯು ಜತೆ ಎಸ್‌.ಕೆ.ಭಗವಾನ್‌ ಅವರೂ ಇದ್ದಾರೆ. ಮುಂಬೈನಲ್ಲಿ ಬೆಳೆದ ನಾನು ಮತ್ತೆ ಕನ್ನಡದ ಮಣ್ಣಿಗೆ ಹೆಜ್ಜೆ ಇಟ್ಟ ಬಳಿಕ ಬೆಂಗಳೂರು, ಮೈಸೂರಿನಲ್ಲೇ ಹೆಚ್ಚು ಚಿತ್ರೀಕರಣ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಹಳೆ ಮೈಸೂರಿನ ಸಂಸ್ಕೃತಿ, ಸಂಸ್ಕಾರವನ್ನು ಕಲಿಸಿದವರೇ ಭಗವಾನ್‌. ಹೆಂಡತಿಯನ್ನೂ ಏಕವಚನದಲ್ಲಿ ಕರೆಯಬಾರದು ಎಂದು ಹೇಳುತ್ತಿದ್ದರು. ಅದರಂತೆ ನಡೆದುಕೊಳ್ಳುತ್ತಿದ್ದರು. ನಾನು ‘ಗುರುಗಳೇ’ ಎಂದು ಕರೆದರೆ ಸಂತೋಷಪಡುತ್ತಿದ್ದರು. ‘ಅನಂತು ಈ ಕಾಲದಲ್ಲಿ ಯಾರೂ ಗುರು ಅನ್ನುವುದಿಲ್ಲ, ಭಗವಾನ್‌ ಎಂದೇ ಕರೆ’ ಎನ್ನುತ್ತಿದ್ದರು.

ಉದಯ್‌ಕುಮಾರ್‌, ರಾಜ್‌ಕುಮಾರ್‌ ಹೀಗೆ ಕನ್ನಡ ಚಿತ್ರರಂಗದ ಹಿರಿಯರೆಲ್ಲರೂ ರಂಗಭೂಮಿಯಿಂದ ಬಂದವರು. ಇವರೆಲ್ಲರನ್ನೂ ಭಗವಾನ್‌ ತಮ್ಮ ಚಿತ್ರಗಳಲ್ಲಿ ಅದ್ಭುತವಾಗಿ ಬಳಸಿಕೊಂಡರು. ದೊರೆ ಅವರು ನಿಧನರಾದರೂ ಅವರ ಹೆಸರನ್ನು ಜೊತೆಯಲ್ಲಿಟ್ಟು
ಕೊಂಡೇ ಭಗವಾನ್‌ ಅವರು ಜೀವಿಸಿದ್ದರು. ರಾಜ್‌ಕುಮಾರ್‌ ಅವರ ಜೊತೆ ಮೂವತ್ತಕ್ಕೂ ಅಧಿಕ ಸಿನಿಮಾಗಳನ್ನು ಈ ಜೋಡಿ ನೀಡಿತು. ನನ್ನ ಜೊತೆ ಹತ್ತು ಸಿನಿಮಾಗಳು... ಹೀಗಾಗಿ ದೊರೆ–ಭಗವಾನ್‌ ಜೊತೆ ನಾನು ಸೆಕೆಂಡ್‌ ಹೈಯೆಸ್ಟ್‌ ಚಿತ್ರಗಳನ್ನು ಮಾಡಿದವನು.

ನಾನು ಕಲಾತ್ಮಕ ಚಿತ್ರಗಳ ಮೂಲಕ ಚಿತ್ರರಂಗಕ್ಕೆ ಬಂದವನು. ಅಂದು ಕಮರ್ಷಿಯಲ್‌ ಸಿನಿಮಾಗಳು ಮತ್ತು ಆರ್ಟ್‌ ಸಿನಿಮಾಗಳು ಎಂಬ ಎರಡು ಮಾದರಿಯಲ್ಲಿ ಸಿನಿಮಾಗಳನ್ನು ಗುರುತಿಸುತ್ತಿದ್ದರು. ‘ಸಂಕಲ್ಪ’ ಸಿನಿಮಾ ಬಿಡುಗಡೆಯಾಗಿ ಆರೇಳು ಸಿನಿಮಾಗಳ ಬಳಿಕ ‘ದೇವರ ಕಣ್ಣು’ ಎಂಬ ಕಮರ್ಷಿಯಲ್‌ ಸಿನಿಮಾ ಮಾಡಿದೆ. ಇದರಲ್ಲಿ ಲೋಕೇಶ್‌ ಅವರ ಜೊತೆ ನಾನು ನಟಿಸಿದ್ದೆ. ಇದು ಕಮರ್ಷಿಯಲ್‌ ಸರ್ಕಿಟ್‌ನಲ್ಲಿ ಹೆಸರು ತಂದುಕೊಟ್ಟಿತು. ಇದಾಗಿ ಕೆಲ ಪ್ರಾಜೆಕ್ಟ್ಸ್‌ ಬಳಿಕ ದೊರೆ–ಭಗವಾನ್‌ ಭೇಟಿ. ಇಲ್ಲಿಂದ ಶುರು ‘ಬಯಲು ದಾರಿ’ ಪಯಣ.

ಈ ಚಿತ್ರದಲ್ಲಿ ನನ್ನ ಜೊತೆಗಿದ್ದಿದ್ದು ಕಲ್ಪನಾ. ಆಗಲೇ ಅವರು ಸೂಪರ್‌ಸ್ಟಾರ್. ಆದರೆ ಸಿನಿಪಯಣದಲ್ಲಿ ಅದು ನನ್ನ ಆರಂಭವಾಗಿತ್ತು ಅಷ್ಟೆ. ಇದಾದ ಬಳಿಕ ದೊರೆ–ಭಗವಾನ್‌ ಜೋಡಿಯ ಜೊತೆ ಸಾಲು ಸಾಲು ಸಿನಿಮಾಗಳನ್ನು ಮಾಡಿದೆ. ‘ಚಂದನದ ಗೊಂಬೆ’, ‘ಬೆಂಕಿಯ ಬಲೆ’, ‘ಬಿಡುಗಡೆಯ ಬೇಡಿ’ ಹೀಗೆ ತರಾಸು ಅವರ ಕಾದಂಬರಿ ಆಧಾರಿತ ಸಿನಿಮಾಗಳಲ್ಲಿ ನಟಿಸಿದೆ. ಈ ನಾಲ್ಕು ಚಿತ್ರಗಳೂ ಸೂಪರ್‌ಹಿಟ್‌ ಆದವು. ಭಗವಾನ್‌ ಅವರ ನಿರ್ದೇಶನದ ಕೊನೆಯ ಸಿನಿಮಾ ‘ಆಡುವ ಗೊಂಬೆ’ಯಲ್ಲೂ ನಾನು ನಟಿಸಿದ್ದೆ. ಭಗವಾನ್‌ ಅವರಿಗಿದ್ದ taste for good music was excellent. ಇದರಿಂದಾಗಿ ಅವರ ಸಿನಿಮಾ ಹಾಗೂ ಅದರಲ್ಲಿದ್ದ ಹಾಡುಗಳು ಇನ್ನೂ ಜೀವಂತವಾಗಿವೆ. ಸಿನಿಮಾಗಳ ಸಂಖ್ಯೆ ಹೆಚ್ಚಾದಂತೆ ನಮ್ಮ ಬಾಂಧವ್ಯವೂ ಬೆಳೆಯಿತು.

ಭಗವಾನ್‌ ಎಂದರೆ Active ಪದಕ್ಕೆ ಪರ್ಯಾಯ. ತೆಳ್ಳಗಿನ ದೇಹ, ಚುರುಕಾದ ಓಡಾಟ, ಇನ್‌ಶರ್ಟ್‌; ಸೂಟು–ಬೂಟು, ಆಶಾವಾದಿ. ಅವರಲ್ಲಿ ಜೀವನೋತ್ಸಾಹ ತುಂಬಿ ತುಳುಕುತ್ತಿತ್ತು. ಅವರ ದಿರಿಸು ಯುವಕರನ್ನೂ ನಾಚಿಸುವಂತೆ ಇರುತ್ತಿತ್ತು. ನನಗೂ ಟಿಪ್‌ಟಾಪ್‌ ಆಗಿ ಇರುವಂತೆ ಸೂಚಿಸುತ್ತಿದ್ದರು. ‘ತೆರೆ ಮೇಲೆ ಕಾಣಿಸಿಕೊಳ್ಳುತ್ತೀರಿ. ಜನರಲ್ಲಿ ನಿಮ್ಮ ಬಗ್ಗೆ ಒಂದು ಛಾಪು ಮೂಡಿರುತ್ತದೆ. ಇದನ್ನು ಕೆಡಿಸಬಾರದು. ಸ್ಮಾರ್ಟ್‌ ಆಗಿ ಇರಬೇಕು’ ಎಂದು ನನಗೆ ಸೂಚಿಸುತ್ತಿದ್ದರು. 90 ವರ್ಷದ ಇಳಿವಯಸ್ಸಿನ
ವರೆಗೂ ತಮ್ಮ ಕಾರನ್ನು ತಾವೇ ಚಾಲನೆ ಮಾಡಿಕೊಂಡು ಚಿತ್ರೀಕರಣದ ಸ್ಥಳಕ್ಕೆ ಬರುತ್ತಿದ್ದರು.

ದೊರೆ ಅವರು ಮೂಲತಃ ಸಿನಿಮಾಟೋಗ್ರಫರ್‌. ನಿರ್ದೇಶನದ ಸಂದರ್ಭದಲ್ಲಿ ಚಿತ್ರಕಥೆ, ಸಾಹಿತ್ಯ, ಸಂಭಾಷಣೆಯ ಬಗ್ಗೆ ಭಗವಾನ್‌ ಹೆಚ್ಚು ಜವಾಬ್ದಾರಿ ವಹಿಸಿಕೊಳ್ಳುತ್ತಿದ್ದರು. ನಟನೆ, ನಿರ್ದೇಶನ ಸೇರಿದಂತೆ ಸಿನಿಮಾದ in and out ಅವರಿಗೆ ತಿಳಿದಿತ್ತು. ಈ ಕಾರಣದಿಂದಲೇ ಸುಮಾರು ಐದಾರು ದಶಕ ಸಿನಿಮಾರಂಗದಲ್ಲಿ ರಾರಾಜಿಸಿದರು.


***
‘ಎರಡು ಕನಸು’ ಸಿನಿಮಾದ ಬಳಿಕ ವರನಟ ಡಾ.ರಾಜ್‌ಕುಮಾರ್‌ ಅವರ ಕಾಲ್‌ಶೀಟ್‌ ಮೂರು ವರ್ಷಕ್ಕೆ ಭರ್ತಿಯಾಗಿತ್ತು. ಈ ಸಂದರ್ಭದಲ್ಲಿ ಪಾರ್ವತಮ್ಮ ರಾಜ್‌ಕುಮಾರ್‌ ಅವರು ದೊರೆ–ಭಗವಾನ್‌ ಅವರಿಗೆ ಕೃತಿಯೊಂದನ್ನು ನೀಡಿ ಸಿನಿಮಾ ಮಾಡಲು ಸೂಚಿಸಿದ್ದರು. ರಾಜ್‌ಕುಮಾರ್‌ ಅವರಿಲ್ಲದೆ ಈ ಸಿನಿಮಾ ಮಾಡಲ್ಲ ಎಂದು ಕುಳಿತಿದ್ದ ದೊರೆ–ಭಗವಾನ್‌ಗೆ, ‘ಕಥೆ ಚೆನ್ನಾಗಿದೆ. ಬೇರೆ ಹೀರೊ ಒಬ್ಬರನ್ನು ಹಾಕಿಕೊಂಡು ನೀವೇ ನಿರ್ದೇಶನ ಮಾಡಿ. ನಾನು ನಿರ್ಮಾಣ ಮಾಡುತ್ತೇನೆ’ ಎಂದಿದ್ದರಂತೆ ಪಾರ್ವತಮ್ಮ ಅವರು. ಇದುವೇ ಮುಂದೆ ‘ಬಯಲು ದಾರಿ’ಯಾದ ಕಥೆಯನ್ನು ಭಗವಾನ್‌ ಹೇಳಿಕೊಂಡಿದ್ದರು. ಈ ದಾರಿಯ ಪಯಣ ನೆನಪಿಸಿಕೊಂಡಿದ್ದಾರೆ ನಟ ಅನಂತನಾಗ್‌

****
ರಾಜ್ ಸ್ನೇಹಿ, ಕಾದಂಬರಿ ಪ್ರೇಮಿ

‘ಜೇಡರ ಬಲೆ’, ‘ಗೋವಾದಲ್ಲಿ ಸಿ.ಐ.ಡಿ 99’, ‘ಆಪರೇಷನ್‌ ಡೈಮಂಡ್‌ ರಾಕೆಟ್‌’, ‘ಆಪರೇಷನ್‌ ಜಾಕ್‌ಪಾಟ್‌ನಲ್ಲಿ ಸಿ.ಐ.ಡಿ 999’... ಹೀಗೆ ಡಾ.ರಾಜ್‌ಕುಮಾರ್‌ ಅವರ ಸೂಪರ್‌ಹಿಟ್‌ ಚಿತ್ರಗಳ ಪಟ್ಟಿ ಮಾಡಿ; ಅಲ್ಲಿ ದೊರೆ–ಭಗವಾನ್‌ ಛಾಪು ಎದ್ದುಕಾಣುತ್ತದೆ. ‘ಜೇಡರ ಬಲೆ’ ಮೂಲಕ ನಿರ್ದೇಶಕನ ಟೋಪಿ ತೊಟ್ಟ ಈ ಜೋಡಿ ಕನ್ನಡ ಚಿತ್ರರಂಗಕ್ಕೆ ಬಾಂಡ್‌ ಸಿನಿಮಾಗಳನ್ನು ಪರಿಚಯಿಸಿದ ಖ್ಯಾತಿಯೂ ಇದೆ. ಕನ್ನಡ ಚಿತ್ರರಂಗದಲ್ಲಿ ಆ ಕಾಲಕ್ಕೆ ಹೊಸ ಅಲೆಯನ್ನು ಎಬ್ಬಿಸಿದ ಚಿತ್ರಗಳವು.

‘ಕಸ್ತೂರಿ ನಿವಾಸ’, ‘ಗಿರಿಕನ್ಯೆ’, ‘ಜೀವನ ಚೈತ್ರ’, ‘ಎರಡು ಕನಸು’, ‘ನಾನೊಬ್ಬ ಕಳ್ಳ’ ಸೇರಿದಂತೆ ರಾಜ್‌ ಅವರ 32 ಚಿತ್ರಗಳನ್ನು ಈ ಜೋಡಿಯೇ ನಿರ್ದೇಶಿಸಿದೆ. ‘ಆಡುವ ಗೊಂಬೆ’ ಭಗವಾನ್‌ ಅವರು ನಿರ್ದೇಶಿಸಿದ ಕೊನೆಯ ಸಿನಿಮಾ.

ಮೈಸೂರಿನಲ್ಲಿ ಜನಿಸಿದ ಭಗವಾನ್‌ ಬೆಂಗಳೂರಿನಲ್ಲಿ ಶಿಕ್ಷಣ ಪಡೆದರು. ಹಿರಣ್ಣಯ್ಯ ಮಿತ್ರ ಮಂಡಳಿ ನಾಟಕಗಳ ಮೂಲಕ ಬಣ್ಣದ ಬದುಕನ್ನು ಆರಂಭಿಸಿದ್ದ ಅವರು, ‘ಭಾಗ್ಯೋದಯ’ ಸಿನಿಮಾ ಮೂಲಕ ನಟನಾಗಿ ಚಿತ್ರರಂಗಕ್ಕೆ ಹೆಜ್ಜೆ ಇಟ್ಟರು. ಚಿತ್ರರಂಗದಲ್ಲಿಯೇ ಬದುಕು ಅರಸಿ ಮದ್ರಾಸ್‌ಗೆ ಬಂದರು. ಅಲ್ಲಿ ನೆಲೆಗೊಳ್ಳಲು ಅವರು ತುಂಬಾ ಕಷ್ಟಪಟ್ಟರು. ಕ್ಯಾಮೆರಾಮೆನ್‌ ಆಗಿದ್ದ ದೊರೆರಾಜ್‌ ಅವರ ಸ್ನೇಹಭಾಗ್ಯ ಆ ದಿನಗಳಲ್ಲೇ ಅವರಿಗೆ ಸಿಕ್ಕಿತು. ಅವರೊಂದಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿ, ವರನಟ ಡಾ.ರಾಜ್‌ಕುಮಾರ್‌ ಅವರ ಹಲವು ಸಿನಿಮಾಗಳಿಗೆ ಸಂಭಾಷಣೆಕಾರರಾಗಿಯೂ ಕಾರ್ಯನಿರ್ವಹಿಸಿದ್ದರು. ನಂತರದಲ್ಲಿ ದೊರೆ–ಭಗವಾನ್‌ ಜೋಡಿ ನಿರ್ದೇಶನಕ್ಕೆ ಇಳಿದಿತ್ತು.

ರಾಜ್‌ಕುಮಾರ್‌ ಅವರ ಕುಟುಂಬಕ್ಕೆ ಚಿತ್ರಕಥೆಯನ್ನು ಒಪ್ಪಿಸುವ ಸವಾಲನ್ನು ಭಗವಾನ್ ಸಲೀಸಾಗಿ ನಿಭಾಯಿಸಿದ್ದಕ್ಕೆ ಹಲವು ಉದಾಹರಣೆಗಳಿವೆ. ‘ಕಸ್ತೂರಿ ನಿವಾಸ’ ಸಿನಿಮಾದ ಕಥೆ ತಮಿಳಿನಲ್ಲಿ ಸಿದ್ಧವಾಗಿತ್ತು. ಅದನ್ನು ಶಿವಾಜಿ ಗಣೇಶನ್ ಅವರೇ ತಿರಸ್ಕರಿಸಿದ್ದರು. ಅಂಥ ಸಿನಿಮಾವನ್ನು ಕನ್ನಡದಲ್ಲಿ ಮಾಡಲು ಒಪ್ಪಿಸಿದ ಜೋಡಿ ದೊರೆ–ಭಗವಾನ್. ಅದರಲ್ಲಿ ಬಳಸಿದ್ದ ತಂಜಾವೂರು ಬೊಂಬೆಯನ್ನು ತಮಿಳುನಾಡಿನ ಅಂಗಡಿಯಲ್ಲಿ ಹುಡುಕಿ ತರಲು ಪರದಾಡಿದ್ದ ಪ್ರಸಂಗವನ್ನೂ ಭಗವಾನ್ ಮೆಲುಕುಹಾಕುತ್ತಿದ್ದರು. ಆ ಸಿನಿಮಾ ಸೂಪರ್‌ ಹಿಟ್‌ ಆದದ್ದೇ ಅಲ್ಲದೆ, ಆಮೇಲೆ ತಮಿಳಿನಲ್ಲಿ ಶಿವಾಜಿ ಗಣೇಶನ್ ಅವರೇ ರೀಮೇಕ್ ಮಾಡಿದ್ದು ವಿಶೇಷ.

ದೊರೆ–ಭಗವಾನ್‌ ಅವರು ಕಾದಂಬರಿಪ್ರಿಯರಾಗಿದ್ದರು. ಪೌರಾಣಿಕ, ಕಾಲ್ಪನಿಕ ಚಿತ್ರಗಳು ಬರುತ್ತಿದ್ದ ಕಾಲದಲ್ಲಿ ಕಾದಂಬರಿ ಆಧಾರಿತ ಸಿನಿಮಾಗಳನ್ನು ತೆರೆಗೆ ತಂದ ಶ್ರೇಯಸ್ಸು ಈ ಜೋಡಿಯದ್ದು. ಮೊತ್ತಮೊದಲು ಕೃಷ್ಣಮೂರ್ತಿ ಪುರಾಣಿಕ ಅವರ ‘ಧರ್ಮ ದೇವತೆ’ ಕಾದಂಬರಿಯನ್ನು ‘ಕರುಣೆಯೇ ಕುಟುಂಬದ ಕಣ್ಣು’ ಎಂಬ ಸಿನಿಮಾವನ್ನಾಗಿ ಮಾಡಿದ ಈ ಜೋಡಿ, ನಂತರ ಸಾಲು ಸಾಲಾಗಿ ಮಹಿಳಾ ಕೇಂದ್ರಿತ, ಸಾಮಾಜಿಕ ವಿಷಯಗಳುಳ್ಳ ಇಪ್ಪತ್ನಾಲ್ಕು ಕಾದಂಬರಿ ಆಧಾರಿತ ಚಿತ್ರಗಳನ್ನು ತೆರೆಗೆ ತಂದಿತ್ತು. ಆದರ್ಶ ಫಿಲ್ಮ್‌ ಇನ್‌ಸ್ಟಿಟ್ಯೂಟ್‌ ಮೂಲಕ ಭಗವಾನ್‌ ಅವರು ಹಲವು ಪ್ರತಿಭೆಗಳನ್ನು ಚಿತ್ರರಂಗಕ್ಕೆ ಪರಿಚಯಿಸಿದರು.

-ನಿರೂಪಣೆ: ಅಭಿಲಾಷ್‌ ಪಿ.ಎಸ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT